AAP ಸರಕಾರಕ್ಕೆ ಅಸ್ತು: ಆಮ್ ಆದ್ಮಿ ಕೇಜ್ರಿವಾಲ್ ಸಿಎಂ
AAP ಅಧಿಕಾರದ ಗದ್ದುಗೆಯೇರುತ್ತಿರುವ ಈ ಸಂದರ್ಭದಲ್ಲಿ ಪಕ್ಷದ ಅಂಧಃಪತನದ ಕ್ಷಣಗಣನೆಯೂ ಪ್ರಾರಂಭವಾಗಿದೆ ಎಂದು ದಿಲ್ಲಿ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ. ಇನ್ನು ಬಿಜೆಪಿ ನಾಯಕ ಹರ್ಷವರ್ಧನ ಅವರು ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಗೆ All the best ಹೇಳಿದ್ದಾರೆ. (ಮಾನ್ಯತೆ ಪಡೆದ ಆಮ್ ಆದ್ಮಿಗೆ ಬಿಜೆಪಿ ಪ್ರಶ್ನೆ ಸುರಿಮಳೆ)
ಇತ್ತೀಚಿನ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಮತ ಗಳಿಕೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಆಮ್ ಆದ್ಮಿ ಪಕ್ಷವು ಸರಕಾರ ರಚನೆಗೆ ಒಲವು ತೋರಿ, ಜನಾಭಿಪ್ರಾಯ ಕೋರಿತ್ತು.
ಅದರಂತೆ ತಮ್ಮ ಪಕ್ಷ ಸರಕಾರ ರಚಿಸುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಅನಿವಾರ್ಯವಾಗಿ ಸರಕಾರ ರಚಿಸುತ್ತಿರುವುದಾಗಿ ಅರವಿಂದ್ ಕೇಜ್ರಿವಾಲ್ ಕೆಲವೇ ಕ್ಷಣಗಳ ಹಿಂದೆ ಪ್ರಕಟಿಸಿದ್ದಾರೆ. ಜಂತರ್ ಮಂತರ್ ನಲ್ಲಿ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಇದೇ ಗುರುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅದಕ್ಕೂ ಮುನ್ನ ಇಂದು ಮಧ್ಯಾಹ್ನ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿ ಸರಕಾರ ರಚನೆ ಅವಕಾಶ ಕೋರಲಿದ್ದಾರೆ. ಇಂದು ದೆಹಲಿಯ ಗಾಜಿಯಾಬಾದ್ನಲ್ಲಿ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಜ್ರಿವಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆಯ ಬಳಿಕ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಲು ಜನರು ಒಲವು ತೋರಿಸಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸಲು ನಿರ್ಧರಿಸಿದೆ ಎಂದು ತಿಳಿಸಿದರು.
ಗಮಮನಾರ್ಹವೆಂದರೆ ದೆಹಲಿ ಫಲಿತಾಂಶ ಹೊರಬಿದ್ದು ವಿಧಾನಸಭೆ ಡೋಲಾಯಮಾನವಾದಾಗ ಇದೇ ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ 'ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲಿ ಬಿಡಿ. ಹೇಗಿದ್ದರೂ ಭ್ರಷ್ಟಾಚಾರದಲ್ಲಿ ಇಬ್ಬರೂ ಸಮವಾಗಿ ತೂಗುತ್ತಾರೆ' ಎಂದು ಕುಹಕದ ಧ್ವನಿಯಲ್ಲಿ ಮಾತನಾಡಿದ್ದರು.
ಆದರೆ ಇಂದು ಅದೇ ಭ್ರಷ್ಟ ಕಾಂಗ್ರೆಸ್ ಜತೆ ಕೈಜೋಡಿಸಿ ಸರಕಾರ ರಚಿಸುತ್ತಿದ್ದಾರೆ. 'ಯಾವುದೇ ಕಾರಣಕ್ಕೂ ತಾನು ಅಲ್ಪಮತ ಸರಕಾರ ರಚಿಸುವುದಿಲ್ಲ ಮತ್ತು ಕಾಂಗ್ರೆಸ್ ಜತೆ ಕೈಜೋಡಿಸುವುದಿಲ್ಲ' ಎಂದು ಹೇಳಿದ್ದ ಬಿಜೆಪಿ ಮಾತ್ರ ಸೈಡ್ ವಿಂಗಿನಲ್ಲಿ ನಿಂತು ಮುಸಿಮುಸಿ ನಗುತ್ತಿದೆ.
ಬೆಂಬಲ ಷರತ್ತುಬದ್ಧ, ಯಾವುದೇ ಕ್ಷಣ ವಾಪಸ್: ಶೀಲಾ- ಇನ್ನು ಎಎಪಿ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷಿತ್ ಅವರು ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ಇದೇ ವೇಳೆ ಖಡಕ್ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಚುನಾವಣೆ ಸಂದರ್ಭದಲ್ಲಿ ದಿಲ್ಲಿ ಜನರಿಗೆ ಅನೇಕ ಅವಾಸ್ತವಿಕ ಭರವಸೆಗಳನ್ನು ನೀಡಿದೆ. ನಮ್ಮದು ಷರತ್ತುಬದ್ಧ ಬೆಂಬಲ ಎಂಬುದನ್ನು AAP ಮರೆಯಬಾರದು. ಆ ಪಕ್ಷವು ತನ್ನ ಭರವಸೆಗಳನ್ನು ಈಡೇರಿಸಲೇಬೇಕು. ಇಲ್ಲವಾದಲ್ಲಿ ಯಾವುದೇ ಕ್ಷಣ ಬೆಂಬಲ ವಾಪಸ್ ಎಂದು ಎಂದು ಎಚ್ಚರಿಸಿದ್ದಾರೆ.