ಕಿರಣ್ ಬೇಡಿ ಮೇಲೆ ಆಮ್ ಆದ್ಮಿ ಪಕ್ಷದ ಗಂಭೀರ ಆರೋಪ!
ನವದೆಹಲಿ, ಜ 31: ದೆಹಲಿಯಲ್ಲಿ ಒಂದೆಡೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೆ ಇತ್ತ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಪ್ರಚಾರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ದೆಹಲಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿ, ಆಮ್ ಆದ್ಮಿ ಪಕ್ಷದ ಮೇಲೆ ಎರಡನೇ ಕಂತಿನ ಪ್ರಶ್ನೆಯನ್ನು ಹೊರಹಾಕಿದೆ. ಇದಕ್ಕೆ ಡೋಂಟ್ ಕೇರ್ ಅಂದಿರುವ ಆಮ್ ಆದ್ಮಿ ಮುಖಂಡರು ಬಿಜೆಪಿಯ ಸಿಎಂ ಅಭ್ಯರ್ಥಿ ಕಿರಣ್ ಬೇಡಿ ಮೇಲೆ ಭಾರೀ ಆರೋಪ ಹೊರಿಸಿದ್ದಾರೆ. (ಕೇಜ್ರಿಗೆ ಮತ್ತೆ ಐದು ಪ್ರಶ್ನೆ ಎಸೆದ ಬಿಜೆಪಿ)
ಕಿರಣ್ ಬೇಡಿ ಚುನಾವಣಾ ಪ್ರಚಾರದ ವೇಳೆ ಮಹಿಳಾ ಮತದಾರರಿಗೆ ನೆಕ್ಲೆಸ್ ಉಡುಗೊರೆಯಾಗಿ ನೀಡುತ್ತಿದ್ದಾರೆ. ಈ ಮೂಲಕ ಬಿಜೆಪಿ ಮುಖಂಡರು ನೀತಿಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆಂದು ಆಮ್ ಆದ್ಮಿ ಪಕ್ಷದ ಮುಖಂಡರು ದೂರಿದ್ದಾರೆ.
ಮಾಧ್ಯಮದವರನ್ನು ಉದ್ದೇಶಿಸಿ ಶುಕ್ರವಾರ (ಜ 30) ಮಾತನಾಡುತ್ತಿದ್ದ ಆಪ್ ಮುಖಂಡ ಮನೀಶ್ ಸಿಸೋಡಿಯಾ, ಪೂರ್ವ ದೆಹಲಿ ವ್ಯಾಪ್ತಿಗೆ ಬರುವ ಪಥ್ಪರ್ ಗಂಜ್ ವಿಧಾನಸಭಾ ಕ್ಷೇತ್ರದ ರೋಡ್ ಶೋ ವೇಳೆಯಲ್ಲಿ ಬೇಡಿ ಮತದಾರರಿಗೆ ನೆಕ್ಲೆಸ್ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಕಿರಣ್ ಬೇಡಿ ತಮ್ಮ ಕಾರ್ಯಕರ್ತರ ಮೂಲಕ ನೇರವಾಗಿ ಮಹಿಳಾ ಮತದಾರರಿಗೆ ನೆಕ್ಲೆಸ್ ಹಂಚುತ್ತಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ನೇರ ಮತ್ತು ಗಂಭೀರ ಉಲ್ಲಂಘನೆಯಾಗಿದೆ ಎಂದು ಸಿಸೋಡಿಯಾ ಬಿಜೆಪಿ ಮೇಲೆ ಗೂಬೆ ಕೂರಿಸಿದ್ದಾರೆ. (ದೆಹಲಿ ಚುನಾವಣೆ ಅಖಾಡಕ್ಕಿಳಿದ ಜೇಟ್ಲಿ)
ಕಿರಣ್ ಬೇಡಿ ಪೂರ್ವ ದೆಹಲಿಯ ಕೃಷ್ಣನಗರ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 70 ಶಾಸಕರ ದೆಹಲಿ ಅಸೆಂಬ್ಲಿಗೆ ಫೆಬ್ರವರಿ ಏಳರಂದು ಚುನಾವಣೆ ನಡೆಯಲಿದ್ದು, ಫೆ 10ರಂದು ಮತಎಣಿಕೆ ನಡೆಯಲಿದೆ.
ಈ ಹಿಂದೆ ಅರವಿಂದ್ ಕೇಜ್ರಿವಾಲ್ ನೀಡಿದ್ದ ವಿವಾದಕಾರಿ ಹೇಳಿ ಏನು?
ಉಡುಗೊರೆ ತೆಗೆದುಕೊಳ್ಳಿ
ಅನ್ಯ ಪಕ್ಷಗಳು ನೀಡುವ ಉಡುಗೊರೆ, ಹಣವನ್ನು ಯಾವುದೇ ಮುಲಾಜಿಲ್ಲದೇ ತೆಗೆದುಕೊಳ್ಳಿ. ಆದರೆ ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮಾತ್ರ ಮತಹಾಕಿ. ನಮ್ಮ ಪಕ್ಷವನ್ನು ದೆಹಲಿಯಲ್ಲಿ ಅಧಿಕಾರಕ್ಕೆ ತನ್ನಿ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದರು.
ಸ್ಪಷ್ಟನೆ ನೀಡಿದ್ದ ಕೇಜ್ರಿವಾಲ್
ಕೇಜ್ರಿವಾಲ್ ಹೇಳಿಕೆಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದ ನಂತರ ಸ್ಪಷ್ಟನೆ ನೀಡಿದ್ದ ಕೇಜ್ರಿ, ಹಣಕ್ಕಾಗಿ ಮತವನ್ನು ಮಾರುವವರಿಗೆ ಮಾತ್ರ ಅನ್ವಯವಾಗುವಂತೆ ಈ ಹೇಳಿಕೆ ನೀಡಿದ್ದೆ. ಕಳೆದ ಚುನಾವಣೆಯಲ್ಲಿ ನಡೆದಂತೆ ಈ ಬಾರಿ ನಡೆಯಬಾರದು ಎನ್ನುವುದು ನನ್ನ ಉದ್ದೇಶ ಎಂದು ಕೇಜ್ರಿವಾಲ್ ಸ್ಪಷ್ಟನೆ ನೀಡಿದ್ದರು.
ಮುಳುವಾದ ಹೇಳಿಕೆ
ಅರವಿಂದ್ ಕೇಜ್ರಿವಾಲ್ ಅಂದು ನೀಡಿದ್ದ ಹೇಳಿಕೆಗೆ, ನೆಕ್ಲೆಸ್ ಆಮಿಷ/ಉಡುಗೊರೆ ಘಟನೆಗೂ ಈಗ ಆಮ್ ಆದ್ಮಿ ಪಕ್ಷ ಸಮರ್ಥನೆ ನೀಡಬೇಕಾಗಿರುವ ಅನಿವಾರ್ಯತೆಯಲ್ಲಿ ತಗಲಾಕೊಂಡಿದೆ.
ಹರಿದಾಡುತ್ತಿರುವ ಫೋಟೋ
ಮಹಿಳಾ ಮತದಾರರೊಬ್ಬರನ್ನು ಕಿರಣ್ ಬೇಡಿ ಆಲಂಗಿಸಿ ನೆಕ್ಲೆಸ್ ನೀಡುತ್ತಿದ್ದಾರೆ ಎನ್ನುವ ಆಮ್ ಆದ್ಮಿ ಪಕ್ಷದ ಆರೋಪದ (ಅಸ್ಪಷ್ಟವಾಗಿ ಗೋಚರಿಸುವ) ಫೋಟೋ ಸಾಮಾಜಿಕ ತಾಣದಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ಅಪ್ಲೋಡ್ ಆಗಿದೆ (ಚಿತ್ರಕೃಪೆ: NDTV)
ಕೇಜ್ರಿವಾಲ್ ಕ್ರೇಜ್ ಕಮ್ಮಿಯಾಗುತ್ತಿಲ್ಲ
ಬಿಜೆಪಿಯ ರೋಡ್ ಶೋ, ಅವಿರತ ಪ್ರಚಾರ ಸಭೆಯ ನಂತರವೂ ಆಮ್ ಆದ್ಮಿ ಪಕ್ಷದ ಕ್ರೇಜ್ ಯಥಾಸ್ಥಿತಿ ಮುಂದುವರಿದಿರುವುದು ಬಿಜೆಪಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ 5-6 ದಿನ ಬಾಕಿ ಇರುವಾಗ ಜೇಟ್ಲಿ/ಅಮಿತ್ ಶಾ ಮುಂದಿನ ನಡೆ ನಿರ್ಣಾಯಕ/ಕುತೂಹಲಕಾರಿ.