ದೆಹಲಿ : 64 ರೈಲುಗಳ ಸಂಚಾರಕ್ಕೆ ಅಡ್ಡಗಾಲಿಟ್ಟ ದಟ್ಟ ಮಂಜು
ನವೆಂಬರ್ 11, ನವೆದೆಹಲಿ : ದೆಹಲಿಯನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಮಂಜು ಮತ್ತು ಮಾಲಿನ್ಯ ಅಲ್ಲಿನ ಜನಜೀವನವನ್ನು ಪರೀಕ್ಷೆಗೊಡ್ಡುತ್ತಿದೆ. ಮಂಜಿನಿಂದಾಗಿ ದೆಹಲಿಯ ಸಂಚಾರ ವ್ಯವಸ್ಥೆ ಅಸ್ಥವ್ಯಸ್ತವಾಗಿದ್ದು ಜನರು ಪರ್ಯಾಯ ವ್ಯವಸ್ಥೆಗಳತ್ತ ಮುಖಮಾಡುವಂತೆ ಮಾಡಿದೆ.
ನವೆಂಬರ್ 11ರ ಶನಿವಾರವೂ ದೆಹಲಿಯಲ್ಲಿ ದಟ್ಟ ಮಂಜಿನ ಆಟ ಮುಂದುವರೆದಿದ್ದು, ಇದರಿಂದಾಗಿ 64 ರೈಲುಗಳು ಮತ್ತು ವಿಮಾನಗಳ ಹಾರಾಟ ವಿಳಂಬವಾಗಿದೆ. ದಟ್ಟ ಮಂಜಿನಿಂದ ಗೋಚರತೆ ಕಡಿಮೆ ಆಗಿದ್ದು, ಜನರು ಖಾಸಗಿ ವಾಹನಗಳನ್ನು ಬಳಸುವುದೂ ಅಪಾಯಕಾರಿಯಾಗಿ ಪರಿಣಮಿಸಿದೆ.
'ನಾಸಾ' ಚಿತ್ರಗಳಲ್ಲಿ ದೆಹಲಿ ಮಾಲಿನ್ಯದ ರಹಸ್ಯ ಬಯಲು
ಇತ್ತೀಚೆಗಷ್ಟೆ ಮಂಜಿನಿಂದಾಗಿ ದೆಹಲಿಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ 24 ವಾಹನಗಳು ಅಪಘಾತಕ್ಕೀಡಾಗಿರುವುದು ದೆಹಲಿ ಜನರಲ್ಲಿ ಮಂಜು ದಟ್ಟವಾಗಿದ್ದ ಸಮಯದಲ್ಲಿ ಖಾಸಗಿ ವಾಹನ ಬಳಸಲು ಹಿಂಜರಿಯುವಂತೆ ಮಾಡಿದೆ.
ಮಾಲಿನ್ಯತೆಯಲ್ಲಿ ಇಲ್ಲ ಏರು-ಪೇರು
ಕಳೆದ 5 ದಿನಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ನವೆಂಬರ್ 11ರ ಬೆಳಿಗ್ಗೆ ಮಂಜು ಸ್ವಲ್ಪ ಕಡಿಮೆ ಇತ್ತು ಇದು ದೆಹಲಿ ಜನಗಳಲ್ಲಿ ಅಲ್ಪ ಆಶಾಭಾವನೆ ಮೂಡಿಸಿತು. ಮಂಜು ಕಡಿಮೆ ಆಗಿದ್ದರೂ ಮಾಲಿನ್ಯ ಮಟ್ಟ ಕುಸಿಯದಿರುವುದು ಚಿಂತೆಯ ಗೆರೆಗಳು ಹಾಗೆ ಉಳಿಯುವಂತೆ ಮಾಡಿದೆ.
ಪಿಎಂ ಕಡಿಮೆ ಮಾಡಲು ಸಾಹಸ
ದೆಹಲಿಯ ಪರಿಸರ ಸಚಿವರ ಆದೇಶದಂತೆ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆಯು ಮಂಜಿನ ಸಾಂದ್ರತೆ ಕಡಿಮೆ ಮಾಡಲು ಹೆಲಿಕಾಪ್ಟರ್ ಮೂಲಕ ದೆಹಲಿಯ ಮೇಲೆ ನೀರು ಸುರಿಯಲಿದ್ದಾರೆ. ಇದು ಮಂಜಿನ ಸಾಂದ್ರತೆ ಕಡಿಮೆ ಮಾಡುವುದಲ್ಲದೆ ಗಾಳಿಯಲ್ಲಿನ ವಿಷಕಾರಿ ಕಣಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
12 ವಾಹನಗಳ ಸರಣಿ ಅಪಘಾತ
ಕೇವಲ ದೆಹಲಿ ಮಾತ್ರವಲ್ಲ ಉತ್ತರ ಭಾರತದ ಕೆಲವು ರಾಜ್ಯಗಳು ಮಂಜಿನ ಸಮಸ್ಯೆಯನ್ನು ಎದುರಿಸುತ್ತಿವೆ. ಯಮುನಾ ಎಕ್ಸ್ಟ್ರೆಸ್ ವೇ ದುರ್ಘಟನೆಯ ನಂತರದ ದಿನವೇ ಅದೇ ಮಾದರಿಯ ಸರಣಿ ಅಪಘಾತ ಹರಿಯಾಣ ರಾಜ್ಯದ ಪಲ್ವಾಲ್ ನಲ್ಲಿ ನಡೆದಿದ್ದು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಪಲ್ವಾಲ್ ನ ಹೈವೆಯಲ್ಲಿ ಸ್ಕಾರ್ಪಿಯೊ ಒಂದು ಮುಂದಿನ ಲಾರಿಗೆ ಗುದ್ದಿದೆ ನಂತರ ಒಂದರ ಹಿಂದೊಂದರಂತೆ 12 ವಾಹನಗಳು ಪರಸ್ಪರ ಗುದ್ದಿಕೊಂಡು ಅಪಘಾತಕ್ಕೆ ಈಡಾಗಿವೆ. ಈ ಸಮಯದಲ್ಲಿ ಮಂಜು ಹೆಚ್ಚಿದ್ದು, ಕೇವಲ 10 ಮೀಟರ್ ವರೆಗೆ ಗೋಚರತೆ ಇತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಗುರ್ ಗಾಂವ್ ಮತ್ತು ಫರಿದಾಬಾದ್ ಕೂಡ ಮಲಿನ
ಗುರ್ ಗಾಂವ್ ಮತ್ತು ಫರೀದಾಬಾದ್ ಕೂಡ ಮಾಲಿನ್ಯದ ವಿಚಾರದಲ್ಲಿ ದೆಹಲಿಗೆ ಸನಿಹದಲ್ಲಿದೆ ಎಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಹರಿಯಾಣದಲ್ಲಿ ಸಹ ಮಂಜಿನ ಸಾಂದ್ರತೆ ಹೆಚ್ಚಿದ್ದು, ಅಲ್ಲಿಯೂ ಕೂಡ ವಾಯುಮಾಲಿನ್ಯ ಮೇರೆ ಮೀರುತ್ತಿದೆ.