1984ರ ಸಿಖ್ ನರಮೇಧ; ಮಧ್ಯಪ್ರದೇಶ ಸಿಎಂ ವಿರುದ್ಧ ಕೇಸ್ ರೀ ಓಪನ್
ನವದೆಹಲಿ, ಸೆಪ್ಟೆಂಬರ್ 9: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧದ 1984ರ ಸಿಖ್ ವಿರೋಧಿ ದಂಗೆ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳುವ (ರೀ ಓಪನ್) ಪ್ರಸ್ತಾವಕ್ಕೆ ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ದೆಹಲಿಯ ಶಿರೋಮಣಿ ಅಕಾಲಿ ದಳದ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಸೋಮವಾರ ಹೇಳಿದ್ದಾರೆ.
"ಅಕಾಲಿ ದಳದ ದೊಡ್ಡ ವಿಜಯ ಇದು. ಕಮಲ್ ನಾಥ್ ವಿರುದ್ಧದ 1984ರ ಸಿಖ್ ನರಮೇಧದ ಪ್ರಕರಣವನ್ನು ಎಸ್ ಐಟಿ ಕೈಗೆತ್ತಿಕೊಳ್ಳಲಿದೆ. ಕಳೆದ ವರ್ಷ ನಾನು ನೀಡಿದ ಅರ್ಜಿಯ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಕರಣ ಸಂಖ್ಯೆ 601/84 ಅನ್ನು ಕಮಲ್ ನಾಥ್ ವಿರುದ್ಧ ಹೊಸದಾಗಿ ಸಾಕ್ಷ್ಯಾಧಾರವನ್ನು ಪರಿಗಣಿಸಿ ಮತ್ತೆ ಕೈಗೆತ್ತಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಸಿಖ್ ಹತ್ಯಾಕಾಂಡ ಕುರಿತ ಹೇಳಿಕೆ: ಸ್ಯಾಮ್ ಪಿತ್ರೋಡಾ ಕ್ಷಮೆ ಯಾಚನೆ
ದೆಹಲಿ ಸಿಖ್ ಗುರುದ್ವಾರ್ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿರುವ ಸಿರ್ಸಾ, ಕಮಲ್ ನಾಥ್ ವಿರುದ್ಧದ ಆರೋಪವನ್ನು ವಿಶೇಷ ತನಿಖಾ ದಳ (ಎಸ್ ಐಟಿ) ತನಿಖೆ ನಡೆಸಲಿದೆ. ಈ ಪ್ರಕರಣ ಮತ್ತೆ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ಎಸ್ ಐಟಿಗೆ ಧನ್ಯವಾದ. ಸಿಖ್ಖರ ಹತ್ಯೆಯಲ್ಲಿ ಕಮಲ್ ನಾಥ್ ಪಾತ್ರವನ್ನು ಕಣ್ಣಾರೆ ಕಂಡಿರುವ ಪ್ರತ್ಯಕ್ಷದರ್ಶಿಗಳು ಸಾಕ್ಷಿಯಾಗಲು ಮುಂದೆ ಬರಬೇಕು. ಹೆದರುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.
ಸದ್ಯದಲ್ಲೇ ಕಮಲ್ ನಾಥ್ ಬಂಧನ ಆಗುತ್ತದೆ. ಸಜ್ಜನ್ ಕುಮಾರ್ ಗೆ ಏನಾಯಿತೋ ಅದೇ ಕಮಲ್ ನಾಥ್ ಗೂ ಆಗುತ್ತದೆ ಎಂದು ಸಿರ್ಸಾ ಹೇಳಿದ್ದಾರೆ. ಕಾಂಗ್ರೆಸ್ ನಿಂದ ಮೂರು ಬಾರಿ ಸಂಸದರಾಗಿದ್ದ ಸಜ್ಜನ್ ಕುಮಾರ್ ಅವರು 1984ರ ಸಿಖ್ ನರಮೇಧದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
1984ರಲ್ಲಿ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಅವರನ್ನು ಅಂಗರಕ್ಷಕರು ಹತ್ಯೆ ಮಾಡಿದ್ದರು. ಅ ಅಂಗರಕ್ಷಕರು ಸಿಖ್ ಸಮುದಾಯದವರಾಗಿದ್ದರು. ಇಂದಿರಾ ಹತ್ಯೆಯ ನಂತರ ನವದೆಹಲಿಯಲ್ಲಿ ಸಿಖ್ಖರ ನರಮೇಧ ನಡೆದಿತ್ತು.
ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಕಮಲ್ ನಾಥ್ ಮಧ್ಯೆ ರಾಜಕೀಯ ಕಂದರ ವಿಪರೀತ ದೊಡ್ಡದಾಗಿರುವ ಈ ವೇಳೆಯಲ್ಲಿ ಕಮಲ್ ನಾಥ್ ವಿರುದ್ಧ ಪ್ರಕರಣ ಕೈಗೆತ್ತಿಕೊಂಡಿರುವುದು ಮುಂದಿನ ತಿರುವುಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.