ನಿರ್ಭಯಾ ಘಟನೆಗೆ 5 ವರ್ಷ: ಆ ದಿನ ಮರೆಯುವವರ್ಯಾರು?!
ನವದೆಹಲಿ, ಡಿಸೆಂಬರ್ 16: ಇಂದು ಡಿಸೆಂಬರ್ 16! ಆ ದಿನ ಭಾರತೀಯರಿಗೆ ಹೇಗೆ ತಾನೇ ಮರೆಯೋದಕ್ಕೆ ಸಾಧ್ಯ? ನವದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿ 'ನಿರ್ಭಯಾ(23)' ಮೇಲೆ ನಡೆದ ಅಮಾನುಷ ಕೃತ್ಯವನ್ನು ನೆನೆದರೆ ಕಲ್ಲೂ ಕರಗಬೇಕು! ಐದು ವರ್ಷಗಳೇ ಸಂದರೂ ಆಕೆಯ ನೆನಪಿನ್ನೂ ಜೀವಂತ.
ಆಕೆಯ ಮೇಲೆರಗಿ ಮೃಗಗಳಿಗಿಂತಲೂ ಕೀಳಾಗಿ ವರ್ತಿಸಿದ ಆ ಆರು ಜನರಲ್ಲಿ ಒಬ್ಬ(ಮೊಹ್ಮದ್ ಅಫ್ರೋಜ್) ಬಾಲಾಪರಾಧಿ ಎಂಬ ಕಾರಣಕ್ಕೆ ಮೂರೇ ವರ್ಷ ಶಿಕ್ಷೆ ಅನುಭವಿಸಿ ಜೈಲಿನಿಂದ ಹೊರಬಂದಿದ್ದಾನೆ. ರಾಮ್ ಸಿಂಗ್ ಎಂಬುವವನು ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ. ಇನ್ನುಳಿದ ನಾಲ್ವರಿಗೆ ಅಂದರೆ ಅಕ್ಷಯ್, ಪವನ್, ವಿನಯ್ ಶರ್ಮಾ ಮತ್ತು ಮುಕೇಶ್ ಗೆ ಇದೇ ವರ್ಷ(2017) ಮೇ 5 ರಂದು ದೆಹಲಿ ಹೈಕೋರ್ಟ್ ಗಲ್ಲುಶಿಕ್ಷೆನೀಡಿದೆ.
ನಿರ್ಭಯಾ ಪ್ರಕರಣ ವಿಶ್ವದ ಗಮನವನ್ನು ಭಾರತದತ್ತ ಸೆಳೆದಿದ್ದಲ್ಲದೆ, ದೆಹಲಿಗೆ ರೇಪ್ ಕ್ಯಾಪಿಟಲ್ ಎಂಬ ಕುಖ್ಯಾತಿಯನ್ನು ಕೊಟ್ಟಿದ್ದಕ್ಕೆ ಕಾರಣವಿದೆ. ಆ ಅತ್ಯಾಚಾರಿಗಳು ನಿರ್ಭಯಾ ಎಂಬ ಹೆಣ್ಣು ಮಗಳಿಗೆ ನೀಡಿದ ಆ ಪರಿ ಚಿತ್ರಹಿಂಸೆ ಯಾವ ಹೆಣ್ಣಿಗೂ ಬಾರದಿರಲಿ ಎಂದು ಕೋರಿಕೊಳ್ಳುವಷ್ಟರಮಟ್ಟಿಗೆ ಆ ಧುರುಳರು ಮೃಗೀಯವಾಗಿ ವರ್ತಿಸಿದ್ದರು.
ಆ ದುಷ್ಟರನ್ನು ಜೀವಂತವಾಗಿ ಸುಡಬೇಕು: ನಿರ್ಭಯಾಳ ಕೊನೆ ಹೇಳಿಕೆ
ತನ್ನ ಸ್ನೇಹಿತನೊಂದಿಗೆ ಸಿನೆಮಾ ನೋಡಿಕೊಂಡು ವಾಪಾಸಾಗುತ್ತಿದ್ದ ಅರೆವೈದ್ಯಕೀಯ ವಿದ್ಯಾರ್ಥಿನಿ, ಬಸ್ ವೊಂದನ್ನು ಹತ್ತಿಕೊಂಡಿದ್ದಳು. ಆ ಬಸ್ಸಿನಲ್ಲಿದ್ದ ಆರುಜನ ಪಾಪಿಗಳು ಬಸ್ಸನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ಗೆಳೆಯನನ್ನೂ ಚೆನ್ನಾಗಿ ಥಳಿಸಿದ್ದರು. ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೆ, ಕಬ್ಬಿಣದ ಸಲಾಕೆಯಿಂದ ಆಕೆಯ ಗುಪ್ತಾಂಗಳ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದಾಗಿ ಪ್ರಜ್ಞೆ ಕಳೆದುಕೊಂಡಿದ್ದ ಆಕೆಯನ್ನು ನಂತರ ಆಸ್ಪತ್ರೆಗೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದಿದ್ದಾಗ ಆಕೆಯನ್ನು ಸಿಂಗಪುರದ ಆಸ್ಪತ್ರೆಯೊಂದಕ್ಕೆ ರವಾನಿಸಲು ಸರ್ಕಾರ ನಿರ್ಧರಿಸಿತ್ತಾದರೂ, ಆಸ್ಪತ್ರೆಗೆ ಸೇರಿಸುವ ಮೊದಲೇ ಅಂದರೆ ಡಿ.29 ರಂದು ಆಕೆ ಅಸುನೀಗಿದ್ದಳು.
ಆಕೆಯ ಸಾವಿನ ನಂತರ ಭಾರತದಾದ್ಯಂತ ಮಹಿಳೆಯರ ರಕ್ಷಣೆಗೆ ಬಿಗಿ ಕಾನೂನು ಜಾರಿಯಾಗಬೇಕು, ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆಯಾಗಬೇಕು ಎಂಬ ಕೂಗು ಎದ್ದಿತ್ತು. ನಂತರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಿದ್ದನ್ನು ದೇಶ ನಿರಾಳತೆಯಿಂದ ಸ್ವಾಗತಿಸಿತ್ತಾದರೂ, ಬಾಲಾಪರಾಧಿಗೆ ಕೇವಲ ಮೂರು ವರ್ಷ ಶಿಕ್ಷೆ ಏಕೆ ಎಂಬ ಕುರಿತು ಇಂದಿಗೂ ಅಸಮಾಧಾನ ಇದ್ದೇ ಇದೆ.