ಗೆಲುವಿನ ರಣತಂತ್ರ: ಪಂಜಾಬ್ ವಿಧಾನಸಭೆಯ 45 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು
ನವದೆಹಲಿ, ಸಪ್ಟೆಂಬರ್ 1: ಪಂಜಾಬ್ ವಿಧಾನಸಭಾ ಚುನಾವಣೆಗೆ ಹಲವು ಸವಾಲುಗಳ ನಡುವೆ ಭಾರತೀಯ ಜನತಾ ಪಕ್ಷವು ಅನ್ಯಮಾರ್ಗವನ್ನು ಹುಡುಕಿ ಹೊರಟಿದೆ. ಹಿಂದೂ ಬಹುಸಂಖ್ಯಾತರನ್ನು ಹೊಂದಿರುವ 45 ಕ್ಷೇತ್ರಗಳ ಮೇಲೆ ಬಿಜೆಪಿ ಕಣ್ಣು ನೆಟ್ಟಿದೆ.
ವಿವಾದಿತ ಕೃಷಿ ಕಾಯ್ದೆಗಳು ಒಂದು ದಿಕ್ಕಿನಲ್ಲಿ ಬಿಜೆಪಿಗೆ ಉರುಳಾಗುವ ಸಾಧ್ಯತೆಯಿದೆ. ಇನ್ನೊಂದು ದಿಕ್ಕಿನಲ್ಲಿ ಎರಡು ದಶಕಗಳ ಕಾಲ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗೆ ಗುರುತಿಸಿಕೊಂಡಿದ್ದ ಶಿರೋಮಣಿ ಅಕಾಲಿ ದಳವು ತನ್ನ ಮೈತ್ರಿಯನ್ನು ಕಡಿದುಕೊಂಡಿದೆ. ಇಂಥ ಒತ್ತಡದ ನಡುವೆ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಈ ಪೈಕಿ ತನ್ನ ಪ್ರಾಬಲ್ಯವನ್ನು ಹೊಂದಿರುವ ಕ್ಷೇತ್ರಗಳ ಮೇಲೆ ಹೆಚ್ಚು ಲಕ್ಷ್ಯ ವಹಿಸಿದೆ.
ಕೃಷಿ ಕಾಯ್ದೆ: ಸುಳ್ಳು ಪ್ರಕರಣಗಳಿಂದ ರೈತರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದ ಟಿಕಾಯತ್
ರಾಜ್ಯದ ಸ್ಥಳೀಯ ಜನಸಂಖ್ಯೆಯ ದೊಡ್ಡ ಭಾಗವಾಗಿರುವ ರೈತರು ಈಗಾಗಲೇ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ನಿರಂತರ ಹೋರಾಟದ ಹಾದಿ ಹಿಡಿದಿದ್ದಾರೆ. ಈ ಬೆಳವಣಿಗೆಗಳ ಮಧ್ಯೆ ಪ್ರಾಥಮಿಕ ಹಂತದಲ್ಲಿ ರಾಜ್ಯದ ನಗರ ಪ್ರದೇಶಗಳ 45 ಹಿಂದೂ ಬಹುಸಂಖ್ಯಾತ ಕ್ಷೇತ್ರಗಳ ಮೇಲೆ ಬಿಜೆಪಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲು ನಿರ್ಧರಿಸಿದೆ.
ಬಹುಸಂಖ್ಯಾತ ಕ್ಷೇತ್ರಗಳ ಮೇಲೆ ಕಣ್ಣು
ಪಂಜಾಬ್ ವಿಧಾನಸಭಾ ಚುನಾವಣೆಗಾಗಿ ಸಜ್ಜುಗೊಳ್ಳುತ್ತಿರುವ ಬಿಜೆಪಿಯು ಶೇ.60ರಷ್ಟು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳನ್ನು ಗುರುತು ಹಾಕಿಕೊಳ್ಳುತ್ತಿದೆ. ರಾಜ್ಯ ಬಿಜೆಪಿ ನಾಯಕರು ಈ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸುವಂತೆ ವಿವರಣೆ ನೀಡುತ್ತಿದ್ದಾರೆ. ಕಳೆದ ಬಾರಿ ಶಿರೋಮಣಿ ಅಕಾಲಿ ದಳದ ಜೊತೆಗಿನ ಮೈತ್ರಿಕೂಟದೊಂದಿಗೆ ಚುನಾವಣೆ ಎದುರಿಸಿದ ಸಂದರ್ಭದಲ್ಲಿ ಇದೇ 45 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಮೈತ್ರಿಕೂಟವು ಗೆಲುವಿನ ನಗೆ ಬೀರಿತ್ತು.
ರಾಜ್ಯದಲ್ಲಿ ಬಿಜೆಪಿ ನಾಯಕರ ಮುತ್ತಿಗೆ ಭೀತಿ ತಪ್ಪಿಲ್ಲ
ಪಂಜಾಬಿನಲ್ಲಿ ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ತೆರಳಿದರೆ ಸಾರ್ವಜನಿಕರು ಮುತ್ತಿಗೆ ಹಾಕುವ ಅಪಾಯವಿದೆ ಎಂಬುದನ್ನು ಕೇಂದ್ರದ ನಾಯಕರು ಅರಿತುಕೊಂಡಿದ್ದಾರೆ. ಈಗಾಗಲೇ ರಾಜ್ಯದ ಹಲವು ಬಿಜೆಪಿ ನಾಯಕರು ಇಂಥ ಸನ್ನಿವೇಶವನ್ನು ಎದುರಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ. ಆದ್ದರಿಂದ ಭಾರತೀಯ ಜನತಾ ಪಕ್ಷವು ಎಲ್ಲಿ ಪ್ರಬಲವಾಗಿದೆಯೋ ಅಂಥ ಪ್ರದೇಶಗಳ ಮೇಲೆ ಹೆಚ್ಚು ಗಮನ ಹರಿಸುವುದು ಮತ್ತು ಪ್ರಚಾರ ಕಾರ್ಯವನ್ನು ನಡೆಸುವುದು ಸೂಕ್ತವಾಗಿರುತ್ತದೆ ಎಂದಿದ್ದಾರೆ.
ಬಿಜೆಪಿಯಿಂದ ಕ್ಷೇತ್ರಗಳನ್ನು ಗುರುತಿಸುವ ರಣತಂತ್ರ
ಭಾರತೀಯ ಜನಸಂಘದ ದಿನಗಳಲ್ಲಿ ಪಕ್ಷವು ಸ್ಪರ್ಧಿಸುತ್ತಿದ್ದ ಇತರ ಹಲವಾರು ಸ್ಥಾನಗಳಿವೆ ಎಂಬುದನ್ನು ನಾಯಕರು ಗಮನಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಉಳಿಸಿಕೊಳ್ಳುವ ಮತ್ತು ಗೆಲ್ಲುವ ಅವಕಾಶವನ್ನು ಹೊಂದಿರುವ ಕ್ಷೇತ್ರಗಳನ್ನು ಗುರುತಿಸಿ ಇಟ್ಟುಕೊಂಡಿದೆ. ರೋಪರ್, ಜಲಾಲಾಬಾದ್, ಪಟಿಯಾಲ (ನಗರ), ಬಟಿಂಡಾ (ನಗರ) ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯವನ್ನು ಸಾಧಿಸಲು ಲೆಕ್ಕಾಚಾರ ಹಾಕಿಕೊಳ್ಳುತ್ತಿದೆ. ಇದರ ಜೊತೆಗೆ ಈ ಹಿಂದೆ ಪಕ್ಷವು ಎಂದಿಗೂ ಸ್ಪರ್ಧೆ ಮಾಡದಿರುವ ಹಾಗೂ ಹೆಚ್ಚು ಬೆಂಬಲ ಹೊಂದಿರುವ ಕ್ಷೇತ್ರಗಳನ್ನು ಗುರುತಿಸಿದೆ. ಆದರೆ ದೇರಾಬಾಸಿ, ಖರಾರ್ ಮತ್ತು ಮೊಹಾಲಿ, ರೋಪರ್, ಬುಧ್ಲಾಡಾ ಮತ್ತು ಬಟಿಂಡಾ (ನಗರ)ದಲ್ಲಿ ಸಂಘಟನೆ ನೆಲೆಯು ಬಲವಾಗಿದೆ ಎಂಬುದನ್ನು ಪಕ್ಷ ಗುರುತಿಸಿದೆ.
ಜಿಲ್ಲಾ ಪಕ್ಷದ ನಾಯಕತ್ವವು ಈ ಪ್ರದೇಶಗಳಲ್ಲಿ ಸಮಾನ ಮನಸ್ಕ ಸಾಮಾಜಿಕ ಸಂಸ್ಥೆಗಳೊಂದಿಗೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಶ್ರಮಿಸಬೇಕು. ಇದರ ಜೊತೆಗೆ ಅನ್ವೇಷಿಸದ ಇತರೆ ಪ್ರದೇಶಗಳಿಲ್ಲಿ ವಿಶೇಷವಾಗಿ ರೈತ ಸಂಘಟನೆಗಳ ಪ್ರಾಬಲ್ಯವಿರುವ ಪ್ರದೇಶಗಳಿಗೆ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲೂ ಕೆಲಸ ಮಾಡಬೇಕಿದೆ ಎಂದು ಸೂಚಿಸಲಾಗಿದೆ.
2022ರ ಪಂಜಾಬ್ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧೆ
ಭಾರತೀಯ ಜನತಾ ಪಕ್ಷವು 2022ರ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಆತ್ಮವಿಶ್ವಾಸದಿಂದ ಸ್ಪರ್ಧಿಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಹೇಳಿದ್ದಾರೆ. "ಬಿಜೆಪಿಗೆ ಇದೊಂದು ವಿಭಿನ್ನ ಅನುಭವವನ್ನು ನೀಡುತ್ತದೆ. ನಾವು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದು, ಯಾವುದೇ ಆತಂಕವಿಲ್ಲದೇ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದೇವೆ. ರಾಜ್ಯದಲ್ಲಿ ಮೂರು ವಿವಾದಿತ ಕೃಷಿ ಕಾಯ್ದೆಗಳಿಗೆ ಬಿಜೆಪಿಯನ್ನು ಹೊಣೆ ಮಾಡುವುದರ ಹೊರತಾಗಿ ಜನರಲ್ಲಿ ಹೊಸ ಆಶಾಭಾವನೆಯನ್ನು ಹುಟ್ಟುಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಸುಭಾಶ್ ಶರ್ಮಾ ಹೇಳಿದ್ದಾರೆ.
ರೈತರ ಹೋರಾಟ ಮತ್ತು ಕೃಷಿ ಕಾಯ್ದೆಗಳ ಬಗ್ಗೆ ತಿಳಿಯಿರಿ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರೈತರು ವಿರೋಧಿಸುತ್ತಿರುವ ಕೃಷಿ ಕಾಯ್ದೆಗಳು ಯಾವುವು?:
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.