ಮೈಸೂರು: ಸಿಇಒ ಮಿಶ್ರಾ ಪರವಾಗಿ ಪತ್ರ ಸಲ್ಲಿಸಿದ ಪಿಡಿಒ ಸಂಘ
ಮೈಸೂರು, ಆಗಸ್ಟ್ 24: ನಂಜನಗೂಡು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಮೈಸೂರಿನ ಪ್ರಾದೇಶಿಕ ಆಯುಕ್ತರ ಕಾರ್ಯಾಲಯಕ್ಕೆ ತೆರಳಿದ ನೂರಾರು ಸಂಖ್ಯೆಯ ಪಿಡಿಒಗಳು ಪ್ರಾದೇಶಿಕ ಆಯುಕ್ತ ಜಿ.ಸಿ ಪ್ರಕಾಶ್ ಗೆ ಮನವಿ ಪತ್ರ ಸಲ್ಲಿಸಿದರು.
ನಂಜನಗೂಡು ಟಿಹೆಚ್ಒ ಆತ್ಮಹತ್ಯೆ ಪ್ರಕರಣ: ಕೊನೆಗೂ ಮುಷ್ಕರ ಕೈಬಿಟ್ಟ ವೈದ್ಯರು
ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಮೇಲೆ ಆರೋಪ ಹೊರಿಸಿರುವುದನ್ನು ಖಂಡಿಸಿದ ಪಿಡಿಒಗಳು, ತನಿಖೆಯ ವರದಿ ಬರುವ ಮೊದಲೇ ಮಿಶ್ರಾ ಅವರನ್ನು ವರ್ಗಾವಣೆಗೊಳಿಸಿ ಹೊರಡಿಸಿರುವ ಆದೇಶವನ್ನು ರದ್ದು ಪಡಿಸಬೇಕು ಎಂದರು.
ದೂರಿನಲ್ಲಿ ಸಿಇಒ ಮಿಶ್ರಾ ಅವರ ಹೆಸರನ್ನು ಮಾತ್ರ ಸೇರಿಸಲಾಗಿದ್ದು, ಇದರಲ್ಲಿ ಹುನ್ನಾರವಿದೆ. ಮಿಶ್ರಾ ಅವರ ಮೇಲಿನ ಎಫ್ಐಆರ್ ಅನ್ನು ರದ್ದುಪಡಿಸಬೇಕು, ಡಾ.ರವೀಂದ್ರ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣ: ಸಿಇಒ ಮಿಶ್ರಾ ಬೆಂಬಲಕ್ಕೆ ನಿಂತ ಪಿಡಿಒಗಳು
ಪಿಡಿಒಗಳು ಬೃಹತ್ ಪ್ರತಿಭಟನಾ ಜಾಥಾಗೆ ಪೊಲೀಸ್ ಇಲಾಖೆಯಿಂದ ಅನುಮತಿ ಕೋರಿದ್ದರು. ಪೊಲೀಸ್ ಇಲಾಖೆ ಜಾಥಾಗೆ ಅನುಮತಿ ನಿರಾಕರಿಸಿತ್ತು. ಆರು ಮಂದಿ ಪಿಡಿಒಗಳಿಗೆ ಮಾತ್ರ ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲು ಅನುಮತಿ ನೀಡಲಾಗಿತ್ತು. ಆದರೆ ನೂರಾರು ಸಂಖ್ಯೆಯಲ್ಲಿ ಪಿಡಿಒಗಳು ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿದ್ದಾರೆ.
ಪಿಡಿಒಗಳು ಸಾಮೂಹಿಕ ರಜೆ ಹಾಕಿ, ಕಪ್ಪು ಪಟ್ಟಿ ಧರಿಸಿ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾಥ್ ನೀಡಿದ್ದು, ಅವರು ಸಹ ಸಾಮೂಹಿಕ ರಜೆ ಹಾಕಿ ಮನವಿ ಪತ್ರ ಸಲ್ಲಿಸಲು ಆಗಮಿಸಿದ್ದರು.