ಕ್ವಾರಂಟೈನ್ ಮುಗೀತು: ತಬ್ಲಿಘಿ ಜಮಾತ್ಗೆ ಹೋಗಿ ಬಂದಿದ್ದ 21 ವಿದೇಶಿಯರ ಬಂಧನ
ನವದೆಹಲಿ, ಏಪ್ರಿಲ್ 23: ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಜೊತೆ 21 ವಿದೇಶಿಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಒಟ್ಟು 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರನ್ನು ಬಂಧಿಸಲಾಗಿದ್ದು, ಈಗ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಇಡೀ ದೇಶಕ್ಕೆ ಕೊರೊನಾ ಸಾರುವ ಹಾಟ್ಸ್ಪಾಟ್ ಆಗಿತ್ತು. ಪೊಲೀಸರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಬಗ್ಗೆ ಮಾಹಿತಿ ಪಡೆಯಲೂ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸಿದ್ದಾರೆ.
ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ನಿತಿನ್ ಠಾಕ್ರೆ ಹೇಳುವ ಪ್ರಕಾರ 13 ಬಾಂಗ್ಲಾದೇಶಿಯರು, ಎಂಟು ಮಂದಿ ಮಲೇಷ್ಯಾದವರು, ಹಾಗೂ ನಾಲ್ವರು ಸ್ಥಳೀಯರನ್ನು ಬಂಧಿಸಲಾಗಿದೆ.
ವಿದೇಶಿಯರು ಪ್ರವಾಸಿ ವೀಸಾವನ್ನು ಉಲ್ಲಂಘನೆ ಮಾಡಿದ್ದಾರೆ. ಅವರ ವೀಸಾ ಪ್ರಕಾರ ಯಾವುದೇ ದೇಶದಲ್ಲಿ ಯಾವುದೇ ಒಂದು ಸಮುದಾಯದ ಪರ ಪ್ರಚಾರ ಮಾಡುವಂತಿರಲಿಲ್ಲ. ಅವರನ್ನು ಏಪ್ರಿಲ್ 1ರಿಂದ ಶಿಲ್ ದೈಘರ್ನಲ್ಲಿ ಕ್ವಾರಂಟೈನ್ನಲ್ಲಿಡಲಾಗಿತ್ತು.
ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಗುರುವಾರ ಅವರನ್ನು ಬಂಧಿಸಲಾಗಿತ್ತು. ಅವರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ಸ್ಥಳೀಯರ ವಿರುದ್ಧವೂ ಕೇಸ್ ದಾಖಲಿಸಲಾಗಿದೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ದೇಶವನ್ನು ಬಿಟ್ಟು ಹೋಗುವಂತಿಲ್ಲ ಎಂದು ತಿಳಿಸಲಾಗಿದೆ.