ದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಸೇರಿ ಐವರು ಸಾವು
ನವದೆಹಲಿ, ಫೆಬ್ರವರಿ.25: ಎರಡು ದಿನ ಭಾರತ ಪ್ರವಾಸ ಕೈಗೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿ ಹೊಸ್ತಿಲಲ್ಲೇ ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿದ್ದ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಸಿಎಎ ಪರ ಮತ್ತು ಸಿಎಎ ವಿರೋಧಿ ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದೆ.
ದೆಹಲಿಯ ಈಶಾನ್ಯ ಭಾಗದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಒಬ್ಬ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಡಿಸಿಪಿ ಶಹ್ ದರಾ ಅಮಿತ್ ಶರ್ಮಾ ಸೇರಿದಂತೆ 10 ಮಂದಿ ಪೊಲೀಸರು ಸೇರಿ 50ಕ್ಕೂ ಮಂದಿ ಗಾಯಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ದೆಹಲಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಹೆಡ್ ಕಾನ್ಸ್ಟೆಬಲ್ ಸಾವು
ಸೋಮವಾರ ಅಹ್ಮದಾಬಾದ್ ಮತ್ತು ಉತ್ತರ ಪ್ರದೇಶದ ಆಗ್ರಾಗೆ ಭೇಟಿ ನೀಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಮಂಗಳವಾರ ದೆಹಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ವಿವಿಧ ಒಡಂಬಡಿಕೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದರ ಹೊಸ್ತಿಲಿನಲ್ಲೇ ಸಿಎಎ ಮತ್ತು ಎನ್ ಆರ್ ಸಿ ವಿಚಾರದಲ್ಲಿ ಘರ್ಷಣೆ ನಡೆಯುತ್ತಿದೆ.
ಕಲ್ಲುತೂರಾಟದಲ್ಲಿ ಒಬ್ಬ ಪೊಲೀಸ್, ಒಬ್ಬ ಪ್ರತಿಭಟನಾಕಾರ ಸಾವು
ದೆಹಲಿಯ ಕರ್ದಾಂಪುರ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಕಲ್ಲುತೂರಾಟದಲ್ಲಿ ತಲೆಗೆ ಕಲ್ಲಿನ ಏಟು ಬಿದ್ದು ಸಾರ್ವಜನಿಕರೊಬ್ಬರು ಮೃತಪಟ್ಟಿದ್ದಾರೆ. ಚಾಂದ್ ಬಾಗ್ ನಲ್ಲಿ ನಡೆದ ಗಲಾಟೆಯಲ್ಲಿ ಹೆಡ್ ಕಾನ್ಸ್ ಟೇಬಲ್ ರತನ್ ಲಾಲ್ ಮೃತಪಟ್ಟಿದ್ದರೆ, ಗೋಕುಲ್ ಪುರಿನಲ್ಲಿ ಡೆಪ್ಯುಟಿ ಕಮಿಷನರ್ ಒಬ್ಬರು ಗಾಯಗೊಂಡಿದ್ದಾರೆ. ಘರ್ಷಣೆಯಲ್ಲಿ ಇದುವರೆಗೂ ಪೊಲೀಸ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಫ್ರಾಬಾದ್ ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಯುವಕ
ದೆಹಲಿಯ ಜಫ್ರಾಬಾದ್ ನಲ್ಲಿ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ಎಂಟು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಎನ್ನಲಾಗಿದೆ. ಇನ್ನು, ಗುಂಡು ಹಾರಿಸಿದ ಯುವಕನನ್ನು ಶಾಹರೂಖ್ ಎಂದು ಗುರುತಿಸಲಾಗಿದೆ.
ಮೊದಲು ಗೋಕುಲ್ ಪುರಿನಲ್ಲಿ ಹೊತ್ತಿಕೊಂಡ ಕಿಚ್ಚು
ದೆಹಲಿಯ ಗೋಕುಲ್ ಪುರಿ ನಲ್ಲಿರುವ ಮಾರ್ಕೆಟ್ ನಲ್ಲಿ ಹೊತ್ತಿಕೊಂಡ ಉಗ್ರ ಸ್ವರೂಪದ ಹೋರಾಟದ ಕಿಚ್ಚು ನೋಡ ನೋಡುತ್ತಿದ್ದಂತೆ ದೆಹಲಿಯ ವಿವಿಧ ಭಾಗಗಳಲ್ಲೂ ಹರಡಿತು. ಭಜನ್ ಪುರ್, ಮೌಜ್ ಪುರ್, ಜಫ್ರಾಬಾದ್ ನಲ್ಲಿ ಕೆರಳಿದ ಪ್ರತಿಭಟನಾಕಾರರು ವಾಹನ, ಅಂಗಡಿ ಬೆಂಕಿ ಹಚ್ಚಿದರು. ಭಜನ್ ಪುರ್ ನಲ್ಲಿ ಸಿಎಎ ವಿರೋಧಿ ಹೋರಾಟಗಾರರು ಪೆಟ್ರೋಲ್ ಬಂಕ್ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ
ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ರಾಷ್ಟ್ರ ರಾಜಧಾನಿಯೇ ನಲುಗಿ ಹೋಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ವವಾಯು ಸಿಡಿಸಿದ್ದಾರೆ. ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿರುವ ಪ್ರದೇಶಗಳಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್ ಮತ್ತು ರಾಪಿಡ್ ಆಕ್ಷನ್ ಫೋರ್ಸ್ ನ್ನು ನಿಯೋಜನೆ ಮಾಡಲಾಗಿದೆ.
ನಗರದ ನಾಲ್ಕು ಮೆಟ್ರೋ ನಿಲ್ದಾಣಗಳು ಬಂದ್
ಇನ್ನು, ದೆಹಲಿಯ ಈಶಾನ್ಯ ಭಾಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಾಲ್ಕು ಮೆಟ್ರೋ ನಿಲ್ದಾಣಗಳಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಮೌಜ್ ಪುರ್, ಜಫ್ರಾಬಾದ್, ಬಾಬರ್ ಪುರ್, ಗೋಕುಲ್ ಪುರಿ, ಜೋಹ್ರಿ ಎನ್ ಕ್ಲಿವ್ ಹಾಗೂ ಶಿವ ವಿಹಾರಿ ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮಣ ದ್ವಾರಗಳನ್ನು ಬಂದ್ ಮಾಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಲೆಫ್ಟಿನೆಂಟ್ ಗವರ್ನರ್ ಸೂಚನೆ
ದೆಹಲಿಯಲ್ಲಿ ನಡೆದ ಘರ್ಷಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಸಾವಿಗೆ ಸಿಎಂ ಅರವಿಂದ್ ಕೇಜ್ರಿವಾಲ್ ಸಂತಾಪ ಸೂಚಿಸಿದರು. ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹ ಸಚಿವಾಲಯವೇ ಮೇಲ್ವಿಚಾರಣೆ ನಡೆಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ದೆಹಲಿ ಪೊಲೀಸರಿಗೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಸೂಚನೆ ನೀಡಿದ್ದಾರೆ.