ದೆಹಲಿಗೆ ಬಂದವರಿಗೆ 1 ವಾರ ಕಡ್ಡಾಯ ಹೋಂ ಕ್ವಾರಂಟೈನ್
ನವದೆಹಲಿ, ಜೂನ್ 04 : ಕೊರೊನಾ ವೈರಸ್ ಸೋಂಕನ್ನು ಹತೋಟಿಗೆ ತರಲು ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,645, ಇದುವರೆಗೂ 615 ಜನರು ಸಾವನ್ನಪ್ಪಿದ್ದಾರೆ.
ಬಸ್, ರೈಲು ಮತ್ತು ವಿಮಾನದಲ್ಲಿ ದೆಹಲಿಗೆ ಬರುವ ಎಲ್ಲರಿಗೂ ಒಂದು ವಾರದ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲಾ ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ.
ಈ ಹಿಂದೆ ದೆಹಲಿಗೆ ಬರುವವರು ಕ್ವಾರಂಟೈನ್ಗೆ ಒಳಗಾಗಬೇಕು. ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಂಡು ಬಂದರೆ ಸ್ಥಳೀಯ ಆರೋಗ್ಯಾಧಿಕಾರಿಗೆ ಕರೆ ಮಾಡಬೇಕು ಎಂದು ಸೂಚನೆ ಕೊಡಲಾಗಿತ್ತು. ಆದರೆ ಈಗ ಒಂದು ವಾರದ ಕ್ವಾರಂಟೈನ್ ಕಡ್ಡಾಯ ಮಾಡಿದೆ.
ದೆಹಲಿಯಲ್ಲಿ ವಾರದಿಂದ ವಾರಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಒಂದು ವಾರದಿಂದ ಪ್ರತಿದಿನ ಸುಮಾರು 1200 ಹೊಸ ಪ್ರಕರಣ ರಾಷ್ಟ್ರ ರಾಜಧಾನಿಯಲ್ಲಿ ದಾಖಲಾಗುತ್ತಿದೆ. ರಾಜ್ಯದಲ್ಲಿ ಈಗ 120 ಕಂಟೈನ್ಮೆಂಟ್ ಝೋನ್ಗಳಿವೆ.
ಆರ್ಥಿಕ ಚಟುವಟಿಕೆಗೆ ಸಹಕಾರ ನೀಡಲು ಲಾಕ್ ಡೌನ್ ನಿಯಮಗಳಲ್ಲಿ ಹಲವಾರು ವಿನಾಯಿತಿಗಳನ್ನು ದೆಹಲಿ ಸರ್ಕಾರ ನೀಡಿದೆ. ಆದರೆ ರಾಜ್ಯದ ಗಡಿಗಳನ್ನು ಜೂನ್ 1ರಿಂದಲೇ ಏಳು ದಿನಗಳ ಕಾಲ ಮುಚ್ಚಿದೆ. ಅಗತ್ಯ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ.
'ಒಂದು ವಾರದ ನಂತರ ಪರಿಸ್ಥಿತಿಯನ್ನು ಅವಲೋಕನ ಮಾಡಿ ಗಡಿಯನ್ನು ತೆರೆಯುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.