ಕೇಜ್ರಿವಾಲ್ ಎದುರಿಸಲು 240 ಸಂಸದರನ್ನು ದೆಹಲಿ ರಸ್ತೆಗೆ ಇಳಿಸಿದ ಬಿಜೆಪಿ
ನವದೆಹಲಿ, ಫೆಬ್ರವರಿ 05: ಎಎಪಿ ಯನ್ನು ಎದುರಿಸಲು ಬಿಜೆಪಿಯು ದೊಡ್ಡ ಮಟ್ಟದ ಪ್ರಯತ್ನ ಮಾಡುತ್ತಿದ್ದು, ಬಿಜೆಪಿ ಪರ ಪ್ರಚಾರಕ್ಕೆಂದು ಬಿಜೆಪಿಯು ತನ್ನ 240 ಸಂಸದರನ್ನು ದೆಹಲಿಗೆ ಕರೆಸಿದೆ.
ಬಿಜೆಪಿಯ 240 ಸಂಸದರು ದೆಹಲಿಯ ಬೀದಿಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮನೆ-ಮನೆಗೂ ತೆರಳಿ ಚುನಾವಣಾ ಕರಪತ್ರಗಳನ್ನು ಹಂಚುತ್ತಿದ್ದಾರೆ. ಎಎಪಿ ಬದಲಿಗೆ ತಮಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡುತ್ತಿದ್ದಾರೆ.
ಕರ್ನಾಟಕದ ಸಂಸದರೂ ಸಹ ದೆಹಲಿಗೆ ತೆರಳಿದ್ದು, ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನೂ ಕೆಲವರು ದೆಹಲಿಯಲ್ಲಿಯೇ ಬೀಡು ಬಿಟ್ಟು, ಅಲ್ಲಿನ ಕರ್ನಾಟಕದ ಕುಟುಂಬಗಳಿಗೆ ತೆರಳಿ ಬಿಜೆಪಿ ಗೆ ಮತ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ.
ವಿಶೇಷವಾಗಿ ಬಡವರು, ಮಧ್ಯಮವರ್ಗದವರು, ಸ್ಲಂಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡುವಂತೆ ಬಿಜೆಪಿಯು ತನ್ನ ಸಂಸದರಿಗೆ ಹೇಳಿದ್ದು, ಈಗಾಗಲೇ ಸಂಸದರ ಕಾಲ್ನಡಿಗೆ ಪ್ರಚಾರ ಪ್ರಾರಂಭವಾಗಿದೆ.
ಫೆಬ್ರವರಿ 8 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 6 ರ ಸಂಜೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ನಂತರ ಮನೆ-ಮನೆ ಪ್ರಚಾರ ಆರಂಭವಾಗಲಿದೆ.
ಎಎಪಿಯ ಬಗ್ಗೆ ದೆಹಲಿಯ ಜನರಿಗೆ ಒಲವಿದೆ ಎಂಬ ಮಾಹಿತಿ ಬಿಜೆಪಿ ಗೆ ಇದ್ದು, ಮತದಾರರ ಮೇಲೆ ಸಂಸದರು ನೇರ ಪ್ರಭಾವ ಬೀರಲೆಂದು ಬಿಜೆಪಿ ಈ ತಂತ್ರ ಅನುಸರಿಸುತ್ತಿದೆ. ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ.
ಜೆಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಆದ ನಂತರ ಇದು ಮೊದಲ ಚುನಾವಣೆ ಆಗಿದ್ದು, ಜೆಪಿ ನಡ್ಡಾಗೆ ಪ್ರತಿಷ್ಠೆಯ ವಿಷಯವಾಗಿದೆ. ಜೊತೆಗೆ ಈ ಚುನಾವಣೆಯನ್ನು ಕೇಜ್ರಿವಾಲ್ ವರ್ಸಸ್ ಅಮಿತ್ ಶಾ ಚುನಾವಣೆ ಎಂದೇ ದೆಹಲಿಯಲ್ಲಿ ಬಿಂಬಿಸಲಾಗುತ್ತಿದೆ.