14 ಎಎಪಿ ಶಾಸಕರು ಪಕ್ಷ ತೊರೆಯಲು ರೆಡಿಯಿದ್ದಾರೆ: ವಿಜಯ್ ಗೋಯಲ್
ನವದೆಹಲಿ, ಮೇ 03: 14 ಆಮ್ ಆದ್ಮಿ ಪಕ್ಷದ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದಾರೆ. ಪಕ್ಷ ತನ್ನ ಮೂಲ ಉದ್ದೇಶವನ್ನು ಮರೆತು, ಬೇರೆಡೆಗೆ ಕೇಂದ್ರೀಕರಿಸಿದ್ದರ ಬಗ್ಗೆ ಅವರಲ್ಲಿ ಬೇಸರವಿದೆ ಎಂದು ಕೇಂದ್ರ ಸಚಿವ, ಬಿಜೆಪಿ ಮುಖಂಡ ವಿಜಯ್ ಗೋಯಲ್ ಹೇಳಿದ್ದಾರೆ.
ಬಿಜೆಪಿಯಿಂದ ಎಎಪಿ ಶಾಸಕರಿಗೆ 10 ಕೋಟಿ ರೂ. ಆಮಿಷ: ಕೇಜ್ರಿವಾಲ್ ಶಾಕಿಂಗ್ ಹೇಳಿಕೆ
ಬಿಜೆಪಿಯು ಎಎಪಿಯ ಕೆಲವು ಶಾಸಕರಿಗೆ 10 ಕೋಟಿ ರೂ. ಆಮಿಷವೊಡ್ಡಿ ಅವರನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್ ಗೋಯಲ್, ಬಿಜೆಪಿ ಯಾವ ಶಾಸಕರನ್ನೂ ಸೆಳೆಯಲು ಪ್ರಯತ್ನಿಸುತ್ತಿಲ್ಲ, ಖರೀದಿಸಲೂ ಯತ್ನಿಸಿಲ್ಲ. ಆದರೆ ಪಕ್ಷ್(ಎಎಪಿ) ತನ್ನ ಮೂಲ ಉದ್ದೇಶವನ್ನು ಮರೆತಿರುವುದರಿಂದ ಬೇಸರಗೊಂಡು 14 ಎಎಪಿ ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದಾರೆ ಎಂದು ಗೋಯಲ್ ತಿಳಿಸಿದರು.
"ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್, ಶಾಜಿಯಾ ಇಮ್ಲಿ ಮುಂತಾದ ನಾಯಕರು ಈಗಾಗಲೇ ಪಕ್ಷ ತೊರೆದಿದ್ದಾರೆ. ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಅವರೇ ಹೇಳಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷ ತಾನೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದರಿಂದ ಕೆಲವರಿಗೆ ಇರಿಸುಮುರಿಸುಂಟಾಗಿದ್ದು, ಪಕ್ಷ ತೊರೆಯಲು ನಿರ್ಧರಿಸಿದ್ದಾರೆ" ಎಂದು ಅವರು ಹೇಳಿದರು.