ಮುಂಗಾರು ಅಧಿವೇಶನದ ವೇಳೆ ಅಶಿಸ್ತಿನ ವರ್ತನೆ: 12 ವಿಪಕ್ಷ ಸಂಸದರು ರಾಜ್ಯಸಭೆಯಿಂದ ಅಮಾನತು
ನವದೆಹಲಿ, ನವೆಂಬರ್ 29: ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಅಶಿಸ್ತಿನ ವರ್ತನೆ ತೋರಿದ ಹಾಗೂ ಸದನ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಇಂದಿನಿಂದ ಆರಂಭವಾದ ಚಳಿಗಾಲದ ಅಧಿವೇಶನದ ಉಳಿದ ಅವಧಿಯಲ್ಲಿ ಹನ್ನೆರಡು ಮಂದಿ ವಿರೋಧ ಪಕ್ಷದ ಸಂಸದರನ್ನು ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿದೆ.
ಮುಂಗಾರು ಅಧಿವೇಶನ ಆರಂಭ ಆಗುವುದಕ್ಕೂ ಒಂದು ದಿನದ ಮುಂದಷ್ಟೇ ಬಹಿರಂಗವಾಗಿದ್ದ ಪೆಗಾಸಸ್ ಹಗರಣದ ಸುದ್ದಿಯು ಮುಂಗಾರು ಅಧಿವೇಶನದಲ್ಲಿ ಭಾರೀ ಗದ್ದಲವನ್ನು ಸೃಷ್ಟಿ ಮಾಡಿದ್ದವು. ಇಸ್ರೇಲಿನ ಪೆಗಾಸಸ್ ತಂತ್ರಾಂಶವನ್ನು ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಭಾರೀ ಕೂಲಹಲವನ್ನು ಎಬ್ಬಿಸಿದ್ದವು.
ಪೆಗಾಸಸ್ ಗಲಾಟೆ: ರಾಜ್ಯಸಭೆಯಿಂದ 6 ಟಿಎಂಸಿ ಸಂಸದರ ಅಮಾನತು
ರಾಜ್ಯಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕುರ್ಚಿಗಳನ್ನು ಎಳೆದಾಡಿ, ನಾಮಫಲಕಗಳನ್ನು ಪ್ರದರ್ಶಿಸುತ್ತಾ ಗದ್ದಲ ಸೃಷ್ಟಿಸಲಾಗಿತ್ತು. ಆ ಸಂದರ್ಭದಲ್ಲೇ ಹಲವಾರು ಮಂದಿ ಸಂಸದರನ್ನು ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅಮಾನತು ಮಾಡಿದ್ದರು. ಮುಖ್ಯವಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಡೋಲಾ ಸೇನ್, ಮೊಹಮ್ಮದ್ ನಬೀಮುಲ್, ಅಬಿರ್ ರಂಜನ್ ಬಿಸ್ವಾಸ್, ಶಾಂತ ಛೆತ್ರಿ, ಅರ್ಪಿತಾ ಘೋಷ್, ಮೌಸಮ್ ನೂರ್ ಎಂಬ ಆರು ಸಂಸದರನ್ನು ಅಮಾನತುಗೊಳಿಸಲಾಗಿತ್ತು. ಈಗ ಮುಂಗಾರು ಅಧಿವೇಶನದಲ್ಲಿ ಗದ್ದಲ ಎಬ್ಬಿಸಿದ ಆರೋಪದಲ್ಲಿ ಹನ್ನೆರಡು ಮಂದಿ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಯಾರೆಲ್ಲಾ ಸಂಸದರು ಅಮಾನತು ಆಗಿದ್ದಾರೆ?
ಎಲಮರಮ್ ಕರೀಮ್ (ಸಿಪಿಎಂ), ಫುಲೋ ದೇವಿ ನೇತಮ್ (ಕಾಂಗ್ರೆಸ್), ಛಾಯಾ ವರ್ಮಾ (ಕಾಂಗ್ರೆಸ್), ರಿಪುನ್ ಬೋರಾ (ಕಾಂಗ್ರೆಸ್), ಬಿನೋಯ್ ವಿಸ್ವಾಮ್ (ಸಿಪಿಐ), ರಾಜಮಣಿ ಪಟೇಲ್ (ಕಾಂಗ್ರೆಸ್), ಡೋಲಾ ಸೇನ್ (ಟಿಎಂಸಿ), ಶಾಂತಾ ಛೆಟ್ರಿ (ಟಿಎಂಸಿ), ಸೈಯದ್ ನಾಸಿರ್ ಹುಸೇನ್ (ಕಾಂಗ್ರೆಸ್), ಪ್ರಿಯಾಂಕಾ ಚತುರ್ವೇದಿ (ಶಿವಸೇನಾ), ಅನಿಲ್ ದೇಸಾಯಿ (ಶಿವಸೇನಾ) ಮತ್ತು ಅಖಿಲೇಶ್ ಪ್ರಸಾದ್ ಸಿಂಗ್ (ಕಾಂಗ್ರೆಸ್).
ಅಧಿಕೃತ ಸೂಚನೆಯು ಏನು ಹೇಳುತ್ತದೆ?
"ಆಗಸ್ಟ್ 11 ರಂದು ಸದನದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಉದ್ಧೇಶಪೂರ್ವಕವಾಗಿ ದಾಳಿ ಮಾಡಲಾಗಿದೆ. ಕುರ್ಚಿಗಳನ್ನು ಎಳೆದಾಡಲಾಗಿದೆ. ಸದನದ ನಿಯಮವನ್ನು ಉಲ್ಲಂಘನೆ ಮಾಡಲಾಗಿದೆ. ಸದನದ ನಿಯಮಗಳ ಸಂಪೂರ್ಣ ದುರುಪಯೋಗವನ್ನು ತೀವ್ರವಾಗಿ ಖಂಡಿಸಲಾಗುವುದು. ದುರ್ನಡತೆ, ಅವಹೇಳನಕಾರಿ, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ತೋರಿದ್ದನ್ನು ಖಂಡನೆ ಮಾಡಲಾಗುತ್ತದೆ," ಎಂದು ಉಲ್ಲೇಖ ಮಾಡಲಾಗಿದೆ.
ಮಾರ್ಷಲ್ಗಳ ಮೇಲೆ ಸಿಪಿಐ (ಎಂ), ಕಾಂಗ್ರೆಸ್ ಸಂಸದರಿಂದ ಹಲ್ಲೆ: ಸಂಸತ್ ಗದ್ದಲದ ಬಗ್ಗೆ ಕೇಂದ್ರದ ವರದಿ
ಮುಂಗಾರು ಅಧಿವೇಶನದಲ್ಲಿ ನಡೆದಿದ್ದು ಏನು?
ನವದೆಹಲಿಯಲ್ಲಿ 14 ವಿರೋಧ ಪಕ್ಷಗಳ ನಾಯಕರು ಇದೇ ಪೆಗಾಸಸ್ ಬಗ್ಗೆ ಚರ್ಚಿಸಿದ್ದು ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದವು. ಪೆಗಾಸಸ್ ವಿಚಾರದಲ್ಲಿ ರಾಜ್ಯಸಭೆಯಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕುರ್ಚಿಗಳನ್ನು ಎಳೆದಾಡಿ, ನಾಮಫಲಕಗಳನ್ನು ಪ್ರದರ್ಶಿಸುತ್ತಾ ಗದ್ದಲ ಸೃಷ್ಟಿಸಲಾಗಿತ್ತು.
ಕಳೆದ ಜುಲೈ 23ರಂದು ರಾಜ್ಯಸಭೆಯ ತೃಣಮೂಲ ಕಾಂಗ್ರೆಸ್ ಪಕ್ಷದ ಸದಸ್ಯ ಸಂತಾನು ಸೇನ್ ಅಮಾನತುಗೊಂಡಿದ್ದರು. ರಾಜ್ಯಸಭೆಯಲ್ಲಿ ಇಸ್ರೇಲಿನ ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಕುರಿತು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡುತ್ತಿದ್ದರು. ಈ ವೇಳೆ ಸಚಿವರ ಕೈಯಲ್ಲಿದ್ದ ಪತ್ರಗಳನ್ನು ಕಸಿದುಕೊಂಡ ಸಂಸದ ಸಂತಾನು ಸೇನ್ ಅದನ್ನು ಹರಿದು ಹಾಕಿದ್ದರು.
ಕಳೆದ ಜುಲೈ 19ರಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಎರಡು ವಾರಗಳಲ್ಲಿ ಒಂದೇ ಒಂದು ದಿನ ಸುಗಮ ಕಲಾಪ ನಡೆದಿರಲಿಲ್ಲ. ಒಟ್ಟು 107 ಗಂಟೆಗಳಲ್ಲಿ ಕೇವಲ 18 ಗಂಟೆ ಮಾತ್ರ ಸಂಸತ್ ಕಲಾಪ ನಡೆದಿತ್ತು. ಇದರ ಹೊರತಾಗಿ ಸಂಸತ್ತಿನಲ್ಲಿ ನಡೆದ ಗದ್ದಲ ಗಲಾಟೆಯಿಂದ ದೇಶದ 133 ಕೋಟಿ ತೆರಿಗೆದಾರರ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ಸರ್ಕಾರವು ಆರೋಪ ಮಾಡಿದ್ದವು.