ಜುಲೈ 14 ರಂದು ಚೀನಾ-ಭಾರತ ಕಮಾಂಡರ್ ನಡುವೆ 4ನೇ ಹಂತದ ಮಾತುಕತೆ
ದೆಹಲಿ, ಜುಲೈ 14: ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ದೇಶದ ಮಿಲಿಟರಿ ಕಮಾಂಡರ್ಗಳು ಪೂರ್ವ ಲಡಾಖ್ನ ಚುಶುಲ್ನಲ್ಲಿ ಮಂಗಳವಾರ ನಾಲ್ಕನೇ ಹಂತದ ಸಭೆ ಸೇರಲಿದ್ದಾರೆ.
ಎರಡು ಸೈನ್ಯಗಳ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಮುಂದಿನ ಹಂತದ ವಿಲೇವಾರಿ ಕುರಿತು ಈ ಸಭೆಯಲ್ಲಿ ಮಾತುಕತೆ ನಡೆಸಲಿದ್ದು, ಗಡಿಯ ಉದ್ವಿಗ್ನತೆಯನ್ನು ಕಡಿಮೆ ಮಾಡುವತ್ತ ಗಮನ ಹರಿಸಲಿದೆ ಎಂದು ತಿಳಿದು ಬಂದಿದೆ.
ಗಡಿಯಿಂದ ಹಿಂದೆ ಸರಿದ ಚೀನಾ: ಇಂದು ಮತ್ತೊಂದು ಸುತ್ತಿನ ಚರ್ಚೆ!
ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘಟನೆ ಬಳಿಕ ವಿವಾದಾತ್ಮಕ ಗಡಿ ಪ್ರದೇಶದಿಂದ ಉಭಯ ದೇಶಗಳು ಮೊದಲ ಹಂತದಲ್ಲಿ ಸೇನೆಯನ್ನು ಹಿಂದಕ್ಕೆ ಪಡೆದಿವೆ. ಈ ಬೆಳವಣಿಗೆ ಬಳಿಕ ಮೊದಲ ಬಾರಿಗೆ ಸೇನೆ ಕಮಾಂಡರ್ಗಳ ನಡುವೆ ಚರ್ಚೆ ಸಹಜವಾಗಿ ಕುತೂಹಲ ಮೂಡಿಸಿದೆ.
ಚೀನಾ ಮತ್ತು ಭಾರತದ ಎಲ್ಲಾ ಘರ್ಷಣೆ ಪ್ರದೇಶಗಳಲ್ಲಿನ ಸೈನ್ಯವನ್ನು ಮತ್ತಷ್ಟು ತೆಳುವಾಗಿಸುವುದು ಮತ್ತು ಎಲ್ಎಸಿಯ ಉದ್ದಕ್ಕೂ ಇರುವ ನೆಲೆಗಳಲ್ಲಿ ಫಿರಂಗಿ ಮತ್ತು ಸೇನೆಯನ್ನು ಕಡಿಮೆಗೊಳಿಸುವ ಕುರಿತು ಈ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ತಿಳಿದಿದೆ. ಈ ಸಭೆಯಲ್ಲಿ ಪಾಂಗೊಂಗ್ ತ್ಸೋ ಪ್ರದೇಶದ ಸ್ಥಿತಿಗತಿಯ ಬಗ್ಗೆಯೂ ಗಮನ ಹರಿಸುವ ಸಾಧ್ಯತೆಯಿದೆ.
ಈ ಮಿಲಿಟರಿ ಸಂವಾದದ ನಂತರ ಗಡಿ ವ್ಯವಹಾರಗಳ ಕುರಿತು ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ವರ್ಕಿಂಗ್ ಮೆಕ್ಯಾನಿಸಂ (ಡಬ್ಲ್ಯುಎಂಸಿಸಿ)ಯ ಮತ್ತೊಂದು ಸಭೆ ನಡೆಯಲಿದೆ ಎಂಬ ಮಾಹಿತಿ ಇದೆ. ಮಿಲಿಟರಿ ಕಮಾಂಡರ್ಗಳು ಸಮಯ-ಚೌಕಟ್ಟು ಮತ್ತು ನಿಷ್ಕ್ರಿಯಗೊಳಿಸುವ ವಿಧಾನವನ್ನು ನಿಗದಿಪಡಿಸಿದರೆ, ಡಬ್ಲ್ಯುಎಂಸಿಸಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ.