2ಜಿ : ಎ ರಾಜಾ, ಕನಿಮೋಳಿ, ಅಮ್ಮಾಳ್ ಗೆ ಬೇಲ್
ನವದೆಹಲಿ, ಆ.20: 2ಜಿ ತರಂಗಗುಚ್ಛ ಹಂಚಿಕೆ ಅವ್ಯವಹಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಕೇಂದ್ರದ ಮಾಜಿ ಟೆಲಿಕಾಂ ಸಚಿವ ಎ.ರಾಜಾಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜಾಮೀನು ಮಂಜೂರು ಮಾಡಿದೆ.
ಸಿಬಿಐ ನ್ಯಾಯಾಲಯದ ವಿಶೇಷ ನ್ಯಾ. ಓ.ಪಿ ಸೈನಿ ಅವರು ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಾಳ್, ಕರುಣಾನಿಧಿ ಪುತ್ರಿ ಕನ್ನಿಮೋಳಿ ಅವರಿಗೂ ಷರತ್ತುಬದ್ಧ ಜಾಮೀನು ನೀಡಿದ್ದಾರೆ. ಜಾಮೀನು ಪಡೆಯಲು 5 ಲಕ್ಷ ರು ವೈಯಕ್ತಿಕ ಬಾಂಡ್ ಇಬ್ಬರ ಶ್ಯೂರಿಟಿ ನೀಡಬೇಕು, ಸಿಬಿಐ ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಾಧಾರ ನಾಶಪಡಿಸಬಾರದು ಎಂಬ ಷರತ್ತು ವಿಧಿಸಲಾಗಿದೆ. [ನೀರಾ ರಾಡಿಯಾ ಟೇಪ್ಸ್ ರಹಸ್ಯ ಬಹಿರಂಗ]
ದೋಷಾರೋಪ ಪಟ್ಟಿ: ಸ್ಪೆಕ್ಟ್ರಂ ಹಗರಣದಲ್ಲಿ ರೂವಾರಿ, ಡಿಎಂಕೆ ಸಂಸದ ಎ ರಾಜಾ ಮತ್ತು ಕನ್ನಿಮೊಳಿ ಸೇರಿದಂತೆ ಒಟ್ಟು 17 ಮಂದಿ ವಿರುದ್ಧ ಪಟಿಯಾಲಾ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ನ್ಯಾಯಪೀಠದೆದುರು ದೋಷಾರೋಪಪಟ್ಟಿ ಸಲ್ಲಿಸಿತ್ತು.
ಇದಕ್ಕೆ ಪೂರಕವಾಗಿ ಜಾರಿ ನಿರ್ದೇಶನಾಲಯವೂ ಪಟ್ಟಿ ಸಲ್ಲಿಸಿ ಸ್ವಾನ್ ಟೆಲಿಕಾಂ ಪ್ರವರ್ತಕರಾದ ಶಹೀದ್ ಉಸ್ಮಾನ್ ಬಾಲ್ವ, ವಿನೋದ್ ಗೊಯೇಂಕಾ, ಕುಸೆಗಾಂವ್ ಫ್ರೂಟ್ಸ್ ಹಾಗೂ ವೆಜಿಟೇಬಲ್ಸ್ ಪ್ರೈ ಲಿ(KFVPL) ನಿರ್ದೇಶಕರಾದ ಆಸೀಫ್ ಬಾಲ್ವ, ರಾಜೀವ್ ಅಗರವಾಲ್, ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಪತ್ನಿ ದಯಾಳು ಅಮ್ಮಾಳ್, ಕಲೈಂನರ್ ಟಿವಿ ನಿರ್ದೇರ್ಶಕ ಶರತ್ ಕುಮಾರ್, ಪಿ ಅಮೃತನ್ ಅವರ ಹೆಸರು ಪಟ್ಟಿಯಲ್ಲಿತ್ತು. [ಖಾತೆ ಹೊತ್ತಿದ್ದ ವಾಜಪೇಯಿಯೂ ಕಳಂಕಿತರೇ]
ಕಂಪನಿಗಳು: ಸ್ವಾನ್ ಟೆಲಿಕಾಂ ಪ್ರೈ.ಲಿ(ಎಸ್ ಟಿಪಿಎಲ್), ಕುಸೆಗಾಂವ್ ರಿಯಾಲ್ಟಿ ಪ್ರೈ ಲಿ, ಸಿನಿಯುಗ್ ಮೀಡಿಯಾ ಅಂಡ್ ಎಂಟರ್ ಟೈನ್ಮೆಂಟ್ ಪ್ರೈ ಲಿ(ಸಿನಿಯುಗ್ ಫಿಲಂಸ್), ಕಲೈಂನರ್ ಟಿವಿ(ಕೆಟಿವಿ), ಡೈನಾಮಿಕ್ಸ್ ರಿಯಾಲ್ಟಿ, ಎವರ್ ಸ್ಮೈಲ್ ಕನ್ಸ್ಟ್ರಕ್ಷನ್ ಕಂಪನಿ ಪ್ರೈ ಲಿ, ಕಾನ್ ವುಡ್ ಕನ್ ಸ್ಟ್ರಕ್ಷನ್ ಅಂಡ್ ಡೆವೆಲಪರ್ಸ್ (ಪಿ) ಲಿ, ಡಿಬಿ ರಿಯಾಲ್ಟಿ ಲಿ ಹಾಗೂ ನಿಹಾರ್ ಕನ್ ಸ್ಟ್ರಕ್ಷನ್ ಪ್ರೈ ಲಿ ಎಲ್ಲರ ಮೇಲೂ PMLA ಕಾಯ್ದೆ ಅನ್ವಯ ಮನಿಲಾಂಡ್ರಿಂಗ್ ಆರೋಪ ಹೊರೆಸಲಾಗಿದೆ.
ಸುಮಾರು 1.7 ಲಕ್ಷ ಕೋಟಿ ರು.ಗೂ ಅಧಿಕ ಮೊತ್ತದ ಅವ್ಯವಹಾರ ದಾಖಲಿಸಿದ ಬಹುಕೋಟಿ 2ಜಿ ಹಗರಣದಲ್ಲಿ ಡಿಎಂಕೆ ಪಕ್ಷ ಹಾಗೂ ಕರುಣಾನಿಧಿ ಕುಟುಂಬ ಸುಮಾರು 200 ಕೋಟಿ ರು ಜೇಬಿಳಿಸಿಕೊಂಡಿತ್ತು ಎಂದು ತನಿಖೆಯಿಂದ ತಿಳಿದು ಬಂದಿತ್ತು. (ಐಎಎನ್ಎಸ್)