ಗುಂಪು ಹಲ್ಲೆ: ಪ್ರಧಾನಿ ನರೇಂದ್ರ ಮೋದಿಗೆ 49 ಸೆಲೆಬ್ರಿಟಿಗಳ ಪತ್ರ
ನವದೆಹಲಿ, ಜುಲೈ 24: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ 49 ಖ್ಯಾತ ನಿರ್ದೇಶಕರು ಮತ್ತು ನಟರು, ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ದ್ವೇಷ ಮತ್ತು ಗುಂಪು ಹಲ್ಲೆ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಮಣಿರತ್ನಂ, ಅನುರಾಗ್ ಕಶ್ಯಪ್, ಅಪರ್ಣ ಸೇನ್, ಶ್ಯಾಮ್ ಬೆನಗಲ್, ಅನುಪಮ್ ರಾಯ್, ಕೊಂಕಣಾ ಸೇನ್ ಶರ್ಮಾ, ಸೌಮಿತ್ರಾ ಚಟರ್ಜಿ, ರೇವತಿ, ಶುಭಾ ಮುದ್ಗಲ್, ಬಿನಾಯಕ್ ಸೇನ್, ರಿದ್ಧಿ ಸೇನ್, ಇತಿಹಾಸ ತಜ್ಞ ರಾಮಚಂದ್ರ ಗುಹಾ, ಆಶಿಶ್ ನಂದಿ ಸೇರಿದಂತೆ 49 ಸೆಲೆಬ್ರಿಟಿಗಳ ಸಹಿ ಈ ಪತ್ರದಲ್ಲಿದೆ.
ಜಾರ್ಖಂಡ್ ಗುಂಪು ಹತ್ಯೆ: ಘಟನೆ ಬಗ್ಗೆ ಅಪಾರ ನೋವಿದೆ ಎಂದ ಮೋದಿ
'ದುರದೃಷ್ಟವಶಾತ್ ಜೈ ಶ್ರೀರಾಮ್ ಎನ್ನುವುದು ಇಂದು ಪ್ರಚೋದನಾತ್ಮಕ ಯುದ್ಧದ ಕೂಗು ಆಗಿಬಿಟ್ಟಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ. ಅದರ ಹೆಸರಿನಲ್ಲಿ ಅನೇಕ ಗುಂಪು ಹಲ್ಲೆಗಳು ನಡೆದಿವೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ನಡೆದಿರುವ ಕೆಲವು ಗುಂಪು ಹಲ್ಲೆ ಪ್ರಕರಣಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮುಸ್ಲಿಂ, ದಲಿತ ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಗುಂಪು ಹಲ್ಲೆಗಳನ್ನು ಕೂಡಲೇ ನಿಲ್ಲಿಸಬೇಕು. ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕದ ಪ್ರಕಾರ 2016ರಲ್ಲಿ ದಲಿತರ ಮೇಲೆ 840 ದೌರ್ಜನ್ಯ ಪ್ರಕರಣಗಳು ನಡೆದಿವೆ. ಆದರೆ, ಇವುಗಳಲ್ಲಿ ಶಿಕ್ಷೆಗೆ ಒಳಗಾದವರ ಪ್ರಮಾಣ ತೀರಾ ಕಡಿಮೆ ಎಂದು ಹೇಳಿದ್ದಾರೆ.
'ನವ ಭಾರತ' ನೀವೇ ಇಟ್ಕೊಳ್ಳಿ, ನಮ್ಮ ಹಳೆಯ ಭಾರತ ನಮಗೆ ಕೊಡಿ: ಗುಲಾಮ್ ನಬಿ ಆಜಾದ್
ಗುಂಪು ಹಲ್ಲೆ ಕುರಿತು ನೀವು ಸಂಸತ್ನಲ್ಲಿ ಖಂಡನೆ ವ್ಯಕ್ತಪಡಿಸಿದ್ದೀರಿ. ಆದರೆ, ಇದು ಸಾಲುವುದಿಲ್ಲ. ಈ ರೀತಿ ಕೃತ್ಯ ಎಸಗಿದವರ ಮೇಲೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ? ದುರದೃಷ್ಟವಶಾತ್ ಒಂದು ಜೈ ಶ್ರೀರಾಮ್ ಎನ್ನುವುದು ಯುದ್ಧದ ಕೂಗು ಆಗಿಬಿಟ್ಟಿದೆ. ಇದಕ್ಕೆ ಕಾನೂನಿನ ಹಂಗು ಇಲ್ಲದಂತಾಗಿದೆ. ಈ ಹೆಸರಿನಿಂದಲೇ ಅನೇಕ ಗುಂಪು ಹಲ್ಲೆಗಳು ನಡೆದಿವೆ ಎಂದಿದ್ದಾರೆ.
ಭಿನ್ನಾಭಿಪ್ರಾಯ ಇಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆ ಇರಲಾರದು. ಆದರೆ, ಸರ್ಕಾರದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಜನರಿಗೆ ದೇಶದ್ರೋಹಿ ಅಥವಾ ಅರ್ಬನ್ ನಕ್ಸಲ್ ಎಂಬ ಪಟ್ಟಕಟ್ಟಬಾರದು ಎಂದು ಮನವಿ ಮಾಡಿದ್ದಾರೆ.