ದಲಿತ ಯುವತಿಯ ಗರ್ಭಿಣಿ ಮಾಡಿ ನೇಣಿಗೆ ಶರಣಾದ
ಕೆ.ಆರ್.ಪೇಟೆ, ಏಪ್ರಿಲ್ 21 : ಸವರ್ಣೀಯ ಶ್ರೀಮಂತ ಕುಟುಂಬ ಸೇರಿದ ಯುವಕನೊಬ್ಬ ಕಳೆದ 2 ವರ್ಷಗಳಿಂದ ತಾನು ಪ್ರೀತಿಸುತ್ತಿದ್ದ ದಲಿತ ಯುವತಿಯನ್ನು ಗರ್ಭಿಣಿಯನ್ನಾಗಿಸಿ ವಿವಾಹವಾಗದೇ ನಾಪತ್ತೆಯಾಗಿದ್ದ. ಮಂಗಳವಾರ ರಾತ್ರಿ ತನ್ನ ಗ್ರಾಮದ ಬಳಿಯ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಆತನ ಶವ ಪತ್ತೆಯಾಗಿದೆ.
ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು ಗ್ರಾಮದ ದಿವಂಗತ ಕೃಷ್ಣೇಗೌಡ ಅವರ ಮಗ ನಾಗೇಶ್ (24) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಸಾರಂಗಿ ಗ್ರಾಮದ ದಲಿತ ಯುವತಿಯೊಬ್ಬಳನ್ನು ಕಳೆದ 2 ವರ್ಷದಿಂದ ಪ್ರೀತಿಸುತ್ತಿದ್ದ. ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ನಾಗೇಶನನ್ನು ಐದಾರು ತಿಂಗಳಿಂದಲೂ ಮದುವೆಯಾಗುವಂತೆ ಒತ್ತಾಯ ಮಾಡುತ್ತಾ ಬಂದಿದ್ದಳು. ಅಲ್ಲದೆ ಯುವಕನ ಮನೆಗೆ ತನ್ನ ತಂದೆ-ತಾಯಿಗಳೊಂದಿಗೆ ಹೋಗಿ ತನ್ನ ಮತ್ತು ನಾಗೇಶನ ನಡುವಿನ ದೈಹಿಕ ಸಂಬಂಧಗಳನ್ನು ಆತನ ಪೋಷಕರಿಗೂ ವಿಷಯ ತಿಳಿಸಿ ಬಂದಿದ್ದಳು. ಆದರೂ ನಾಗೇಶ ವಿವಾಹವಾಗದೇ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ. ಗರ್ಭಿಣಿ ಯುವತಿ ಹೆರಿಗೆ ಸಮಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ತಾಳಿಕಟ್ಟಿ ನನ್ನ ಮರ್ಯಾದೆ ಉಳಿಸುವಂತೆ ಕೋರಿದ್ದಳು. [ಮಂಡ್ಯ : ಮೋನಿಕಾಳದ್ದು ಮರ್ಯಾದಾ ಹತ್ಯೆ]
ಇದಕ್ಕೆ ಸ್ಪಂದಿಸದಿದ್ದಾಗ ಆಕೆಯು ಪಟ್ಟಣ ಪೊಲೀಸರಿಗೆ ದೂರು ನೀಡಿ ಪ್ರೀತಿಸಿದ್ದಲ್ಲದೆ ವಿವಾಹವಾಗುವ ಮಾತುಕೊಟ್ಟು ದೈಹಿಕ ಸಂಬಂಧ ಬೆಳೆಸಿ ನನ್ನನ್ನು ಗರ್ಭಿಣಿಯನ್ನಾಗಿಸಿ ಮೋಸ ಮಾಡಿರುವ ನಾಗೇಶನನ್ನು ಪತ್ತೆ ಮಾಡಿ ಆತನನೊಂದಿಗೆ ವಿವಾಹ ಮಾಡಿಸುವಂತೆ ಕಳೆದ ವಾರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿ ಮನವಿ ಮಾಡಿದ್ದಳು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ನಾಗೇಶನಿಗಾಗಿ ಶೋಧ ನಡೆಸಿದ್ದರು. ಇದನ್ನು ತಿಳಿದುಕೊಂಡು ಗ್ರಾಮಕ್ಕೆ ಬಂದಿರುವ ನಾಗೇಶ ಮಂಗಳವಾರ ಸಿಂಧಘಟ್ಟ ಗ್ರಾಮದ ಜಮೀನಿನ ಬಳಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. [ಮತ್ತೆ ದಲಿತ ಮುಖ್ಯಮಂತ್ರಿ ಚರ್ಚೆ ಹುಟ್ಟು ಹಾಕಿದ ಪರಂ]
ಆದರೆ ಇದನ್ನು ಮರ್ಯಾದಾ ಹತ್ಯೆ ಇರಬಹುದೆಂದು ಶಂಕಿಸಲಾಗಿದೆ. ಅಥವಾ ಯಾರೋ ಕೊಲೆ ಮಾಡಿ ನೇಣು ಬಿಗಿದು ಹತ್ಯೆ ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದು ಸಮಗ್ರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ. ಮೃತ ನಾಗೇಶನ ತಾಯಿ ಶಾಂತಮ್ಮ ನೀಡಿದ ದೂರಿನ ಮೇರೆಗೆ ಪಟ್ಟಣ ಪಿಎಸ್ಐ ವಿನಯ್ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. [ಕರ್ನಾಟಕವನ್ನು ತಲ್ಲಣಿಸುವಂತೆ ಮಾಡಿರುವ ಮರ್ಯಾದಾ ಹತ್ಯೆಗಳು]