ಸೇತುವೆ, ರೈಲ್ವೇ ಹಳಿ ಸ್ಫೋಟಿಸಲು 1.5 ಕೆಜಿ ಆರ್ಡಿಎಕ್ಸ್ ಹೊಂದಿದ ಪಾಕ್ ಉಗ್ರರು
ನವದೆಹಲಿ, ಸೆಪ್ಟೆಂಬರ್ 16: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಬೆಂಬಲಿತ ಆರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧನ ಮಾಡಿದ್ದಾರೆ. ಈ ಪೈಕಿ ಪಾಕಿಸ್ತಾನ ಮೂಲದ ಇಬ್ಬರು ಭಯೋತ್ಪಾದಕರ ಬಳಿ ಸುಮಾರು 1.5 ಕೆಜಿ ಆರ್ಡಿಎಕ್ಸ್ ಇತ್ತು ಎಂದು ಹೇಳಲಾಗಿದೆ. ಈ ಉಗ್ರರು ಸೇತುವೆಗಳನ್ನು, ರೈಲ್ವೇ ಹಳಿಗಳನ್ನು ಸ್ಪೋಟಿಸಲು ಹಾಗೂ ಹೆಚ್ಚಿನ ಜನ ಸಂಖ್ಯೆಯನ್ನು ಹೊಂದಿರುವ ಪ್ರದೇಶದಲ್ಲಿ ಸ್ಪೋಟ ನಡೆಸಲು ಈ ಭಯೋತ್ಪಾದಕರು ಸಂಚು ಹೂಡಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು "ಈ ದೊಡ್ಡ ಮಟ್ಟಿನ ಆರ್ಡಿಎಕ್ಸ್ ವಿಸ್ತಾರವಾದ ಪ್ರದೇಶಕ್ಕೆ ಹಾನಿ ಉಂಟು ಮಾಡಲು ಸಾಕಾಗುತ್ತದೆ," ಎಂದು ಹೇಳಿದ್ದಾರೆ. ಇನ್ನು ವಿಚಾರಣೆಯ ಸಂದರ್ಭದಲ್ಲಿ ಈ ಭಯೋತ್ಪಾದಕರಿಗೆ ಬೇರೆ ಬೇರೆ ಸಂಪರ್ಕಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ. "ವಿಚಾರಣೆಯನ್ನು ಮಾಡಲಾಗುತ್ತಿದೆ ಹೆಚ್ಚಿನ ಬಂಧನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್ ಐಎಸ್ಐ ಬೆಂಬಲಿತ ಉಗ್ರರ ಬಂಧನ: ಹಬ್ಬದ ವೇಳೆ ಹೂಡಿದ ಬಾಂಬ್ ದಾಳಿ ಸಂಚು ವಿಫಲ
ವಿಚಾರಣೆಯ ಸಂದರ್ಭದಲ್ಲಿ ಜೀಶನ್ ಕಮಾರ್ ಹಾಗೂ ಅಲಿಯಾಸ್ ಸಮೀರ್ ಒಸಾಮಾ, "ಗಾದ್ವಾರ್ ಕೋಟೆಯ ಮೂಲಕ ಪಾಕಿಸ್ತಾನಕ್ಕೆ ತಲುಪಲು ನಾವು ಸಮುದ್ರ ಮಾರ್ಗದಲ್ಲಿ ತೆರಳಿದ್ದೇವೆ," ಎಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಓಮಾನ್ನಿಂದ ಪಾಕಿಸ್ತಾನಕ್ಕೆ ಬರುವ ಸಂದರ್ಭದಲ್ಲಿ ಈ ಭಯೋತ್ಪಾದಕರು ಮೋಟರ್ ಬೋಟ್ಅನ್ನು ಬಳಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
1993 ರಲ್ಲಿ ಮುಂಬೈನಲ್ಲಿ ನಡೆದ ಸ್ಪೋಟದಂತೆ ಈ ಸ್ಪೋಟದ ಯೋಜನೆಯನ್ನು ಈ ಭಯೋತ್ಪಾದಕರು ರೂಪಿಸಿದ್ದರು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ. ಹಾಗಾಗಿ ಈ ಭಯೋತ್ಪಾದಕರನ್ನು ಬಂಧಿಸುವ ಮೂಲಕ ದೆಹಲಿ ಪೊಲೀಸರು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ಹೇಳಬಹುದು. ಈ ವಿದ್ವಂಸಕ ಕೃತ್ಯವನ್ನು ನಡೆಸಿದ ನಂತರ ಬೇರೆ ಬೇರೆ ಪ್ರದೇಶದಲ್ಲಿ ಇರುವ ಈ ಭಯೋತ್ಪಾದಕರು ಕೊನೆಗೆ ಒಟ್ಟಾಗಿ ಸೇರುವ ಆಲೋಚನೆಯನ್ನು ಕೂಡಾ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇನ್ನು ಇದೇ ಸಂದರ್ಭದಲ್ಲಿ ಬಾಂಗ್ಲಾದೇಶದಿಂದ ಬಂದ ಸುಮಾರು 15 ಬೆಂಗಾಳಿ ಮಾತನಾಡುವ ಜನರಿಗೂ ಕೂಡಾ ಐಎಸ್ಐ ತರಬೇತಿಯನ್ನು ನೀಡಿದೆ ಎನ್ನಲಾಗಿದೆ. ಇನ್ನೊಂದೆಡೆ ಪೊಲೀಸರು ಈ ಬೆಂಗಾಳಿ ಮಾತನಾಡುವ ಜನರು ಪಶ್ಚಿಮ ಬಂಗಾಳದವರು ಎಂದು ಕೂಡಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಭಾರತದ ಮೇಲೆ ದಾಳಿ ನಡೆಸಲು ಜೈಶ್ ಉಗ್ರರ ಸಂಚು: ವರದಿ
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಬೆಂಬಲಿತ ಆರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧನ ಮಾಡಿದ್ದಾರೆ. ಈ ಮೂಲಕ ಹಬ್ಬದ ಸಂದರ್ಭದಲ್ಲಿ ನಡೆಯಲಿದ್ದ ಭಾರೀ ಭಯೋತ್ಪಾದಕ ದಾಳಿಯನ್ನು ತಪ್ಪಿಸಿದ್ದಾರೆ. ಬಂಧಿತ ಆರು ಮಂದಿ ಉಗ್ರರು ಪಾಕ್ನ ಐಎಸ್ಐ ಬೆಂಬಲಿತ, ಐಎಸ್ಐ ನಿಂದ ತರಬೇತಿ ಪಡೆದವರು ಎಂದು ಮಾಧ್ಯಮದ ವರದಿಗಳು ಹೇಳಿದೆ. ದೆಹಲಿ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈ ಭಯೋತ್ಪಾದಕರು ಬಾಂಬ್ ಸ್ಪೋಟ ನಡೆಸಲು ಸಂಚು ಹೂಡಿದ್ದರು ಎಂದು ಹೇಳಲಾಗಿದೆ.
ಬಂಧಿತರನ್ನು ಜಾನ್ ಮೊಹಮ್ಮದ್ ಶೇಕ್ (47), ಅಲಿಯಾಸ್ ಸಮೀರ್ ಒಸಾಮಾ (22), ಮೂಲ್ಚಂದ್ (47), ಜೀಶನ್ ಕಮಾರ್ (28), ಮೊಹಮ್ಮದ್ ಅಬು ಬಕಾರ್ (23) ಹಾಗೂ ಮೊಹಮ್ಮದ್ ಅಮೀರ್ ಜಾವೇದ್ (31) ಎಂದು ಗುರುತಿಸಲಾಗಿದೆ. ಈ ಆರು ಮಂದಿ ಶಂಕಿತ ಭಯೋತ್ಪಾದಕರನ್ನು ಉತ್ತರ ಪ್ರದೇಶ ಹಾಗೂ ನವದೆಹಲಿಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಇನ್ನು ಬಂಧಿತರ ಪೈಕಿ ಒಸಾಮಾ ಹಾಗೂ ಕಮಾರ್ ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು, ಪಾಕಿಸ್ತಾನದ ಅಂತರ ಸೇವೆಗಳ ಗುಪ್ತಚರ ಇಲಾಖೆಯ ಸೂಚನೆಯಂತೆ ಇವರಿಬ್ಬರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನವದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಐಇಡಿ ಬಾಂಬ್ಗಳನ್ನು ಇಡಲು ಸರಿಯಾದ ಸ್ಥಳವನ್ನು ನೋಡಿ ಸೂಚಿಸುವ ಕಾರ್ಯವನ್ನು ಈ ಇಬ್ಬರು ಭಯೋತ್ಪಾದಕರಿಗೆ ನೀಡಲಾಗಿತ್ತು," ಎಂದು ಪೊಲೀಸರು ತಿಳಿಸಿದ್ದಾರೆ.
(ಒನ್ ಇಂಡಿಯಾ ಸುದ್ದಿ)