ಎಎಪಿ ಶಾಸಕರ ಅನರ್ಹತೆ 'ತುಘ್ಲಕ್ ಶಾಹಿ' ಕ್ರಮ: ಯಶವಂತ್ ಸಿನ್ಹಾ ಗರಂ
ನವದೆಹಲಿ, ಜನವರಿ 22: 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕುತ್ತಿದ್ದಂತೆ ಬಿಜೆಪಿಯ ಇಬ್ಬರು ನಾಯಕರು ಗರಂ ಆಗಿದ್ದಾರೆ.
ರಾಷ್ಟ್ರಪತಿಗಳ ನಡೆಯನ್ನು ಬಿಜೆಪಿಯ ಹಿರಿಯ ನಾಯಕರಾದ ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಖಂಡಿಸಿದ್ದು, 'ತುಘ್ಲಕ್ ಶಾಹಿಯ ಕೆಟ್ಟ ಆದೇಶ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
20 ಎಎಪಿ ಶಾಸಕರ ಅನರ್ಹತೆಗೆ ರಾಷ್ಟ್ರಪತಿಗಳಿಂದ ಅಂಕಿತ
"20 ಎಎಪಿ ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿಗಳ ಆದೇಶ ನೈಸರ್ಗಿಕ ನ್ಯಾಯದ ಗರ್ಭಪಾತ. ಯಾವುದೇ ವಿಚಾರಣೆ ಇಲ್ಲ, ಹೈಕೋರ್ಟ್ನ ಆದೇಶಕ್ಕೆ ಕಾಯುತ್ತಿಲ್ಲ, ಇದು ತುಘಲಕ್ ಶಾಹಿ ಕೆಟ್ಟ ಆದೇಶ" ಎಂದು ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.
President's order disqualifying the 20 AAP MLAs is complete miscarriage of natural justice. No hearing, no waiting for High Court's order. It is Tughluqshahi of the worst order.
— Yashwant Sinha (@YashwantSinha) January 21, 2018
ಸಿನ್ಹಾಗೆ ಧ್ವನಿಗೂಡಿಸಿರುವ ಮತ್ತೋರ್ವ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ, "ಷಡ್ಯಂತ್ರದ ರಾಜಕೀಯವಾಗಲೀ, ರಾಜಕೀಯ ಪಕ್ಷಗಳ ಹಿತಾಸಕ್ತಿಗಳಾಗಲೀ ಹೆಚ್ಚು ದಿನ ಬಾಳುವುದಿಲ್ಲ. ಚಿಂತಿಸಬೇಡಿ, ಸಂತೋಷವಾಗಿರಿ!" ಎಂದು ಟ್ವಿಟ್ಟರ್ ಮೂಲಕ ಎಎಪಿಗೆ ಧೈರ್ಯ ತುಂಬಿದ್ದಾರೆ.
"ನೀವು ಶೀಘ್ರದಲ್ಲೇ ಉತ್ತಮ ದೈವಿಕ ನ್ಯಾಯ ಪಡೆಯಲಿ ಎಂದು ಪ್ರಾರ್ಥಸುತ್ತೇನೆ ಮತ್ತು ಆ ನಂಬಿಕೆ ಇದೆ. ಸದ್ಯದಲ್ಲೇ ನಿಮಗೆ ನ್ಯಾಯ ಸಿಗಲಿದೆ. ಸತ್ಯಮೇವ ಜಯತೆ! ಜೈ ಹಿಂದ್!," ಎಂದೂ ಸಿನ್ಹಾ ಟ್ಟೀಟ್ ನಲ್ಲಿ ಹೇಳಿದ್ದಾರೆ.