ನವ ದೆಹಲಿಯಲ್ಲಿ ಒಂದೇ ದಿನ 1656 ಮಂದಿಗೆ ಕೊರೊನಾ ಸೋಂಕು
ನವದೆಹಲಿ, ಮೇ 6: ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಕಡಿಮೆ ಆಯ್ತು ಅನ್ನುವಷ್ಟರಲ್ಲೇ ಮತ್ತೆ ಏರಿಕೆಯಾಗುತ್ತಿದೆ. ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 1656 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ನವದೆಹಲಿಯಲ್ಲಿ ಶುಕ್ರವಾರ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೂನ್ಯವಾಗಿದೆ. ಆದರೆ ಕೋವಿಡ್-19 ಪಾಸಿಟಿವಿಟಿ ದರ ಶೇ.5.39ರಷ್ಟಾಗಿದೆ. ಒಂದು ದಿನ ಮೊದಲು ನಗರದಲ್ಲಿ ಒಟ್ಟು 30,709 ಮಂದಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ನಡೆಸಲಾಗಿತ್ತು.
ಹುಷಾರ್: ನೀವು ಸೇವಿಸುವ ನೀರು, ಹಣ್ಣು, ಆಹಾರದಿಂದಲೇ ಹರಡುವುದು ಶಿಗೆಲ್ಲಾ ಸೋಂಕು!
ರಾಷ್ಟ್ರ ರಾಜಧಾನಿಯಲ್ಲಿ ಹೊಸ ಕೋವಿಡ್-19 ಸೋಂಕಿತ ಪ್ರಕರಣಗಳಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆಯು 18,91,425ಕ್ಕೆ ಏರಿಕೆಯಾಗಿದೆ. ಅದೇ ರೀತಿ ಒಟ್ಟು ಸಾವಿನ ಸಂಖ್ಯೆ 26,177ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ
ನವದೆಹಲಿಯಲ್ಲಿ ಗುರುವಾರವೊಂದೇ ದಿನ 1365 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಅಂದು ಪಾಸಿಟಿವಿಟಿ ದರ ಶೇ.6.35ರಷ್ಟಿತ್ತು. ಅದೇ ರೀತಿ ಬುಧವಾರ 1,354 ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇಕಡಾ 7.64ರಷ್ಟಿತ್ತು. ಕೋವಿಡ್-19 ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದರು. ಮಂಗಳವಾರ ಕೋವಿಡ್-19 ಪಾಸಿಟಿವಿಟಿ ದರ ಶೇ.5.97ರಷ್ಟಾಗಿದ್ದು, ಒಂದು ದಿನದಲ್ಲಿ 1414 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿತ್ತು.
ನವದೆಹಲಿಯಲ್ಲಿ ಕಂಟೈನ್ಮೆಂಟ್ ವಲಯಗಳು ಹೆಚ್ಚಳ
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರದ ಹೊತ್ತಿದೆ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆಯು 6,096ಕ್ಕೆ ಏರಿಕೆಯಾಗಿದೆ. ಹಿಂದಿನ ದಿನ ಸಕ್ರಿಯ ಪ್ರಕರಣಗಳ ಸಂಖ್ಯೆ 5,746ರಷ್ಟಿತ್ತು. ಇತ್ತೀಚಿನ ಆರೋಗ್ಯಇಲಾಖೆ ಬುಲೆಟಿನ್ ಪ್ರಕಾರ, ದೆಹಲಿಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ ಗುರುವಾರ 1,473 ರಿಂದ 1,597ಕ್ಕೆ ಏರಿಕೆಯಾಗಿದೆ.
ಹೋಮ್ ಕ್ವಾರೆಂಟೇನ್ ನಲ್ಲಿ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ
ನವದೆಹಲಿಯಲ್ಲಿ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ವಿರಳವಾಗಿದೆ. ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದರೂ ಬಹುತೇಕ ರೋಗಿಗಳು ಹೋಮ್ ಕ್ವಾರೆಂಟೇನ್ನಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಕೋವಿಡ್-19 ಸೋಂಕಿನಿಂದ 200 ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಿದ್ದರೆ. 4,269 ರೋಗಿಗಳು ಮನೆಯಲ್ಲೇ ಕ್ವಾರೆಂಟೈನ್ ಆಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿನ ಕೋವಿಡ್-19 ರೋಗಿಗಳಿಗೆ ಮೀಸಲು ಇರಿಸಿರುವ 9,590 ಹಾಸಿಗೆಗಳಲ್ಲಿ ಶೇ. 2.09ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಹೊಸ ಅಲೆಯಿಲ್ಲ
ದೆಹಲಿಯಲ್ಲಿ ಕಳೆದ ಕೆಲವು ವಾರಗಳಲ್ಲಿ ಕೋವಿಡ್-19 ಪ್ರಕರಣಗಳ ಏರಿಕೆಯನ್ನು ಗಮನಿಸಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಯಾವುದೇ ಹೊಸ ಅಲೆ ಇಲ್ಲ ಎಂಬುದನ್ನು ಖಾತ್ರಿಪಡಿಸಿದ್ದರು. ಆದರೆ ಸೋಂಕು ಹರಡದಂತೆ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಖ್ಯಾತ ಸಾಂಕ್ರಾಮಿಕ ರೋಗ ತಜ್ಞ ಡಾ. ಚಂದ್ರಕಾಂತ ಲಹರಿ, ಈ ಹಿಂದೆಯೇ ಕೋವಿಡ್-19 ಪರೀಕ್ಷೆಯ ಪಾಸಿಟಿವಿಟಿ ದರವು ಸ್ಥಿರವಾಗಿದೆ. ಇದರರ್ಥ ಸೋಂಕು ಒಂದೇ ಪ್ರಮಾಣದಲ್ಲಿ ಹರಡುತ್ತಿದೆ. ಇಲ್ಲಿ ಯಾವುದೇ ಹೊಸ ಅಲೆಯ ಆತಂಕ ಬೇಕಾಗಿಲ್ಲ ಎಂದು ಹೇಳಿದ್ದರು.