"ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದರಲ್ಲೂ ರಾಜಕೀಯ"
ನವದೆಹಲಿ, ಜನವರಿ.17: 2012ರ ದೆಹಲಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಆರೋಪಿಸಿದ್ದಾರೆ.
2012ರಲ್ಲಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಹೋರಾಟ ನಡೆಸಿದವರು ಇಂದು ರಾಜಕೀಯಕ್ಕೆ ನಿಂತಿದ್ದಾರೆ. ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವುದರಲ್ಲಿ ವಿಳಂಭವಾಗುತ್ತಲೇ ಇದೆ. ಇದಕ್ಕೆಲ್ಲ ಅಂದು ಹೋರಾಟ ಮಾಡಿದ ಮಂದಿ ಇಂದು ನಡೆಸುತ್ತಿರುವ ರಾಜಕೀಯವೇ ಕಾರಣ ಎಂದು ಆಶಾ ದೇವಿ ದೂರಿದ್ದಾರೆ.
ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಫೆಬ್ರವರಿ.01ರಂದು ಗಲ್ಲುಶಿಕ್ಷೆ
ಶುಕ್ರವಾರ ಮಧ್ಯಾಹ್ನ 4.30ರ ನಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸತೀಶ್ ಕುಮಾರ್ ನೇತೃತ್ವದ ಪೀಠವು ಹೊಸ ಡೆತ್ ವಾರಂಟ್ ಜಾರಿಗೊಳಿಸಿದೆ. ಫೆಬ್ರವರಿ.01ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆದೇಶಿಸಿದೆ.
"ಏಳು ವರ್ಷಗಳ ಹೋರಾಟಕ್ಕೆ ಸಿಕ್ಕಿಲ್ಲ ನ್ಯಾಯ":
ದೆಹಲಿ ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ಏಳು ವರ್ಷಗಳೇ ಕಳೆದಿವೆ. ಈ ಏಳು ವರ್ಷಗಳಲ್ಲಿ ನಾವು ನ್ಯಾಯಕ್ಕಾಗಿ ಅಂಗಲಾಚುತ್ತಿದ್ದೇವೆ. ಹೀಗಿದ್ದರೂ ಇಂದಿಗೂ ನನ್ನ ಮಗಳ ಸಾವಿಗೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಯಾಗಿಲ್ಲ ಎಂದು ನಿರ್ಭಯಾ ತಾಯಿ ಆಶಾದೇವಿ ಆರೋಪಿಸಿದ್ದಾರೆ.
"ನಾನು ಯಾವಾಗಲೂ ರಾಜಕಾರಣದ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ, ಈಗ ಮಾತನಾಡುವ ಸಂದರ್ಭ ಬಂದಿದೆ. 2012ರಂದು ನಿರ್ಭಯಾ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಜನರು, ಇಂದು ಅದೇ ಪ್ರಕರಣವನ್ನು ಇಟ್ಟುಕೊಂಡು ತಮ್ಮ ರಾಜಕೀಯದ ಶ್ರೇಯೋಭಿವೃದ್ಧಿಗೆ ಹಪಹಪಿಸುತ್ತಿದ್ದಾರೆ" ಎಂದು ಆಶಾದೇವಿ ದೂರಿದ್ದಾರೆ.
#WATCH Asha Devi, mother of 2012 Delhi gang-rape victim: Till now, I never talked about politics, but now I want to say that those people who held protests on streets in 2012, today the same people are only playing with my daughter's death for political gains. pic.twitter.com/FvaC89TwKI
— ANI (@ANI) January 17, 2020
ಇತ್ತೀಚಿಗಷ್ಟೇ ಜನವರಿ.22ರ ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ಜಾರಿಗೊಳಿಸಲು ಕೋರ್ಟ್ ವಾರಂಟ್ ಹೊರಡಿಸಿತ್ತು. ಆದರೆ, ಶುಕ್ರವಾರ ವಿಚಾರಣೆ ನಡೆಸಿದ ದೆಹಲಿ ಕೋರ್ಟ್ ಫೆಬ್ರವರಿ.01ರಂದು ಬೆಳಗ್ಗೆ 6 ಗಂಟೆಗೆ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಹೊಸತಾಗಿ ಡೆತ್ ವಾರಂಟ್ ಹೊರಡಿಸಿದೆ.