ಭಾರತದ ಪ್ರತೀಕಾರಕ್ಕೆ ಪಾಕಿಸ್ತಾನದ 11 ಸೈನಿಕರ ಸಾವು: ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿ
ನವದೆಹಲಿ, ನವೆಂಬರ್ 14: ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಯ ಕದನ ವಿರಾಮ ಉಲ್ಲಂಘನೆ ಮಾಡಿದ್ದಕ್ಕಾಗಿ, ಭಾರತೀಯ ಸೇನೆಯ ಪ್ರತೀಕಾರದ ಗುಂಡಿನ ದಾಳಿಯಲ್ಲಿ ಶುಕ್ರವಾರ 11 ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ.
ಭಾರತೀಯ ಸೇನೆಯ ಮೂಲಗಳ ಪ್ರಕಾರ ಎರಡು-ಮೂರು ಪಾಕಿಸ್ತಾನ ಸೇನಾ ವಿಶೇಷ ಸೇವಾ ಗುಂಪು (ಎಸ್ಎಸ್ಜಿ) ಕಮಾಂಡೋಗಳು ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ.
Video: ಭಾರತದ ಪ್ರತಿದಾಳಿಗೆ ಪಾಕ್ ಸೇನಾ ಬಂಕರ್ ನಾಶ, 8 ಯೋಧರು ಸಾವು
ನವೆಂಬರ್ 13 ರಂದು ಪಾಕಿಸ್ತಾನ ಸೇನೆಯು ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ, ಉರಿ ಪ್ರದೇಶದಿಂದ ಗುರೆಜ್ ವರೆಗಿನ ಅನೇಕ ಸ್ಥಳಗಳಲ್ಲಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿತ್ತು.
ಎಲ್ಒಸಿ ಘಟನೆ ಕುರಿತು ಚರ್ಚಿಸಲು ಪಾಕಿಸ್ತಾನ ವಿದೇಶಾಂಗ ಕಚೇರಿ ಶನಿವಾರ ಭಾರತೀಯ ರಾಯಭಾರಿಯನ್ನು ಕರೆಸಿದೆ. ಪಾಕಿಸ್ತಾನ ಡೈರೆಕ್ಟರ್ ಜನರಲ್ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಡಿಜಿ-ಐಎಸ್ಪಿಆರ್) ಮೇಜರ್ ಜನರಲ್ ಬಾಬರ್ ಇಫ್ತಿಕಾರ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರ ಪತ್ರಿಕಾಗೋಷ್ಠಿಯನ್ನು ನ.14ರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ.
ಭಾರತೀಯ ಸೇನೆಯ ಮುಂಚೂಣಿ ಪಡೆಗಳ ಪ್ರಕಾರ ಶುಕ್ರವಾರ ಕೇರನ್ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅನುಮಾನಾಸ್ಪದ ಚಲನೆಯನ್ನು ಗುರುತಿಸಿವೆ. ಭಾರತೀಯ ಗಡಿ ಪಡೆಗಳು ಒಳನುಸುಳುವಿಕೆ ಯೋಜನೆಯನ್ನು ವಿಫಲಗೊಳಿಸಿದವು. ಇದರ ಪರಿಣಾಮವಾಗಿ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ (ಸಿ.ಎಫ್.ವಿ) ಪ್ರಾರಂಭವಾಯಿತು.
ಉತ್ತರ ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಪಾಕಿಸ್ತಾನ ಸೇನೆಯ ಶಿಬಿರಗಳನ್ನು ಹೊಡೆಯುವ ವೀಡಿಯೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಪಾಕಿಸ್ತಾನ ಸೇನೆಯ ಶಿಬಿರಗಳ ಮೇಲೆ ಪ್ರತೀಕಾರದ ಗುಂಡಿನ ಸಂದರ್ಭದಲ್ಲಿ, ಭಾರತೀಯ ಸೇನೆಯು ಸ್ಪೈಕ್ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳನ್ನು ಸಹ ಬಳಸಿದೆ. ಇವುಗಳನ್ನು ಇತ್ತೀಚೆಗೆ ಇಸ್ರೇಲ್ನಿಂದ ತುರ್ತು ಸ್ವಾಧೀನ ಪ್ರಕರಣದಲ್ಲಿ ತರಿಸಿಕೊಳ್ಳಲಾಗಿತ್ತು.
ಕೇರನ್ ಸೆಕ್ಟರ್ ನಲ್ಲಿ ಎಲ್ಒಸಿ ಉದ್ದಕ್ಕೂ ಪಾಕಿಸ್ತಾನ ಶಸ್ತ್ರಗಳನ್ನು ಹಾರಿಸಿತು. ಈ ಅಪ್ರಚೋದಿತ ಕ್ರಮದಿಂದಾಗಿ ಭಾರತವು ಪ್ರತೀಕಾರ ತೀರಿಸಿಕೊಂಡಿತು. ಪಾಕಿಸ್ತಾನಸ ಹಲವಾರು ಮದ್ದುಗುಂಡಿನ ಶೇಖರಣೆಗಳು ಮತ್ತು ಅನೇಕ ಭಯೋತ್ಪಾದಕ ಉಡಾವಣಾ ಪ್ಯಾಡ್ಗಳಿಗೆ ಹಾನಿಯಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.