ಮೊದಲ ಆಯ್ಕೆ: ರಾಜ್ಯದಿಂದ 11, ದೇಶದಿಂದ 315 ಮಂದಿ
ನವದೆಹಲಿ, ಮೇ 23- ನೂತನ ಸರಕಾರ ಅಧಿಕಾರಕ್ಕೆ ಬರಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ಮಧ್ಯೆ 16ನೆಯ ಲೋಕಸಭೆಗೆ ಮೊದಲ ಪ್ರಯತ್ನದಲ್ಲೇ ಯಾರೆಲ್ಲಾ ಗೆದ್ದು ಬಂದಿದ್ದಾರೆ ಎಂದು ಫಲಿತಾಂಶದತ್ತ ಕಣ್ಣುಹಾಯಿಸಿದಾಗ ಅನೇಕ ಆಸಕ್ತಿಕರ ವಿಷಯಗಳು ಹೊರಬೀಳುತ್ತವೆ.
ಕರ್ನಾಟಕದಿಂದ ಹಾಲಿ ಲೋಕಸಭೆಗೆ ಒಟ್ಟು 11 ಮಂದಿ ಮೊದಲ ಪ್ರಯತ್ನದಲ್ಲೇ ಆಯ್ಕೆಯಾಗಿದ್ದಾರೆ. ಇವರಲ್ಲಿ ಅತ್ಯಂತ ಹಿರಿಯರಾಗಿ (ಅತಿ ಹೆಚ್ಚು ಮತಗಳ ಅಂತದೊಂದಿಗೂ ಸಹ) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಆಯ್ಕೆಯಾಗಿದ್ದಾರೆ, ಅತಿ ಕಿರಿಯರಾಗಿ ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಆಯ್ಕೆಯಾಗಿರುವುದು ವಿಶೇಷವಾಗಿದೆ.
ನೆರೆಯ ತಮಿಳುನಾಡಿನಲ್ಲಿ ಅಣ್ಣಾ ಡಿಎಂಕೆಯ 37 ಸಂಸದರ ಪೈಕಿ 34 ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
PRS Legislative Research ಪ್ರಕಾರ 543 ಸದಸ್ಯ ಬಲದ ಲೋಕಸಭೆಯಲ್ಲಿ 315 ಸಂಸದರು (ಶೇ. 58ರಷ್ಟು) ಮೊಟ್ಟ ಮೊದಲ ಬಾರಿಗೆ ಸಂಸತ್ ಅಂಗಳ ಪ್ರವೇಶ ಮಾಡಿದ್ದಾರೆ. ಸಂಸದರಲ್ಲಿ ರಾಮ್ ವಿಲಾಸ್ ಪಾಸ್ವಾನ್, ಕಮಲ್ ನಾಥ್, ಪಿಎ ಸಂಗ್ಮಾ ( ತಲಾ 9 ಬಾರಿ), ಜಾರ್ಖಂಡ್ ರಾಜ್ಯದಿಂದ ಕರಿಯಾ ಮುಂಡ ಹಾಗೂ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ಮಧ್ಯ ಪ್ರದೇಶದಿಂದ ಸುಮಿತ್ರ ಮಹಾಜನ್ ಮತ್ತು ಒರಿಸ್ಸಾದಿಂದ ಅರ್ಜುನ್ ಚರಣ್ ತಲಾ 8 ಬಾರಿ ಗೆದ್ದು ದಾಖಲೆ ನಿರ್ಮಿಸಿದ್ದಾರೆ.