ಜನಕ್ಕೆ ಇಲ್ಲ ಕೊರೊನಾ ಭಯ: 14.30 ಲಕ್ಷ ರೈಲು ಟಿಕೆಟ್ ಬುಕ್!
ನವದೆಹಲಿ, ಮೇ 22: ಜೂನ್ 1 ರಿಂದ ಪ್ರಯಾಣಿಕರ ರೈಲು ಸಂಚಾರ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ.
ರೈಲು ಟಿಕೆಟ್ ಬುಕ್ಕಿಂಗ್ ಆರಂಭವಾದಾಗಿನಿಂದ ಇಲ್ಲಿಯವರೆಗೆ 14.30 ಲಕ್ಷ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಜೂನ್ 1 ರಂದು ಎಸಿ ರೈಲುಗಳು ಹೊರತುಪಡಿಸಿ ದೇಶಾದ್ಯಂತ 200 ವಿಶೇಷ ರೈಲುಗಳು ಸಂಚರಿಸಲಿವೆ.
ಮಾರ್ಗಸೂಚಿ ಉಲ್ಲಂಘನೆ; ಗೃಹ ಇಲಾಖೆಯಿಂದ ರಾಜ್ಯಗಳಿಗೆ ಪತ್ರ
ಕೊರೊನಾ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದರೂ ಜನಕ್ಕೆ ಕೊರೊನಾ ಭಯ ಇಲ್ಲ ಎಂಬಂತಾಗಿದ್ದು, ಪ್ರಯಾಣಿಕರು ತಮ್ಮ ತಮ್ಮ ಅಗತ್ಯ ಕೆಲಸಗಳಿಗೆ ಸಂಚರಿಸಲು ರೈಲು ಪ್ರಯಾಣದ ಮೊರೆ ಹೋಗಿದ್ದಾರೆ.
ಮೇ 22 ರಿಂದ ರೈಲು ಟಿಕೆಟ್ ಬುಕಿಂಗ್ ಕೌಂಟರ್ ಸೌಲಭ್ಯ ದೇಶಾದ್ಯಂತ ಪ್ರಾರಂಭವಾಗಿದೆ. ಅಂಚೆ ಕಚೇರಿ, ಸುವಿಧಾ ಕೇಂದ್ರ, ಐಆರ್ಸಿಟಿಸಿ ಅಧಿಕೃತ ಏಜೆಂಟ್, ಪಿಆರ್ಎಸ್ ಕೇಂದ್ರಗಳಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸುವುದು ಹಾಗೂ ಟಿಕೆಟ್ ರದ್ದು ಮಾಡುವುದುನ್ನು ಮಾಡಬಹುದಾಗಿದೆ.
ಜೂನ್ 1 ರಿಂದ ಎಸಿ ರೈಲುಗಳು ಹೊರತುಪಡಿಸಿ ಸಾಮಾನ್ಯ ರೈಲುಗಳು ಸಂಚಾರ ಪ್ರಾರಂಭವಾಗುತ್ತಿರುವುದರಿಂದ ರೈಲ್ವೆ ಸಚಿವಾಲಯ ಪ್ರಯಾಣಿಕರ ಅನುಕೂಲಕ್ಕೆ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಕೊರೊನಾ ಲಾಕ್ಡೌನ್ ಇರುವುದರಿಂದ ಆಯಾ ರೈಲ್ವೆ ವಲಯಗಳು ಟಿಕೆಟ್ ಕೌಂಟರ್ ಆರಂಭ, ರದ್ದುಗೊಳಿಸುವ ಅಧಿಕಾರವನ್ನು ಹೊಂದಿರುತ್ತವೆ.