'ಅಜೇಯ ಬಿಜೆಪಿ' ಸಾರಥ್ಯ ಅಮಿತ್ ಶಾಗೆ; ಬಿಜೆಪಿ ಕಾರ್ಯಕಾರಿಣಿ ಮುಖ್ಯಾಂಶ
2019ರ ಲೋಕಸಭೆ ಚುನಾವಣೆಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದಾಳತ್ವದಲ್ಲೇ ಎದುರಿಸುವುದಕ್ಕೆ ಕೇಸರಿ ಪಕ್ಷ ತೀರ್ಮಾನಿಸಿದೆ. ಜನವರಿ 2019ಕ್ಕೆ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ಅವರ ಅವಧಿ ಮುಗಿಯುತ್ತದೆ. ಆ ಹಿನ್ನೆಲೆಯಲ್ಲಿ ಹೊಸಬರನ್ನು ಪಕ್ಷಕ್ಕೆ ಸಾರಥಿಯಾಗಿ ತರಬಹುದಾ ಎಂಬ ಪ್ರಶ್ನೆಗೆ, ಪಕ್ಷದ ಮೂಲಗಳು 'ಇಲ್ಲ' ಅಂತಲೇ ಹೇಳುತ್ತಿವೆ.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಹೇಗೆ ಪಕ್ಷ ಸಿದ್ಧಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ಇಂಥ ಮಹತ್ವದ ಸಭೆಯಲ್ಲಿ ರಾಷ್ಟ್ರೀಯ ನಾಯಕರು, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪಕ್ಷದ ಪ್ರಮುಖ ನಾಯಕರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.
ಯಡಿಯೂರಪ್ಪ ದೆಹಲಿಗೆ: ರಾಜ್ಯ ರಾಜಕಾರಣದ ಬಗ್ಗೆ ಬಿಸಿ-ಬಿಸಿ ಚರ್ಚೆ
ನಿರಂತರವಾಗಿ ಏರಿಕೆ ಕಾಣುತ್ತಿರುವ ತೈಲ ಬೆಲೆ, ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ, ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಆಗದಿರುವುದು ಸೇರಿದಂತೆ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಯಾವುದೆಲ್ಲ ವಿಚಾರವನ್ನು ಮುಂದಿಟ್ಟುಕೊಂಡು ದಾಳಿ ನಡೆಸುತ್ತಿವೆಯೋ ಆ ಬಗ್ಗೆ ಚರ್ಚೆ ನಡೆಸಲಾಗಿದೆ. ಒಟ್ಟಾರೆಯಾಗಿ ಅಮಿತ್ ಶಾ ನೇತೃತ್ವದಲ್ಲೇ ಮುಂದಿನ ಲೋಕಸಭೆ ಚುನಾವಣೆ ಎದುರಿಸುವುದು ಎಂಬ ಸಂಗತಿ ಮುನ್ನೆಲೆಗೆ ಬಂದಿದೆ.
ರಾಷ್ಟ್ರೀಯ ಕಾರ್ಯಕಾರಿಣಿಯ ಪ್ರಮುಖ ಅಂಶಗಳು ಇಲ್ಲಿವೆ.
ಹಿಂದಿನ ಚುನಾವಣೆಗಿಂತ ದೊಡ್ಡ ಗೆಲುವು
2014ರಲ್ಲಿ ಗೆದ್ದಿದ್ದಕ್ಕಿಂತ ಹೆಚ್ಚಿನ ಗೆಲುವನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ದಾಖಲಿಸಿ, ಬಿಜೆಪಿ ಮತ್ತೆ ಅಧಿಕಾರ ಹಿಡಿಯುತ್ತದೆ ಎಂದು ಅಮಿತ್ ಶಾ ಎರಡು ದಿನಗಳ ಸಭೆಯ ಉದ್ಘಾಟನೆ ನಂತರ ಘೋಷಣೆ ಮಾಡಿದ್ದಾರೆ. ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ.
ಅಜೇಯ ಬಿಜೆಪಿ ಘೋಷಣೆ ಸ್ವೀಕಾರ
'ಅಜೇಯ ಬಿಜೆಪಿ' ಎಂಬ ಘೋಷಣೆಯನ್ನು ಸಭೆಯಲ್ಲಿ ಸ್ವೀಕರಿಸಲಾಗಿದೆ. ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಗೆಲುವಿಗಾಗಿ ಕೆಲಸ ಮಾಡುವಂತೆ ಮುಖಂಡರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ತೆಲಂಗಾಣ ಚುನಾವಣೆ ಬಗ್ಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಯಿತು. ರಾಜಸ್ತಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ವಿಧಾನಸಭೆಗೆ ಚುನಾವಣೆ ನಡೆಯುವಾಗಲೇ ತೆಲಂಗಾಣಕ್ಕೂ ಚುನಾವಣೆ ಆಗುವ ನಿರೀಕ್ಷೆ ಇದೆ.
ರಾಷ್ಟ್ರೀಯ ನಾಯಕರು ಚರ್ಚೆಯಲ್ಲಿ ಭಾಗಿ
ಸಭೆಯ ಎರಡನೇ ದಿನವಾದ ಭಾನುವಾರ ಪಕ್ಷದ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಕೇಸರಿ ಪಕ್ಷದ ಬಗ್ಗೆ ಮೇಲ್ಜಾತಿಯವರಲ್ಲಿ ಅಸಮಾಧಾನವಿದೆ. ರೈತ ವರ್ಗವು ಪ್ರತಿಭಟನೆ ನಡೆಸುತ್ತಿದೆ ಮತ್ತು ಎಸ್ ಸಿ-ಎಸ್ ಟಿ ಸಮುದಾಯಕ್ಕೆ ಇರುವ ಸಿಟ್ಟು..ಇತ್ಯಾದಿ ವಿಚಾರಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯಲಿದೆ.
ಕೇಂದ್ರ ಸರಕಾರದ ಯೋಜನೆ ಬಗ್ಗೆ ವಿವರಣೆ
ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕೇಂದ್ರ ಸರಕಾರವು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಯಶಸ್ಸಿಗಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಬಡವರಿಗಾಗಿ ರೂಪಿಸಿದ ಯೋಜನೆಗಳ ಬಗ್ಗೆ ಮಾತನಾಡಲಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ತಲುಪುವ ಪ್ರಯತ್ನದಲ್ಲಿ ಸಭೆ ಆಯೋಜಿಸಲು ಬಿಜೆಪಿಯಿಂದ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ಆಯ್ಕೆ ಮಾಡಿಕೊಳ್ಳಲಾಗಿದೆ.
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿಷಯದಲ್ಲಿ ಗೊಂದಲ
ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿಷಯದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಇದು 2019ರ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಕ್ಷದ ಪದಾಧಿಕಾರಿಗಳಾಗಿ ಅಮಿತ್ ಶಾ ಹೇಳಿರುವುದಾಗಿ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಮತ್ತೆ ಯಥಾ ಸ್ಥಿತಿಗೆ ತರುವಂತೆ, ಎಸ್ ಸಿ-ಎಸ್ ಟಿ ಕಾಯ್ದೆಗೆ ತಿದ್ದುಪಡಿ ತರುವ ಕೇಂದ್ರ ಸರಕಾರದ ನಿರ್ಧಾರಕ್ಕೆ ಮೇಲ್ಜಾತಿ ಮತದಾರರು ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆ. ಆದ್ದರಿಂದ ಈಗ ಸಮತೋಲನ ಕಾಯ್ದುಕೊಳ್ಳುವ ಸವಾಲು ಪಕ್ಷಕ್ಕಿದೆ.
ಜಿಡಿಪಿ ಪ್ರಗತಿ ದರ ಏರಿಕೆ ಬಗ್ಗೆಯೂ ಚರ್ಚೆ
ನಾಗರಿಕರ ರಾಷ್ಟ್ರೀಯ ನೋಂದಣಿ ಕೂಡ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿ ಸರಕಾರದಿಂದ ಕೈಗೊಂಡ ಬಡವರ ಪರವಾದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು, ಕೃಷಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯಲ್ಲಿನ ಏರಿಕೆ, ಜಿಡಿಪಿ ಪ್ರಗತಿ ದರದ ಬಗ್ಗೆ ಕೂಡ ಚರ್ಚೆ ನಡೆಯಲಿದೆ.