1984ರ ಸಿಖ್ ಹತ್ಯಾಕಾಂಡ : ಸಜ್ಜನ್ ಕುಮಾರ್ ಗೆ ನಿರೀಕ್ಷಣಾ ಜಾಮೀನು
ನವದೆಹಲಿ, ಡಿಸೆಂಬರ್ 21: ದೆಹಲಿಯ ಕಂಟೋನ್ಮೆಂಟ್ ಬಳಿ 1984ರಲ್ಲಿ ನಡೆದ ಸಿಖ್ ನರಮೇಧ, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರಿಗೆ ಇಲ್ಲಿನ ದ್ವಾರಕ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ಕರ್ ಡೂಮಾ ನ್ಯಾಯಾಲಯದಿಂದ ಸಜ್ಜನ್ ಕುಮಾರ್ ಅವರು ಖುಲಾಸೆಗೊಂಡಿದ್ದಾರೆ.
ವೈಯಕ್ತಿಕ ಬಾಂಡ್, 1 ಲಕ್ಷ ರೂಪಾಯಿ ಶ್ಯೂರಿಟಿ ಮೊತ್ತ ಪಾವತಿಸಬೇಕು, ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತುವಿಧಿಸಿ ನಿರೀಕ್ಷಣಾ ಜಾಮೀನು ನೀಡಲಾಗಿದೆ. ವಿಶೇಷ ತನಿಖಾ ದಳ(ಎಸ್ ಐಟಿ) ಹಾಗೂ ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಹರ್ವಿಂದರ್ ಸಿಂಗ್ ಅವರು ಸಲ್ಲಿಸಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಏನಿದು ಪ್ರಕರಣ: 1984ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡ ಸಜ್ಜನ್ ಕುಮಾರ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. ಸಜ್ಜನ್ ಕುಮಾರ್ ಅವರು ದೆಹಲಿಯ ಕಂಟೋನ್ಮೆಂಟ್ ಬಳಿ ಸಿಖ್ ಧರ್ಮೀಯರ ಮೇಲೆ ತಮ್ಮ ಬೆಂಬಲಿಗರಿಂದ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಅಲ್ಲದೆ ಹಿಂಸಾಚಾರಕ್ಕೆ ಬೆಂಬಲ ನೀಡಿದ್ದರೂ ಎಂದು ಅವರ ವಿರುದ್ಧ 2 ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದರಲ್ಲಿ ಸಜ್ಜನ್ ಕುಮಾರ್ ಖುಲಾಸೆಗೊಂಡಿದ್ದಾರೆ.
ನ್ಯಾಯಮೂರ್ತಿ ನಾನಾವತಿ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಸಜ್ಜನ್ ಕುಮಾರ್ ವಿರುದ್ಧ 2005ರಲ್ಲಿ ಮೊಕದ್ದಮೆ ದಾಖಲಾಗಿತ್ತು. ಅಲ್ಲದೆ ಸಿಬಿಐ 2010 ಜನವರಿಯಲ್ಲಿ ಕುಮಾರ್ ವಿರುದ್ಧ 2 ಚಾರ್ಜ್ಶೀಟ್ಗಳನ್ನು ಸಲ್ಲಿಸಿತ್ತು.(ಒನ್ಇಂಡಿಯಾ ಸುದ್ದಿ)