ಎಚ್.ಡಿ ಕೋಟೆಯಲ್ಲಿ ಹುಲಿ ದಾಳಿಗೆ ಯುವಕ ಸಾವು: ಹೆಚ್ಚಿದ ಆತಂಕ
ಮೈಸೂರು, ಜನವರಿ 23: ಮೈಸೂರು ಜಿಲ್ಲೆಯಲ್ಲಿ ಚಿರತೆ ಹಾಗೂ ಹುಲಿಗಳ ಉಪಟಳ ಹೆಚ್ಚಾಗಿದ್ದು, ಜನರು ವನ್ಯಜೀವಿಗಳ ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಕಾಡಿನಿಂದ ನಾಡಿಗೆ ಬಂದ ವನ್ಯ ಜೀವಿಗಳು ಮೊದಮೊದಲು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದವರು. ಆದರೆ ಈಗ ಜನರ ಮೇಲೆ ದಾಳಿ ಮಾಡುತ್ತಿದ್ದು, ವನ್ಯ ಜೀವಿಗಳ ದಾಳಿಗೆ ಮೈಸೂರಿನಲ್ಲಿ ಯುವಕ ಸಾವನ್ನಪ್ಪಿದ್ದಾರೆ.
ಜಿಲ್ಲೆಯ ತಿ.ನರಸೀಪುರದಲ್ಲಿ ಚಿರತೆಯೊಂದು ಬಾಲಕನನ್ನು ಕೊಂದಿರುವ ಘಟನೆ ಮಾಸುವ ಮುನ್ನವೇ ಇದೀಗ ಎಚ್.ಡಿ.ಕೋಟೆಯಲ್ಲಿ ಹುಲಿಯೊಂದು ಯುವಕನನ್ನು ಬಲಿ ತೆಗೆದುಕೊಂಡಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಬಳ್ಳೆ ಹಾಡಿಯ ಬಿ.ಕಾಳ ಎನ್ನುವವರ ಮಗ ಮಂಜು(18) ಮೃತ ಯುವಕ ಎಂದು ಗುರುತಿಸಲಾಗಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದ ಶ್ರೀ ಮಾಸ್ತಮ್ಮ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಂಜು ಭಾನುವಾರ ಮಧ್ಯಾಹ್ನ ವಸತಿ ಗೃಹದ ಹಿಂಭಾಗದಲ್ಲಿ ಸೌದೆ ತರಲು ಹೋದಾಗ ಹುಲಿ ದಾಳಿ ಮಾಡಿದೆ. ಹುಲಿ ದಾಳಿ ವೇಳೆ ಯುವಕನ ಕೂಗಾಟ ಕೇಳಿದ ಸ್ಥಳೀಯರು, ಮದುವೆಗೆ ಬಂದವರು ಹಾಗೂ ಅರಣ್ಯ ಸಿಬ್ಬಂದಿ ಕೂಗಾಡುತ್ತಾ ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆಗಾಗಲೇ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಹುಲಿ ಕಾಡಿನತ್ತ ಓಡಿ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಳಿಕ ಮರಣೋತ್ತರ ಪರೀಕ್ಷೆಗಾಗಿ ಯುವಕನ ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ರವಾನಿಸಿದ್ದಾರೆ.
ಅರಣ್ಯಾಧಿಕಾರಿ ಮಧು ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದ್ದು ಮೃತ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ''ಕಾಡಿನೊಳಗೆ ಹುಲಿ ದಾಳಿಗೆ ಯುವಕ ಮೃತನಾಗಿರುವುದರಿಂದ ಮೃತನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ಸ್ಥಳಕ್ಕೆ ಇಲಾಖೆಯ ಮೇಲಾಧಿಕಾರಿಗಳು ಭೇಟಿ ನೀಡಲಿದ್ದಾರೆ,'' ಎಂದು ತಿಳಿಸಿದರು.
ಇನ್ನು ಮಂಜು ಮೃತದೇಹ ರವಾನಿಸಲಾದ ಸಾರ್ವಜನಿಕ ಆಸ್ಪತ್ರೆಗೆ ತಹಶೀಲ್ದಾರ್ ಕೆ.ಆರ್.ರತ್ನಾಂಬಿಕಾ ಭೇಟಿ ನೀಡಿ ಮಾಹಿತಿ ಪಡೆದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ನಂದಿನಿ ಟಿ.ವೈ, ಎಸ್ಪಿ ಮಹೇಶ್, ಉಪನಿರೀಕ್ಷಕ ತಮ್ಮೇಗೌಡ ಮತ್ತು ಇತರ ಅಧಿಕಾರಿಗಳು ಭೇಟಿ ಕೊಟ್ಟಿದ್ದರು. ಮೃತರ ಕುಟುಂಬಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಂಗಸ್ವಾಮಿ ಎರಡೂವರೆ ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಿದ್ದು ಮುಂದಿನ ದಿನಗಳಲ್ಲಿ ಉಳಿದ ಹಣವನ್ನು ನೀಡುವ ಭರವಸೆ ನೀಡಿದ್ದಾರೆ.