ಕೊರೊನಾ ಭೀತಿ: ಕುಂಭಮೇಳದಿಂದ ವಾಪಸ್ಸಾದವರಿಗೆ 14 ದಿನ ಗೃಹ ದಿಗ್ಬಂಧನ
ನವದೆಹಲಿ, ಏಪ್ರಿಲ್ 18: ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಿ ವಾಪಸ್ಸಾದವರು ಮತ್ತು ಕುಂಭಮೇಳಕ್ಕೆ ಹೋಗಲು ಬಯಸಿದ ಯಾತ್ರಿಕರು ಕಡ್ಡಾಯವಾಗಿ 14 ದಿನಗಳ ಗೃಹ ದಿಗ್ಬಂಧನಕ್ಕೆ ಒಳಗಾಗಬೇಕು. ಇದರ ಜೊತೆಗೆ ತಮ್ಮ ವಿವರವನ್ನು ಸರ್ಕಾರದ ಅಧಿಕೃತ ಜಾಲತಾಣದಲ್ಲಿ ನೋಂದಾಯಿಸಬೇಕು ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.
ನೊವೆಲ್ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಹೆಚ್ಚುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ಲಕ್ಷಾಂತರ ಯಾತ್ರಿಕರು ಭಾಗವಹಿಸಲು ಅನುಮತಿ ನೀಡಿರುವ ಕುಂಭಮೇಳದ ಆಚರಣೆಯು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಕುಂಭಮೇಳದಲ್ಲಿ ಭಾಗವಹಿಸಿದ್ದ 30 ಸಾಧುಗಳಿಗೆ ಕೊರೊನಾ ಸೋಂಕು
ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ 4ರಿಂದ ಆರಂಭವಾಗಿ ಏಪ್ರಿಲ್ 30ರವರೆಗೂ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸುವ ಮೊದಲು ಯಾತ್ರಿಕರು ತಮ್ಮ ವೈಯಕ್ತಿಕ ಮಾಹಿತಿ, ಗುರುತಿನ ಚೀಟಿ, ಹರಿದ್ವಾರಕ್ಕೆ ಹೋದ ದಿನಾಂಕ ಮತ್ತು ನವದೆಹಲಿಗೆ ವಾಪಸ್ಸಾದ ದಿನಾಂಕ ಸೇರಿದಂತೆ ಎಲ್ಲ ಮಾಹಿತಿಯನ್ನು WWW.delhi.gov.in ನಲ್ಲಿ ಅಪ್ ಲೋಡ್ ಮಾಡಬೇಕು.
ಕುಂಭಮೇಳದಿಂದ ಬಂದವರಿಗೆ 14 ದಿನ ಗೃಹ ದಿಗ್ಬಂಧನ
"ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ ದೆಹಲಿ ನಿವಾಸಿಗಳು ಅಲ್ಲಿಂದ ವಾಪಸ್ಸಾದ ನಂತರ 14 ದಿನಗಳವರೆಗೂ ಕಡ್ಡಾಯವಾಗಿ ಗೃಹ ದಿಗ್ಬಂಧನಕ್ಕೆ ಒಳಗಾಗಬೇಕು" ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಸೂಚನೆ ನೀಡಿದ್ದಾರೆ.
ಮಾಹಿತಿ ನೀಡದವರಿಗೆ 14 ದಿನ ಸಾಂಸ್ಥಿಕ ದಿಗ್ಬಂಧನ
ಒಂದು ವೇಳೆ ಕುಂಭಮೇಳಕ್ಕೆ ಭೇಟಿ ನೀಡಿದವರು ತಮ್ಮ ವಿವರವನ್ನು ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಅಪ್ ಲೋಡ್ ಮಾಡುವಲ್ಲಿ ವಿಫಲರಾದರೆ ಅಂಥವರನ್ನು 14 ದಿನಗಳ ಕಾಲ ಸಾಂಸ್ಥಿಕ ದಿಗ್ಬಂಧನಕ್ಕೆ ಒಳಪಡಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದಲ್ಲಿ ಉಲ್ಲೇಖಿಸಿದ ನಿಯಮವನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿ ಕಠಿಣ ಕ್ರಮತ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಕುಂಭಮೇಳದಲ್ಲಿ ಕೊರೊನಾ ಹರಡುವಿಕೆ ಭಯ
ಜಗತ್ತಿನ ಅತಿದೊಡ್ಡ ಧಾರ್ಮಿಕ ಆಚರಣೆ ಆಗಿರುವ ಹರಿದ್ವಾರದ ಕುಂಭಮೇಳದಲ್ಲಿ ಏಪ್ರಿಲ್ 10 ರಿಂದ 14ರವರೆಗೂ ಒಟ್ಟು 1701 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಏಪ್ರಿಲ್ 12ರಂದು ನಡೆದ ಸೋಮವತಿ ಅಮವಾಸ್ಯೆ ಮತ್ತು ಏಪ್ರಿಲ್ 14ರ ಮೇಷ ಸಂಕ್ರಾಂತಿ ದಿನ ಪುಣ್ಯಸ್ನಾನ ಮಾಡಿದರು. ಈ ಎರಡು ದಿನದಲ್ಲಿ 48 ಲಕ್ಷಕ್ಕೂ ಅಧಿಕ ಯಾತ್ರಿಕರು ಮತ್ತು ಸಾಧುಗಳು ಗಂಗೆಯಲ್ಲಿ ಮಿಂದೆದಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮಾಸ್ಕ್ ಧರಿಸದೇ ಕೊವಿಡ್-19 ನಿಯಮಗಳ ಸ್ಪಷ್ಟ ಉಲ್ಲಂಘನೆ ಆಗಿರುವುದು ಕಂಡು ಬಂದಿದೆ.
ನವದೆಹಲಿಯಲ್ಲಿ ಕೊರೊನಾವೈರಸ್ ಸೋಂಕಿನ ಕಾಟ
ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾವೈರಸ್ ಸೋಂಕಿನ ಅಲೆಯಿಂದ ಪ್ರತಿನಿತ್ಯ ದಾಖಲೆ ಮಟ್ಟದಲ್ಲಿ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 24375 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 827998ಕ್ಕೆ ಏರಿಕೆಯಾಗಿದೆ. ಒಂದೇ ದಿನ 167 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 11960ಕ್ಕೆ ಏರಿಕೆಯಾಗಿದೆ.