ತಜಕಿಸ್ತಾನ ಭೂಕಂಪ, ದೆಹಲಿ ಸೇರಿ ಉತ್ತರ ಭಾರತದೆಲ್ಲೆಡೆ ನಡುಗಿದ ಭೂಮಿ
ನವದೆಹಲಿ,ಫೆಬ್ರವರಿ 13: ತಜಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತವೇ ನಲುಗಿದೆ.
ಜಮ್ಮು ಮತ್ತು ಕಾಶ್ಮೀರ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನವಾಗಿದೆ.ಪಂಜಾಬ್ ನ ಅಮೃತಸರ, ದೆಹಲಿ, ಕಾಶ್ಮೀರ ಕಣಿವೆ, ಉತ್ತರ ಪ್ರದೇಶದ ಕೆಲ ಭಾಗಗಳಲ್ಲಿ ರಾತ್ರಿ 10.34ರ ವೇಳೆ ಭೂಮಿ ಕಂಪಿಸಿದೆ. ಅಮೃತಸರದಲ್ಲಿ ರಿಕ್ಟರ್ ಮಾಪನದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ.
ಭೂಮಿಯ ಮೇಲ್ಮೈನಿಂದ 74 ಕಿ.ಮೀ ಆಳದಲ್ಲಿ ಕಂಪನದ ಬಿಂದು ಪತ್ತೆಯಾಗಿದೆ. 10.30ರ ಸುಮಾರಿಗೆ ಕಂಪಿಸಿದ್ದರಿಂದ ಮನೆಯೊಳಗಿದ್ದ ಜನರೆಲ್ಲಾ ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ.
ಪ್ರಬಲ ಭೂಕಂಪನ: ಕಂಗಾಲಾಗಿ ಮನೆಯಿಂದ ಹೊರಬಂದ ಜನರು
ತಜಕಿಸ್ತಾನದ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಾಶಾಸ್ತ್ರ ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ.ಕೇಂದ್ರ ಬಿಂದು ತಜಕಿಸ್ತಾನವಾಗಿತ್ತು, ಇದು ಶ್ರೀನಗರದಿಂದ 450 ಕಿ.ಮೀ ದೂರದಲ್ಲಿದೆ. ಭೂಕಂಪ 74 ಅಡಿ ಆಳದಲ್ಲಿ ಸಂಭವಿಸಿದೆ.
ಕೆಲವು ಸೆಕೆಂಡುಗಳ ಕಾಲ ದೆಹಲಿಯಲ್ಲಿ ಭಾರಿ ಶಬ್ದ ಕೇಳಿಸಿದೆ. ಯಾವುದೇ ಆಸ್ತಿ ಪಾಸ್ತಿ ನಷ್ಟವಾಗಿರುವ ಕುರಿತು ಇನ್ನೂ ವರದಿಯಾಗಿಲ್ಲ.