ವೈದ್ಯರಿಗೆ 1 ಕೋಟಿ ರುಪಾಯಿ ನೆರವು ಘೋಷಿಸಿದ ಅರವಿಂದ್ ಕೇಜ್ರಿವಾಲ್
ಬೆಂಗಳೂರು, ಏಪ್ರೀಲ್ 1: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿ ಮೃತಪಟ್ಟರೆ ಒಂದು ಕೋಟಿ ರುಪಾಯಿ ನೆರವು ನೀಡುತ್ತೇವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿ ಅವರು ಬದುಕುಳಿಯಲು ವೈದ್ಯರು, ವೈದ್ಯಕೀಯ ಸಿಬ್ಬಂದಿಯ ತ್ಯಾಗ ಬಹಳ ದೊಡ್ಡದು. ದೇಶ ಕಾಯುವ ಸೈನಿಕನಷ್ಟೇ ವೈದ್ಯರು ಕೂಡ ಗೌರವ ಹೊಂದಿದ್ದಾರೆ. ಅಂತಹ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕು ತಗುಲಿ ಮೃತಪಟ್ಟರೇ ಅವರ ಕುಟುಂಬದವರಿಗೆ 1 ಕೋಟಿ ರುಪಾಯಿ ನೆರವು ನೀಡುತ್ತೇವೆ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ವೈದ್ಯರ ನಿವೃತ್ತಿ ಅವಧಿ ಎರಡು ತಿಂಗಳು ವಿಸ್ತರಣೆ
ಈ ನೆರವು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಅನ್ವಯ ಆಗುತ್ತೆ. ವೈದ್ಯರು ವೈದ್ಯಕೀಯ ಸಿಬ್ಬಂದಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ದೇಶದಲ್ಲಿ 1637 ಜನರಿಗೆ ಕೊರೊನಾ ಸೋಂಕು ತಗುಲಿದ್ದು 38 ಜನ ಮೃತಪಟ್ಟಿದ್ದಾರೆ. 137 ಜನ ಚೇತರಿಸಿಕೊಂಡಿದ್ದಾರೆ. ಜಗತ್ತಿನಲ್ಲಿ 8 ಲಕ್ಷಕ್ಕೂ ಹೆಚ್ಚು ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದೆಹಲಿಯಲ್ಲಿ 120 ಜನರಿಗೆ ಸೋಂಕು ತಗುಲಿದೆ.