ಬುರಾರಿ ಆತ್ಮಹತ್ಯೆ: 11 ಶವ, 11 ಡೈರಿ ಮತ್ತು ಭಯ ಹುಟ್ಟಿಸುವ 11 ಸಂಗತಿ
ದೆಹಲಿ, ಜುಲೈ 11: ದೆಹಲಿಯ ಬುರಾರಿಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯ ಹುಟ್ಟಿಸುವ ಹಲವು ಸಂಗತಿಗಳು ಈಗಾಗಲೇ ಬಯಲಿಗೆ ಬಂದಿವೆ. ಅರ್ಥವಾಗದ ಈ ಪಜಲ್ ಗಳನ್ನು ಬಿಡಿಸುವ ಯತ್ನಗಳೂ ವಿಫಲವಾಗುತ್ತಿವೆ. ಡೈರಿಯಲ್ಲಿರುವ ವಿಚಿತ್ರ ಕೋಡ್ ಗಳನ್ನು ಡೀಕೋಡ್ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಒಂದು ಥ್ರಿಲ್ಲರ್ ಸಿನಿಮಾ ರೀತಿಯಲ್ಲಿ ಈ ಪ್ರಕರಣ ಕಾಣಿಸಿಕೊಳ್ಳುತ್ತಿದೆ.
ಈ ನಿಗೂಢ ಪ್ರಕರಣಕ್ಕೂ ಹನ್ನೊಂದಕ್ಕೂ ಅದೇನೋ ನಂಟು! ಅಂದು ಸತ್ತಿದ್ದು 11 ಜನ. ಮನೆಯಲ್ಲಿ ಸಿಕ್ಕ ಡೈರಿಗಳ ಸಂಖ್ಯೆ 11, ಈ ಡೈರಿಯನ್ನು ಬರೆಯುತ್ತ ಬರೋಬ್ಬರಿ 11 ವರ್ಷವಾಗಿತ್ತಂತೆ! ಅಷ್ಟೇ ಅಲ್ಲ ಮನೆಯಲ್ಲಿ ಅನುಮಾನ ಹುಟ್ಟಿಸುವ ಒಂದಷ್ಟು ಪೈಪುಗಳ ಕಂಡುಬಂದಿದ್ದು, ಅವುಗಳ ಸಂಖ್ಯೆಯೂ 11!
ದೆಹಲಿ ಸಾಮೂಹಿಕ ಆತ್ಮಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಫೋಟಕ ಮಾಹಿತಿ
ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಎದುರಿದ್ದ ಸಿಸಿಟಿವಿ ಕ್ಯಾಮರಾ ಫೂಟೇಜ್ ಲಭ್ಯವಾಗಿತ್ತು. ಇದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆಂದು ಮನೆಯ ಕೆಲ ಸದಸ್ಯರು ಸ್ಟೂಲ್ ಮತ್ತು ಇಲೆಕ್ಟ್ರಿಕಲ್ ವೈಯರ್ ಗಳನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಸೆರೆಯಾಗಿ ಆತಂಕ ಸೃಷ್ಟಿಸಿತ್ತು.
ಈ ಹನ್ನೊಂದರ ನಿಗೂಢತೆಯನ್ನು ಭೇದಿಸುವುದಕ್ಕೆ ಹೋದರೆ ಹಲವು ಸಂಗತಿಗಳು ಗೋಚರವಾಗುತ್ತವೆ. 11 ರೊಂದಿಗೆ ನಂಟು ಹೊಂದಿರುವ ಈ ಪ್ರಕರಣದ 11 ವಿಚಿತ್ರ ಸಂಗತಿಗಳು ಇಲ್ಲಿವೆ...
ಸಂಖ್ಯಾ ಶಾಸ್ತ್ರದಲ್ಲಿ 11ರ ಮಹತ್ವವೇನು?
ಸಂಖ್ಯಾ ಶಾಸ್ತ್ರದ ಪ್ರಕಾರ 11 'ಅಧ್ಯಾತ್ಮ ಸಂದೇಶ'ವನ್ನು ಸೂಚಿಸುತ್ತದೆ. ಸಂಖ್ಯಾಶಾಸ್ತ್ರದಲ್ಲಿ 11 ಅಥವಾ 22, 33 ಇಂಥ ಒಂದೇ ರೀತಿಯ ಎರಡು ಅಂಕಿಗಳಿದ್ದರೆ ಅವನ್ನು 'ಮಾಸ್ಟರ್ ನಂಬರ್' ಎಂದು ಕರೆಯುತ್ತಾರೆ. ಈ ಸಂಖ್ಯೆ 'ಆಂತರಿಕ ಸಂಘರ್ಷ ಮತ್ತು ಧಂಗೆ' ಸೂಚಿಸುತ್ತದೆ. ಈ ಸಂಖ್ಯೆ ಉದ್ವಿಗ್ನತೆ, ಐಷಾರಾಮಿತನ, ಪಾಪ ಇವುಗಳನ್ನು ಪ್ರತಿನಿಧಿಸುತ್ತದೆ. ಮೊದಲ ಮಹಾಯುದ್ಧ 11 ತಿಂಗಳು, 11 ನೇ ದಿನ, 11 ಗಂಟೆಗೆ ಸಮಾಪ್ತಿಯಾಯಿತು ಎನ್ನುತ್ತಾರೆ. ಒಟ್ಟಿನಲ್ಲಿ 11 ರ ಸಂಖ್ಯೆಗೂ ಅಧ್ಯಾತ್ಮಕ್ಕೂ ಸಾಕಷ್ಟು ನಂಟಿದೆ ಎಂಬುದು ಸಂಖ್ಯಾ ಶಾಸ್ತ್ರಜ್ಞರ ಮಾತು.
11ವರ್ಷಗಳಿಂದ ಬರೆದ 11 ಡೈರಿ!
ಒಟ್ಟು ಹನ್ನೊಂದು ವರ್ಷಗಳಿಂದ ಬರೆದ ಈ ಡೈರಿಯಲ್ಲಿ ಚಿತ್ರ ವಿಚಿತ್ರ ಸಂಕೇತಗಳಿವೆ. ಈ ಡೈರಿಯಲ್ಲಿ 'ಆಲದ ಮರದ'ಬಗ್ಗೆ ಅಲ್ಲಲ್ಲಿ ಬರೆಯಲಾಗಿದೆ. ಆಲದ ಮರದ ಬೀಳಲಿನಂತೆ ನೇತಾಡುವ ಬಗ್ಗೆಯೂ ಇದರಲ್ಲಿ ಉಲ್ಲೇಖಿಸಲಾಗಿದೆ. ಕೊನೆಗೆ ಇವರೆಲ್ಲರೂ ನೇಣು ಹಾಕಿಕೊಂಡು ಮೃತರಾಗಿದ್ದಕ್ಕೂ ಈ ಸಾಲುಗಳಿಗೂ ಏನಾದರೂ ಸಂಬಂಧವಿದ್ದೀತೆ ಎಂಬುದೂ ಕುತೂಹಲದ ಸಂಗತಿ ಎನ್ನಿಸಿದೆ!
ದೆಹಲಿಯಲ್ಲಿ 11 ಜನರ ನಿಗೂಢ ಆತ್ಮಹತ್ಯೆ ಮತ್ತು ಪ್ರಳಯದ ಸಂದೇಶ!
11 ಪೈಪುಗಳು!
ಈ ಮನೆಯ ಗೋಡೆಯಲ್ಲಿ ನಂತರ ಕಂಡುಬಂದ ಹನ್ನೊಂದು ಪೈಪುಗಳು ಮತ್ತಷ್ಟು ಕುತೂಹಲ ಕೆರಳಿಸಿದ್ದವು. ಈ ಪೈಪುಗಳನ್ನು ಸೋಲಾರ್ ಸಂಪರ್ಕಕ್ಕಾಗಿ ತರಲಾಗಿತ್ತು ಎಂದು ಸಂಬಂಧಿಗಳೇನೋ ಹೇಳಿದ್ದಾರೆ. ಆದರೆ ಇದೂ 11 ರ ಸಂಖ್ಯೆಯಲ್ಲೇ ಇರುವುದು ಕಾಕತಾಳೀಯವೇ? ಕೆಲವರ ಅಂದಾಜಿನ ಪ್ರಕಾರ ಈ ಪೈಪುಗಳು ನಿಧನ ಹೊಂದಿದವರ ಆತ್ಮ ಹೊರ ಹೋಗುವುದಕ್ಕಿದ್ದ ಮಾರ್ಗ!
ಶೇರ್ಡ್ ಸೈಕೋಟಿಕ್ ಸಮಸ್ಯೆ!
ಈ ಮನೆಯ ಸದಸ್ಯರಿಗೆ ಶೇರ್ಡ್ ಸೈಕೋಟಿಕ್ ಡಿಸಾರ್ಡರ್(shared psychotic disorder) ಎಂಬ ವಿಚಿತ್ರ ಸಮಸ್ಯೆ ಇದ್ದಿರಬಹುದೆಂದು ಅಂದಾಜಿಸಲಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿ ತನ್ನ ಅಭಿಪ್ರಾಯಗಳನ್ನು ಮನೆಯ ಇತರ ಸದಸ್ಯರಿಗೆಲ್ಲ ಹಂಚಿ ಅವರ ಮನಸ್ಸಿನಲ್ಲೂ ಅಂಥದೇ ಭಾವನೆ ಸೃಷ್ಟಿಸುತ್ತಾನೆ.
ದೆಹಲಿಯ ನಿಗೂಢ ಆತ್ಮಹತ್ಯೆಗೆ ಕುಜದೋಷ ಕಾರಣವೇ? ಇಲ್ಲಿದೆ ಉತ್ತರ
ತನ್ನ ಭ್ರಮೆಯನ್ನು ಮನೆಜನರಿಗೆ ಹಂಚಿದ ಲಲಿತ್ ಬಾಟಿಯಾ
ಈ ಪ್ರಕರಣದಲ್ಲಿ ಮನೆಯ ಯಜಮಾನ ಲಲಿತ್ ಬಾಟಿಯಾ ಅವರಿಗೆ ಶೇರ್ಡ್ ಸೈಕೋಟಿಕ್ ಡಿಸಾರ್ಡರ್ ಇದ್ದಿರಬಹುದು. ಹತ್ತು ವರ್ಷದ ಹಿಂದೆ ಸತ್ತಿದ್ದ ತಮ್ಮ ತಂದೆಯೊಂದಿಗೆ ಇಂದಿಗೂ ಕಲ್ಪನೆಯಲ್ಲೇ ಸಂವಾದ ನಡೆಸುತ್ತೇನೆ ಎನ್ನುತ್ತಿದ್ದ ಅವರು, ತಮ್ಮ ಅಭಿಪ್ರಾಯಗಳನ್ನು ಮತ್ತೊಬ್ಬರ ಮನಸ್ಸಿನ ಮೇಲೆ ಹೇರುತ್ತಿದ್ದಿರಬಹುದು.
ಸತ್ತಿದ್ದ ತಂದೆ ಸೂಚನೆ ನೀಡುತ್ತಿದ್ದುದು ಹೇಗೆ?
ಸತ್ತವರು, ಬದುಕಿದ್ದವರಿಗೆ ಸೂಚನೆ ನೀಡುವುದು ಹೇಗೆ? ಯಾವುದೇ ವ್ಯಕ್ತಿಯನ್ನು ತೀರಾ ಹಚ್ಚಿಕೊಂಡಿದ್ದು, ಆತ ನಿಧನರಾದರೆ ಕನಸಲ್ಲಿ ರುವುದು, ಕಲ್ಪನೆಯಲ್ಲಿ ಕಾಡುವುದು ಸತ್ಯ. ಅದು ಮಾನಸಿಕ ಸ್ಥಿತಿ. ಆದರೆ ಸುಶಿಕ್ಷಿತರಾಗಿದ್ದ ಲಲಿತ್ ಬಾಟಿಯಾ 10 ವರ್ಷದ ಹಿಂದೆ ಸತ್ತಿದ್ದ ತಂದೆ ತಮಗೆ ಸೂಚನೆ ನೀಡುತ್ತಾರೆ ಎಂದಿದ್ದು ಮೂಢನಂಬಿಕೆಯೇ ಅಥವಾ ಅವರ ಮಾನಸಿಕ ದೌರ್ಬಲ್ಯದ ಸಂಕೇತವೇ?
ಎಲ್ಲರೂ ಸಾಯುವ ನಿರ್ಧಾರ ಮಾಡಿದ್ದರೇ?
ಅಷ್ಟಕ್ಕು ಇಲ್ಲಿದ್ದ 11 ಜನರೂ ಸಾಯುವ ನಿರ್ಧಾರ ಮಾಡಿದ್ದರೆ? ಕೆಲವು ಮೂಲಗಳ ಪ್ರಕಾರ ಈ ಮೆನಯಲ್ಲಿದ್ದ ಇಬ್ಬರು ಮಕ್ಕಳಿಗೆ ಸಾಯುವುದಕ್ಕೆ ಸುತಾರಾಂ ಇಷ್ಟವಿರಲಿಲ್ಲ. ಅವರನ್ನು ಬಲವಂತವಾಗಿ ನೇಣಿಗೇರಿಸಲಾಗಿತ್ತು! ಅದಕ್ಕೆ ಸಾಕ್ಷಿ ಎಂಬಂತೆ ಅವರ ಕೈ ಮೇಲೆ ಗಾಯದ ಕಲೆಗಳಿವೆ, ಅವರನ್ನು ಒತ್ತಾಯಪೂರ್ವಕವಾಗಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದು ಸ್ಪಷ್ಟವಾಗಿ ತಿಳಿಯುತ್ತದೆ!
ಸಾವನ್ನು ಗೆಲ್ಲುವ ನಂಬಿಕೆಯಲ್ಲಿದ್ದರೇ?
ಈ ಹನ್ನೊಂದು ಜನರ ಮನಸ್ಸಿನಲ್ಲೂ ಸಾಯುವ ಇಚ್ಛೆ ಇದ್ದಂತಿರಲಿಲ್ಲ. ಬದಲಾಗಿ ಅವರು ಸಾಯುವುದಕ್ಕೆಂದು ನೇಣು ಹಾಕಿಕೊಂಡಾಗ ಅವರ ತಂದೆಯೇ ಬಂದು ಅವರನ್ನು ಕಾಪಾಡುತ್ತಾರೆ ಎಂಬ ಅತಿಯಾದ ವಿಶಸ್ವಾಸವನ್ನು ಅವರು ಹೊಂದಿದ್ದರು. ಆದ್ದರಿಂದಲೇ ಇಂಥ ನಿರ್ಧಾರಕ್ಕೆ ಬಂದಿದ್ದರು!
ನೀರು ನೀಲಿ ಬಣ್ಣಕ್ಕೆ ತಿರುಗಿದರೆ...!
ಸಾಯುವ ಮುನ್ನ ಇವರು ಒಂದು ಬೌಲ್ ನಲ್ಲಿ ನೀರನ್ನು ಇಟ್ತಿದ್ದರು. ಲಲಿತ್ ಬಾಟಿಯಾ ಸೂಚನೆ ಇದು! ಈ ನೀರು ಕೆಲವೇ ಕ್ಷಣಗಳಲ್ಲಿ ಬಣ್ಣ ಬದಲಿಸಿ, ನೀಲಿಯಾಗುತ್ತೆ. ಹೀಗೆ ನೀಲಿಯಾದಾಗ ಆಕಾಶ ಬಾಯಿ ಬಿಡುತ್ತೆ, ಭೂಮಿ ನಡುಗುತ್ತೆ, ಗುಡುಗು-ಮಿಂಚು ಎಲ್ಲಾ ಶುರುವಾಗುತ್ತೆ. ಆಗ ದೇವರು ನಮ್ಮನ್ನು ಕಾಪಾಡುವುದುಕ್ಕೆ ಬರುತ್ತಾನೆ ಎಂದು ಈ ಡೈರಿಯಲ್ಲಿ ಬರೆದಿದ್ದರು. ಒಟ್ಟಿನ್ಲಲಿ ಪವಾಡವೊಂದು ನಡೆದು ತಾವು ಬದುಕುತ್ತೇವೆ ಎಂಬ ಪೂರ್ಣ ವಿಶ್ವಾಸದಲ್ಲಿ ಲಲಿತ್ ಬಾಟಿಯಾ ಸೇರಿದಂತೆ ಎಲ್ಲರೂ ಇದ್ದರು!
ತನಿಖೆಗಿರುವ ದಾರಿ ಮಾನಸಿಕ ಅಟಾಪ್ಸಿ!
ಅತ್ಯಂತ ವಿರಳಾತಿವಿರಳ ಪ್ರಕರಣಗಳಲ್ಲಿ ಸೈಕಾಲಾಜಿಕಲ್ ಅಟಾಪ್ಸಿಯನ್ನು ಮಾಡಲಾಗುತ್ತದೆ. ಅಂದರೆ ದೈಹಿಕ ಶವಪರೀಕ್ಷೆ ನಡೆಸಿದಂತೆ, ಮೃತರ ಮಾನಸಿಕ ಅಟಾಪ್ಸಿಯನ್ನು ಸಹ ನಡೆಸಲಾಗುತ್ತೆ. ಅವರ ನಡೆ-ನುಡಿ, ವರ್ತನೆ, ಕೊನೆಯ ದಿನಗಳ ಬಗ್ಗೆ ಅವರ ಸ್ನೇಹಿತರು, ಸಂಬಂಧಿ, ಪರಿಚಿತರ ಬಳಿ ವಿಚಾರಿಸಲಾಗುತ್ತದೆ. ಇದರಿಂದ ಆತ್ಮಹತ್ಯೆಯ ಮನಸ್ಸು ಅವರಲ್ಲಿತ್ತೇ ಇಲ್ಲವೇ ಎಂಬುದು ತಿಳಿಯುತ್ತದೆ. ಈ ಪ್ರಕರಣಕ್ಕೆ ಸಂಬಮಧಿಸಿದಂತೆ ಈಗಾಗಲೇ 200 ಕ್ಕೂ ಹೆಚ್ಚು ಜನರನ್ನು ಪೊಲಿಸರು ವಿಚಾರಣೆ ನಡೆಸಿದ್ದಾರೆ. ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಇದನ್ನು ಆತ್ಮಹತ್ಯೆ ಪ್ರಕರಣ ಎಂದಿದೆ. ಅಂತಿಮ ಮರಣೋತ್ತರ ವರದಿ ಇನ್ನೇನು ಹೊರಬರಲಿದೆ.
ಮದುವೆ ಮನೆಯಲ್ಲಿ ಸಾಮೂಹಿಕ ಮರಣ!
ಈ ಮನೆಯ ಮಗಳು ಪ್ರಿಯಾಂಕಾ ಬಾಟಿಯಾ ಅವರ ಮದುವೆ ನಿಗದಿಯಾಗಿತ್ತು. 33 ವರ್ಷದ ಆಕೆ ರಾತ್ರಿ '11' ಗಂಟೆಯವರೆಗು ತಮ್ಮ ಮದುವೆ ಶಾಪಿಂಗ್ ಬಗ್ಗೆ ಮಾತನಾಡುತ್ತಿದ್ದವರು ಇದ್ದಕ್ಕಿದ್ದಂತೆ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇಕೆ? ಸಾಯುವುದು ಪೂರ್ವ ನಿರ್ಧರಿತವಾಗಿದ್ದರೆ ಆಕೆ ನಿಶ್ಚಿತಾರ್ಥ ಮಾಡಿಕೊಳ್ಳುವ ಅಗತ್ಯವೇನಿತ್ತು ಎಂಬುದೂ ಕಗ್ಗಂಟಿನ ಪ್ರಶ್ನೆಯಾಗಿದೆ! ಜೂನ್ 30 - ಜುಲೈ 1ರ ನಡುವೆ ದೆಹಲಿಯ ಬುರಾರಿ ಎಂಬಲ್ಲಿ ಒಂದು ಮನೆಯಲ್ಲಿ ಒಂದೇ ಕುಟುಂಬದ 11 ಜನರ ಶವ ಪತ್ತೆಯಾಗಿತ್ತು. ಇವುಗಳಲ್ಲಿ 10 ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, 1 ಶವ ಮಾತ್ರ ನೆಲದ ಮೇಲೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.