ಗೋಧ್ರಾ ಹತ್ಯಾಕಾಂಡ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಸಮಿತಿ ಹೇಳಿದ್ದೇನು?
ದೆಹಲಿ, ಡಿಸೆಂಬರ್.11: ಗುಜರಾತ್ ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಕುರಿತು ಅಂತಿಮ ವರದಿ ಸಲ್ಲಿಕೆಯಾಗಿದೆ. ಸರ್ಕಾರ ರಚಿಸಿದ ಸದಸ್ಯರ ಸಮಿತಿ ರಾಜ್ಯ ವಿಧಾನಸಭೆಯಲ್ಲಿ ತನ್ನ ಅಂತಿಮ ವರದಿ ಸಲ್ಲಿಸಿದೆ. ವರದಿಯಲ್ಲಿ ಅಂದು ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಬಗ್ಗೆ ಏನು ಹೇಳಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಕೇವಲ ಭಾರತವಷ್ಟೇ ಅಲ್ಲದೇ ಪ್ರಪಂಚದಾದ್ಯಂತ ಸುದ್ದಿಯಾಗಿತ್ತು. ಈ ಹತ್ಯಾಕಾಂಡದಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೂಡಾ ಕೇಳಿ ಬಂದಿತ್ತು. ಗೋಧ್ರಾ ಹತ್ಯಾಕಾಂಡವನ್ನೇ ಉದ್ದೇಶವಾಗಿ ಇಟ್ಟುಕೊಂಡು ಈ ಮೊದಲು ಅಮೆರಿಕಾ ಕೂಡಾ ನರೇಂದ್ರ ಮೋದಿ ಅವರಿಗೆ ವೀಸಾ ನೀಡಲು ತಿರಸ್ಕರಿಸಿತ್ತು.
ನರೇಂದ್ರ ಮೋದಿ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆಯಾಗಿ ಕಾಡುತ್ತಿದ್ದ ಗೋಧ್ರಾ ಹತ್ಯಾಕಾಂಡ ಆರೋಪದಿಂದ ಇದೀಗ ಮುಕ್ತಿ ಸಿಕ್ಕಿದೆ. ಸುಧೀರ್ಘ ವಿಚಾರಣೆ ನಡೆಸಿದ ನಾನಾವತಿ ಸಮಿತಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪ್ರಕರಣದಿಂದ ಕ್ಲೀನ್ ಚಿಟ್ ನೀಡಿದೆ.
ಗೋಧ್ರಾ ಹತ್ಯಾಕಾಂಡ ಆರೋಪದಿಂದ ಮುಕ್ತಿ
2002ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ ಇಂದಿನ ಪ್ರಧಾನಮಂತ್ರಿ ಹಾಗೂ ಅಂದಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಗೆ ನಾನಾವತಿ ಸಮಿತಿ ಕ್ಲೀನ್ ಚಿಟ್ ನೀಡಿದೆ. ನಿರಂತರ ತನಿಖೆ ಬಳಿದ ಸಮಿತಿ ಈ ಕುರಿತು ವರದಿಯನ್ನು ಸಲ್ಲಿಸಿದೆ. ಹತ್ಯಾಕಾಂಡದ ವೇಳೆ ಕೆಲವು ಪ್ರದೇಶಗಳಲ್ಲಿ ಪೊಲೀಸರು ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.
ನಾನಾವತಿ ಸಮಿತಿ ನೀಡಿದ ವರದಿ ಬಗ್ಗೆ ಪ್ರಸ್ತಾಪ
ಬುಧವಾರ ಗುಜರಾತ್ ವಿಧಾನಸಭೆಯಲ್ಲಿ ಗೋಧ್ರಾ ಹತ್ಯಾಕಾಂಡದ ಕುರಿತು ನಾನಾವತಿ ಸಮಿತಿ ಸಲ್ಲಿಸಿದ ವರದಿ ಬಗ್ಗೆ ಪ್ರಸ್ತಾಪಿಸಲಾಯಿತು. ಐದು ವರ್ಷಗಳ ಹಿಂದೆ ಅಂದರೆ ಕಳೆದ 2014ರ ನವೆಂಬರ್.18ರಂದು ನಾನಾವತಿ ಸಮಿತಿ ಈ ವರದಿಯನ್ನು ಅಂದಿನ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರಿಗೆ ಸಲ್ಲಿಸಿತ್ತು ಎನ್ನಲಾಗಿದೆ.
ಅಂದಿನ ಮುಖ್ಯಮಂತ್ರಿಯಿಂದ ಸಮಿತಿ ರಚನೆ
ಗೋಧ್ರಾ ಹತ್ಯಾಕಾಂಡ ಕುರಿತು ಸಂಪೂರ್ಣ ತನಿಖೆ ನಡೆಸಲು ಅಂದಿನ ಗುಜರಾತ್ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿ ಸಮಿತಿಯನ್ನು ರಚಿಸಿದ್ದರು. 2002ರ ಮಾರ್ಚ್.6ರಂದು ನಿವೃತ್ತ ನ್ಯಾಯಾಧೀಶರಾದ ಕೆ.ಜಿ.ಶಾ ನೇತೃತ್ವದಲ್ಲಿ ಏಕಸದಸ್ಯ ಸಮಿತಿ ರಚಿಸಲಾಯಿತು. ವಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ದ್ವಿಸದಸ್ಯ ಸಮಿತಿಯನ್ನು ರಚಿಸಲಾಯಿತು. ಈ ವೇಳೆ ಮತ್ತೊಬ್ಬ ನಿವೃತ್ತ ನ್ಯಾಯಾಧೀಶರಾದ ಜಿ.ಟಿ.ನಾನಾವತಿಯವರನ್ನು ಸಮಿತಿಗೆ ಸೇರ್ಪಡೆಗೊಳಿಸಲಾಯಿತು.
2008ರ ಮಾರ್ಚ್ ತಿಂಗಳಿನಲ್ಲಿ ಸಮಿತಿ ಸದಸ್ಯರಾಗಿದ್ದ ನಿವೃತ್ತ ನ್ಯಾಯಾಧೀಶ ಕೆ.ಜಿ.ಶಾ ವಿಧಿವಶರಾದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೊಬ್ಬ ನಿವೃತ್ತ ನ್ಯಾಯಾಧೀಶ ಅಕ್ಷಯ್ ಮೆಹ್ತಾರನ್ನು ನೇಮಕ ಮಾಡಲಾಗಿತ್ತು.
ಉದ್ದೇಶಪೂರ್ವಕವಾಗಿ ಸಬರ್ ಮತಿ ರೈಲಿಗೆ ಬೆಂಕಿ
ಈ ಮೊದಲೇ ಗೋಧ್ರಾ ಹತ್ಯಾಕಾಂಡದ ಬಗ್ಗೆ ವರದಿ ಸಲ್ಲಿಸಿದ್ದ ಸಮಿತಿ ಸಬರ್ ಮತಿ ರೈಲಿಗೆ ಬೆಂಕಿ ಹಚ್ಚಿದ್ದು ಉದ್ದೇಶಪೂರ್ವಕ ಕೃತ್ಯ ಎಂದು ಹೇಳಿತ್ತು. ಕಳೆದ 2002ರ ಫೆಬ್ರವರಿ 27ರಂದು ಸಬರ್ ಮತಿ ರೈಲಿನ S-6 ಬೋಗಿಗೆ ಕೆಲವು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯದಿಂದ 59 ಕರಸೇವಕರು ಮೃತಪಟ್ಟಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
2002ರ ಗೋಧ್ರಾ ಹತ್ಯಾಕಾಂಡ ಬಗ್ಗೆ ಮಾಹಿತಿ
2002ರ ಫೆಬ್ರವರಿ 27ರಂದು ಸಬರ್ ಮತಿ ರೈಲಿನ S-6 ಬೋಗಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಇದರಿಂದ ರೈಲಿನಲ್ಲಿದ್ದ 59 ಮಂದಿ ಕರ ಸೇವಕರು ಸಜೀವವಾಗಿ ದಹನವಾಗಿದ್ದರು. ಈ ಘಟನೆಗೆ ಕೋಮು-ಗಲಭೆಯ ಬಣ್ಣ ಕಟ್ಟಿಲಾಗಿತ್ತು. ಅಲ್ಲಿಂದ ಮುಂದೆ ಗುಜರಾತ್ ನಲ್ಲಿ ಹತ್ಯಾಕಾಂಡವೇ ನಡೆದು ಹೋಯಿತು. ರಾಜ್ಯದ ಕೆಲವು ಪ್ರದೇಶಗಳಲ್ಲಿ ಮುಸ್ಲಿಂರನ್ನು ಮನೆಯಿಂದ ಹೊರಗೆಳೆದು ಜೀವಂತವಾಗಿ ಸುಟ್ಟು ಹಾಕಿದ ಘಟನೆಗಳು ಕೂಡಾ ನಡೆದಿದ್ದವು. ಇದಕ್ಕೆ ಅಂದಿನ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರವೇ ಪ್ರಚೋದನೆ ನೀಡಿತ್ತು ಎಂಬ ಆರೋಪ ಕೇಳಿ ಬಂದಿತ್ತು.