ದಸರಾದ ಯುವಸಂಭ್ರಮ ಉದ್ಘಾಟಿಸಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಮೈಸೂರು, ಸೆಪ್ಟೆಂಬರ್ 11: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಯುವಕರನ್ನು ಸೆಳೆಯುತ್ತಿದ್ದ ಯುವ ದಸರಾದ ಪೋಸ್ಟರ್ ಇಂದು ಅನಾವರಣಗೊಂಡಿದೆ.
ಮೈಸೂರು ದಸರೆ ಸ್ತಬ್ಧಚಿತ್ರದಲ್ಲಿ ರಾರಾಜಿಸಲಿದ್ದಾರೆ ಪ್ರಧಾನಿ ಮೋದಿ
ಇದೇ ಸೆ.17 ರಿಂದ 25 ರವರಗೆ 9 ದಿನಗಳ ಕಾಲ ನಗರದ ಗಂಗೋತ್ರಿ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.
ಪ್ರತಿ ದಿನ ಸಂಜೆ 5.30ರಿಂದ ನಡೆಯುವ ಯುವ ಸಂಭ್ರಮದಲ್ಲಿ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದಸರೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 278 ಕಾಲೇಜುಗಳು ಭಾಗಿಯಾಗಲಿದ್ದು, ಪ್ರೇಕ್ಷಕರನ್ನು ಮನರಂಜಿಸಲಿವೆ.
ಈ ಬಾರಿಯ ಯುವ ದಸರೆಯನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಉದ್ಘಾಟಿಸಲಿದ್ದು, ಕಿರು ನಾಟಕ, ಏಕಪಾತ್ರಾಭಿನಯ ಸೇರಿದಂತೆ ಮತ್ತಷ್ಟು ಕಲಾ ಪ್ರಕಾರಗಳಿಗೆ ಅವಕಾಶ ನೀಡಲಾಗಿದೆ. ಅಲ್ಲದೇ ಪರಿಸರ ಸಂರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಹುಲಿ ಸಂರಕ್ಷಣೆ, ಮಹಿಳಾ ಸಬಲೀಕರಣ, ವಿಷಯಾಧಾರಿತ ಕಾರ್ಯಕ್ರಮಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿ ತಂಡಗಳಿಗೂ ಕನಿಷ್ಠ 25 ರಿಂದ 50 ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗಿದ್ದು, ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ಯುವದಸರಾದಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ. ದೂರದ ಊರುಗಳಿಂದ ಬರುವ ಕಾಲೇಜು ತಂಡಕ್ಕೆ ಬಸ್, ವಾಸ್ತವ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದ್ದಾರೆ.
ಈ ಬಾರಿ 18 ರಿಂದ 20 ತಂಡಗಳಿಗೆ ಕಾರ್ಯಕ್ರಮ ನೀಡಲು ವೇದಿಕೆ ಕಲ್ಪಿಸಲಾಗಿದೆ. ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್, ಶಾಸಕ ಎಲ್.ನಾಗೇಂದ್ರ, ಎಡಿಸಿ ಪೂರ್ಣಿಮ, ಕಮಿಷನರ್ ಕೆ.ಟಿ.ಬಾಲಕೃಷ್ಣ, ಎಸ್ಪಿ ರಿಷ್ಯಂತ್ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.