Video: ದೆಹಲಿಯಲ್ಲಿ ರೈತನ ಸಾವಿನ ಭಯಾನಕ ದೃಶ್ಯ!
ನವದೆಹಲಿ, ಜನವರಿ.26: ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯು ನವದೆಹಲಿಯನ್ನು ರಣರಂಗವಾಗುವಂತೆ ಮಾಡಿತು. ಭಾರತದ 72ನೇ ಗಣರಾಜ್ಯೋತ್ಸವದ ದಿನವೇ ರೈತರು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷದ ಮಧ್ಯೆ ರೈತರೊಬ್ಬರು ಮೃತಪಟ್ಟಿದ್ದಾರೆ.
ನವದೆಹಲಿಯ ಐಟಿಓ ಬಳಿಯಲ್ಲಿ ರೈತರು ನಡೆಸುತ್ತಿದ್ದ ಟ್ರ್ಯಾಕ್ಟರ್ ಜಾಥಾ ತೀವ್ರ ಸ್ವರೂಪ ಪಡೆದುಕೊಂಡಿತು. ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಟ್ರ್ಯಾಕ್ಟರ್ ಹರಿಸಲು ಹೋದ ರೈತರೊಬ್ಬರು ಮೃತಪಟ್ಟ ಘಟನೆಯೂ ನಡೆಯಿತು.
ಸಿಖ್ಖರ ಧರ್ಮ ಧ್ವಜಕ್ಕೂ, ರೈತ ಚಳವಳಿಗೂ ಸಂಬಂಧವಿಲ್ಲ
ಪ್ರತಿಭಟನಾನಿರತ ರೈತನ ಟ್ರ್ಯಾಕ್ಟರ್ ಪಲ್ಟಿಯಾಗಿರುವ ದೃಶ್ಯವು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಟ್ರ್ಯಾಕ್ಟರ್ ಅಪಘಾತಕ್ಕೆ ಸಂಬಂಧಿಸಿದ ಅದೇ ವಿಡಿಯೋವನ್ನು ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕೆಂಪುಕೋಟೆ ಮೇಲೆ ಹಾರಿದ ಸಿಖ್ ಧ್ವಜ:
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿದ್ದ 63 ದಿನಗಳ ಹೋರಾಟ ಮಂಗಳವಾರ ಹಿಂಸಾತ್ಮಕ ರೂಪ ಪಡೆದುಕೊಂಡಿತು.
#WATCH | A protesting farmer died after a tractor rammed into barricades and overturned at ITO today: Delhi Police
— ANI (@ANI) January 26, 2021
CCTV Visuals: Delhi Police pic.twitter.com/nANX9USk8V
ಟ್ರ್ಯಾಕ್ಟರ್ ಗಳಲ್ಲಿ ನುಗ್ಗಿದ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದರು. ಐತಿಹಾಸಿಕ ಆಚರಣೆಗೆ ಸಾಕ್ಷಿಯಾಗಬೇಕಿದ್ದ ನವದೆಹಲಿಯು ಮಂಗಳವಾರ ರೈತರ ಆಕ್ರೋಶದ ಕಿಚ್ಚಿಗೆ ಹಿಡಿದ ಕೈಗನ್ನಡಿ ಆಯಿತು. ತ್ರಿವರ್ಣಧ್ವಜ ಹಾರಾಡುವ ನವದೆಹಲಿ ಕೆಂಪುಕೋಟೆ ಮೇಲೆ ರೈತರು ನಿಶಾನ್ ಸಾಹೇಬ್ ಧ್ವಜವನ್ನು ಹಾರಿಸಿದರು.