ದೆಹಲಿ ಆಸ್ಪತ್ರೆಯಲ್ಲಿ 12 ಶಂಕಿತ ಓಮಿಕ್ರಾನ್ ಪ್ರಕರಣಗಳು ಪತ್ತೆ
ನವದೆಹಲಿ ಡಿಸೆಂಬರ್ 3: ಕಳೆದ ಮೂರು ದಿನಗಳಿಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಆಗಮಿಸಿದ 12 ಶಂಕಿತ ಓಮಿಕ್ರಾನ್ ಪ್ರಕರಣಗಳನ್ನು ದೆಹಲಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಓಮಿಕ್ರಾನ್ ಸ್ಟ್ರೈನ್ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಅವರ ಮಾದರಿಗಳನ್ನು ಜಿನೋಮ್ ಪರೀಕ್ಷೆಗೆ ಕಳುಹಿಸಲಾಗಿದೆ. ಓಮಿಕ್ರಾನ್ ಶಂಕಿತ ಎಲ್ಲರೂ ದೆಹಲಿಯ ಲೋಕನಾಯಕ ಜೈ ಪ್ರಕಾಶ್ (LNJP) ಆಸ್ಪತ್ರೆಯಲ್ಲಿದ್ದಾರೆ. ಕೋವಿಡ್ ಪಾಸಿಟಿವ್ ಬಂದ್ ನಂತರ ನಿನ್ನೆ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಇನ್ನೂ ನಾಲ್ವರನ್ನು ದಾಖಲಿಸಲಾಗಿದೆ. ಆದರೆ ಅವರ ಜಿನೋಮ್ ಪರೀಕ್ಷೆಗಳು ಇನ್ನೂ ಹೊರಬಂದಿಲ್ಲ.
ಓಮಿಕ್ರಾನ್ ಶಂಕಿತರು ನಾಲ್ವರು ಯುಕೆಯಿಂದ, ನಾಲ್ವರು ಫ್ರಾನ್ಸ್ನಿಂದ, ಕೆಲವರು ತಾಂಜಾನಿಯಾದಿಂದ, ಒಬ್ಬರು ಬೆಲ್ಜಿಯಂನಿಂದ ಬಂದವರು. ಎಲ್ಲರೂ ಸ್ಥಿರರಾಗಿದ್ದಾರೆ. ಒಬ್ಬರಿಗೆ ಮಾತ್ರ ಜ್ವರವಿದೆ ಎಂದು ಎಲ್ಎನ್ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸುರೇಶ್ ಕುಮಾರ್ ಹೇಳಿದ್ದಾರೆ.ಜೀನೋಮ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗಿದ್ದು, ಅವುಗಳಲ್ಲಿ ಯಾವುದಾದರೂ ಓಮಿಕ್ರಾನ್ ಸೋಂಕಿತವಾಗಿದೆಯೇ ಎಂಬುದು ಐದಾರು ದಿನಗಳಲ್ಲಿ ತಿಳಿಯಲಿದೆ ಎಂದು ಅವರು ಹೇಳಿದರು. "ಜೀನೋಮ್ ಸೀಕ್ವೆನ್ಸಿಂಗ್ ದೀರ್ಘವಾದ ಮತ್ತು ಸಂಕೀರ್ಣವಾದ ಕಾರ್ಯವಿಧಾನವಾಗಿದೆ," ಎಂದು ಡಾ ಕುಮಾರ್ NDTV ಗೆ ತಿಳಿಸಿದ್ದಾರೆ.
ಭಾರತದಲ್ಲಿ ಇದುವರೆಗೆ ಎರಡು ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಎರಡೂ ಕರ್ನಾಟಕದಲ್ಲಿ ಪತ್ತೆಯಾಗಿವೆ. ಅವರಲ್ಲಿ ಒಬ್ಬರು 46 ವರ್ಷದ, ಇನ್ನೊಬ್ಬ ರೋಗಿಯು 66 ವರ್ಷದವರಾಗಿದ್ದಾರೆ. ಓರ್ವ ಸೋಂಕಿತ ವ್ಯಕ್ತಿ ನವೆಂಬರ್ 20ರಂದು ಸೌತ್ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಬಂದಿತ್ತು. ಮೂರು ದಿನ ಮಾತ್ರ ಹೋಟೆಲ್ ನಲ್ಲಿ ಕ್ವಾರಂಟೈನ್ ಆಗಿದ್ದರು. ಮೂರು ದಿನಗಳ ನಂತರ ಪರೀಕ್ಷೆ ಮಾಡಲಾಗಿದೆ. ನೆಗೆಟಿವ್ ಬಂದಿದೆ. ಈ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಕಂಡು ಬಂದಿರಲಿಲ್ಲ. ಪರೀಕ್ಷೆ ಬಳಿಕ ಇವರು ನೇರವಾಗಿ ಬೊಮ್ಮಸಂದ್ರಕ್ಕೆ ತೆರಳಿದ್ದಾರೆ. ನಂತರ ಅವರು ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಕಂಪನಿ ಬೋರ್ಡ್ ಮೀಟಿಂಗ್ನಲ್ಲಿ ಆರು ಜನ ಭಾಗಿಯಾಗಿದ್ದರು. ಹೋಮ್ ಕ್ವಾರಂಟೈನ್ ಆಗದೇ ಮೀಟಿಂಗ್ನಲ್ಲಿ ಅವರು ಭಾಗಿಯಾಗಿದ್ದಾರೆ. ಹೀಗಾಗಿ ಪ್ರಥಮ ಸಂಪರ್ಕದಲ್ಲಿದ್ದವರಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಶೀಲನೆ ನಡೆಸಲಾಗಿದ್ದು ಮಾದರಿಗಳನ್ನು ಪರೀಕ್ಷೆಗೆ ನೀಡಲಾಗಿದೆ. ಎರಡನೇ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟ್ರಿ ಇಲ್ಲ. ಇದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನವೆಂಬರ್ 22 ರಂದು ಎರಡನೇ ವ್ಯಕ್ತಿಗೆ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಪಾಸಿಟಿವ್ ಬಂದಿದೆ. ನವೆಂಬರ್ 24 ಸೋಂಕು ದೃಢಪಟ್ಟಿದೆ. 13 ಪ್ರಥಮ 213 ದ್ವೀತಿಯ ಸಂಪರ್ಕದಲ್ಲಿದ್ದರು. ಇವರಲ್ಲಿ ಮೂವರಿಗೆ ಪಾಸಿಟಿವ್ ಬಂದಿದೆ. ಒಟ್ಟು ಐದು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರಿನಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿದ್ದರಿಂದ ತುರ್ತು ಕ್ರಮಗಳಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೋತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು ರಾಜ್ಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಜೊತೆಗೆ ಕೊರೊನಾ ಮೂರನೇ ಅಲೆಯನ್ನು ನಿಯಂತ್ರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Recommended Video
ತಮಿಳುನಾಡಿನಲ್ಲಿ, ದಕ್ಷಿಣ ಆಫ್ರಿಕಾದ ಮಗು ಸೇರಿದಂತೆ ಇಬ್ಬರು ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಇಂದು ಮುಂಜಾನೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅವು ಓಮಿಕ್ರಾನ್ ಪ್ರಕರಣಗಳು ಎಂಬ ವರದಿಗಳನ್ನು ರಾಜ್ಯ ಸರ್ಕಾರ ನಿರಾಕರಿಸಿದ್ದು, ಮಾದರಿಗಳನ್ನು ಜೀನೋಮ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ವಿಶ್ವದಲ್ಲಿ ಈವರೆಗೆ 400 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಂಡುಬಂದ ಓಮಿಕ್ರಾನ್ ರೂಪಾಂತರವು 23 ದೇಶಗಳಲ್ಲಿ ದೃಢೀಕರಿಸಲ್ಪಟ್ಟಿದೆ ಮತ್ತು ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು WHO ಹೇಳಿದೆ.