Breaking: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್: ಕೇಜ್ರಿವಾಲ್
ನವದೆಹಲಿ, ಏಪ್ರಿಲ್ 19: ದೆಹಲಿಯಲ್ಲಿ 6 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ ವಿಧಿಸಿರುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಗಳ ಅವಧಿಯಲ್ಲಿ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು, ಅಗತ್ಯ ಸೇವೆಗಳಲ್ಲಿ ವ್ಯತ್ಯಯವಿಲ್ಲ, ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಾಗಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿ ನಿತ್ಯ 25 ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ವಿಧಿಸಲಾಗಿದೆ. ಮದುವೆಗಳಿಗೆ ಅವಕಾಶ ಮಾಡಿಕೊಡಲಾಗುವುದು ಆದರೆ 50 ಜನರಿಗೆ ಮಾತ್ರ ಅವಕಾಶವಿರುತ್ತದೆ. ಇನ್ನುಳಿದಂತೆ ತುರ್ತು ಸೇವೆಗಳು ಲಭ್ಯವಿರಲಿವೆ.
ದೆಹಲಿಯಲ್ಲಿ ಖಾಸಗಿ ಕಚೇರಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 25,462 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಅನಿವಾರ್ಯ ಕಾರಣಗಳಿಂದ ಲಾಕ್ಡೌನ್ ವಿಧಿಸಲಾಗಿದೆ ಎಂದಿದ್ದಾರೆ.
ವಲಸೆ ಕಾರ್ಮಿಕರ ಕುರಿತು ಚರ್ಚೆ ನಡೆಸಲಾಗಿದ್ದು, ಅವರಿಗೆ ಯಾವುದೇ ಕೆಟ್ಟ ಅನುಭವವಾಗದಂತೆ ನೋಡಿಕೊಳ್ಳಲಾಗುತ್ತದೆ. ದೆಹಲಿ ಸರ್ಕಾರ ಈ ಹಿಂದೆ ಘೋಷಿಸಿದ್ದ ವಾರಾಂತ್ಯ ಕರ್ಫ್ಯೂ ಸೋಮವಾರ ಬೆಳಗ್ಗೆ 5 ಗಂಟೆಗೆ ಮುಕ್ತಾಯಗೊಂಡಿದೆ.
ಈ ಆರು ದಿನಗಳಲ್ಲಿ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ, ಈ ಲಾಕ್ಡೌನ್ ಸಂದರ್ಭವನ್ನು ಆಮ್ಲಜನಕ ಶೇಖರಣೆ, ಔಷಧಗಳ ಶೇಖರಣೆಗೆ ಬಳಕೆ ಮಾಡಲಾಗುತ್ತದೆ. ಪ್ರತಿಯೊಬ್ಬರೂ ಲಾಕ್ಡೌನ್ ನಿಯಮ ಪಾಲಿಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ.
ಲಾಕ್ಡೌನ್ಗೆ ಸಂಬಂಧಪಟ್ಟಂತೆ ದೆಹಲಿ ಸರ್ಕಾರ ಇನ್ನು ಕೆಲವೇ ಹೊತ್ತಿನಲ್ಲಿ ವಿಸ್ತೃತ ಆದೇಶ ಹೊರಡಿಸಲಿದೆ. ದೆಹಲಿಯಲ್ಲಿನ ಜನರ ಆರೋಗ್ಯ ವ್ಯವಸ್ಥೆ ತೀವ್ರ ಹದಗೆಟ್ಟು ಹೋಗಿದ್ದು, ನಗರ ಒತ್ತಡದಲ್ಲಿದೆ. ಆರೋಗ್ಯ ವ್ಯವಸ್ಥೆಯ ಕುಸಿತವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ದೆಹಲಿಯಲ್ಲಿ 100 ಐಸಿಯು ಹಾಸಿಗೆಗಳು ಮಾತ್ರ ಖಾಲಿ ಇವೆ: ಕೇಜ್ರಿವಾಲ್
ಮುಂದಿನ 6 ದಿನಗಳಲ್ಲಿ ದೆಹಲಿಯಲ್ಲಿ ಹೆಚ್ಚಿನ ಹಾಸಿಗೆಗಳ ವ್ಯವಸ್ಥೆಗಳನ್ನು ಕೋವಿಡ್ ಸೋಂಕಿತ ರೋಗಿಗಳಿಗೆ ಮಾಡುತ್ತೇವೆ. ನಮಗೆ ಸಹಾಯ ಮಾಡಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಲಾಕ್ಡೌನ್ ಅವಧಿಯನ್ನು ಆಮ್ಲಜನಕ, ಔಷಧಿ ವ್ಯವಸ್ಥೆ ಮಾಡಲು ಬಳಸಲಾಗುತ್ತದೆ. ಪ್ರತಿಯೊಬ್ಬರೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸಿ ಎಂದು ಕೇಜ್ರಿವಾಲ್ ಮನವಿ ಮಾಡಿಕೊಂಡರು.
ವಲಸೆ ಕಾರ್ಮಿಕರಿಗೆ ಮನವಿ: ಇದೇ ಸಂದರ್ಭದಲ್ಲಿ ವಲಸೆ ಕಾರ್ಮಿಕರನ್ನು ವಿಶೇಷವಾಗಿ ಮನವಿ ಮಾಡಿಕೊಂಡ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇದು ಸಣ್ಣ ಅವಧಿಯ ಲಾಕ್ಡೌನ್ ಅಷ್ಟೇ, ಕೇವಲ 6 ದಿನಗಳವರೆಗೆ ಮಾತ್ರ, ದೆಹಲಿ ಬಿಟ್ಟು ಹೋಗಬೇಡಿ, ಈ ಲಾಕ್ಡೌನ್ ಅವಧಿಯನ್ನು ವಿಸ್ತರಿಸಬೇಕಾದ ಅವಶ್ಯಕತೆ ಬರಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ, ಸರ್ಕಾರ ನಿಮ್ಮ ರಕ್ಷಣೆಗಿದೆ ಎಂದು ಕೇಳಿಕೊಂಡಿದ್ದಾರೆ.
ವಿನಾಯಿತಿ:ಮಾನ್ಯ ಹೊಂದಿರುವ ಗುರುತು ಚೀಟಿ ತೋರಿಸಿದರೆ ಖಾಸಗಿ ವೈದ್ಯಕೀಯ ಸಿಬ್ಬಂದಿಗೆ, ವೈದ್ಯರ ಪ್ರಿಸ್ಕ್ರಿಪ್ಷನ್ ತೋರಿಸಿದರೆ ಗರ್ಭಿಣಿಯರಿಗೆ, ರೋಗಿಗಳ ಜೊತೆ ಆಸ್ಪತ್ರೆಗೆ ಹೋಗುವವರಿಗೆ, ಕೊರೊನಾ ಪರೀಕ್ಷೆ, ಲಸಿಕೆ ಪಡೆಯಲು ಹೋಗುವವರಿಗೆ ಸೂಕ್ತ ದಾಖಲೆಗಳನ್ನು ತೋರಿಸಿದರೆ ಲಾಕ್ಡೌನ್ಸಮಯದಲ್ಲಿ ಪ್ರಯಾಣಕ್ಕೆ ವಿನಾಯ್ತಿಯಿರುತ್ತದೆ.