ರೈತರ ಪ್ರತಿಭಟನೆ ವೇಳೆ ಹಿಂಸಾಚಾರ ಪ್ರಕರಣ: ಮತ್ತೆ ಮೂವರ ಬಂಧನ
ನವದೆಹಲಿ,ಫೆಬ್ರವರಿ 13:ಗಣರಾಜ್ಯೋತ್ಸವ ದಿನದಂದು ರೈತರ ಪ್ರತಿಭಟನೆ ವೇಳೆ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 10 ರಂದು ಪ್ರಕರಣ ಸಂಬಂದ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದರು. ಇದೀಗ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ಸಂಬಂಧ ಈ ವರೆಗೂ ಒಟ್ಟಾರೆ 14 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೃಷಿ ಕಾಯ್ದೆಗಳು ಹೂಡಿಕೆಗಳನ್ನು ಸೆಳೆಯಲಿವೆ; ಧರ್ಮೇಂದ್ರ ಪ್ರಧಾನ್
ಬಂಧಿತರನ್ನು ಸುಖ್ಮೀತ್ ಸಿಂಗ್ (35), ಗುಣ್ದೀಪ್ ಸಿಂಗ್ (33) ಮತ್ತು ಹರ್ವೀಂದರ್ ಸಿಂಗ್ (32) ಎಂದು ಗುರ್ತಿಸಲಾಗಿದೆ. ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ರ್ಯಾಲಿ ವೇಳೆ ಪ್ರತಿಭಟನಾ ನಿರತ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಘಟನೆಯಲ್ಲಿ ಒಬ್ಬ ರೈತ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಜೈಲಿನಲ್ಲಿರುವ 115 ರೈತರ ಬಗ್ಗೆ ಮತ್ತು ನಾಪತ್ತೆಯಾಗಿರುವ ರೈತರ ಬಗ್ಗೆ ಚರ್ಚಿಸಲು ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ನ್ಯಾಯಕ್ಕಾಗಿ ಹೋರಾಡುತ್ತಿರುವ ರೈತ ಮುಖಂಡರಿಗೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ಭರವಸೆ ನೀಡಿದ್ದರು.
ಒಂದು ಕಾನೂನು ತಂಡ ರಚಿಸಿದ್ದು, ಕಾಣೆಯಾದ ಅಥವಾ ಜೈಲಿನಲ್ಲಿರುವ ರೈತರಿಗೆ ಈ ಕಾನೂನು ತಂಡ ಸಹಾಯ ಮಾಡಲಿದೆ. ಈ ಕಾನೂನು ತಂಡ ಇಂದು ಕೇಜ್ರಿವಾಲ್ ಮತ್ತು ಇತರ ಮುಖಂಡರನ್ನು ಭೇಟಿಯಾಗಿ ಜೈಲಿನಲ್ಲಿದ್ದ ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ ಮೋರ್ಚಾ ನಾಯಕರು ಹೇಳಿದ್ದರು.