ಮೈಸೂರು ದಸರಾಗೆ ಕಳೆ... ನಾಳೆಯಿಂದ ಯುವಸಂಭ್ರಮ
ಮೈಸೂರು, ಸೆಪ್ಟೆಂಬರ್ 16: ನಾಡಹಬ್ಬ ದಸರಾಗೆ ಮೈಸೂರು ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಈಗಾಗಲೇ ಹಲವು ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಯುವ ಸಂಭ್ರಮದ ಮೂಲಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ.
ಈ ಬಾರಿಯ ದಸರಾ ಮಹೋತ್ಸವದ ಪ್ರಯುಕ್ತ ಯುವ ಸಂಭ್ರಮವು ಸೆ.17ರಿಂದ 26ರವರೆಗೆ ಒಟ್ಟು ಹತ್ತು ದಿನಗಳ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸರ್ವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಸರಾ ಯುವ ಸಂಭ್ರಮದ ಕುರಿತು ಮಾಹಿತಿ ನೀಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ದಸರಾ ಉಪವಿಶೇಷಾಧಿಕಾರಿ ಸಿ.ಬಿ.ರಿಷ್ಯಂತ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದು, ನಟ ಗೋಲ್ಡನ್ ಸ್ಟಾರ್ ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವುದಾಗಿ ತಿಳಿಸಿದರು.
ದಸರಾದ ಯುವಸಂಭ್ರಮ ಉದ್ಘಾಟಿಸಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್
ಯುವ ಸಂಭ್ರಮ ಕಾರ್ಯಕ್ರಮಕ್ಕೆ ಈ ಬಾರಿ 260 ಕಾಲೇಜು ತಂಡಗಳು ಭಾಗವಹಿಸಿ ಪ್ರದರ್ಶನ ನೀಡಲಿದ್ದು, ಇದೊಂದು ದಾಖಲೆಯ ಪ್ರದರ್ಶನವಾಗಿದೆ. ಕಳೆದ ವರ್ಷ 162 ಕಾಲೇಜು ತಂಡಗಳು ಭಾಗವಹಿಸಿ ನೃತ್ಯ ಪ್ರದರ್ಶನ ನೀಡಿದ್ದವು. ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿರುವುದರಿಂದ ಎಂಟು ದಿನಗಳಿಂದ ಈ ಬಾರಿ ಹತ್ತು ದಿನಗಳಿಗೆ ಹೆಚ್ಚಿಸಲಾಗಿದೆ. ಯುವ ಸಂಭ್ರಮ ಕಾರ್ಯಕ್ರಮವು ಸಂಜೆ 5.30ರಿಂದಲೇ ಆರಂಭವಾಗಲಿದೆ.
ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಪ್ರತಿ ವಿದ್ಯಾರ್ಥಿಗಳಿಗೆ ಕೆಎಸ್ ಆರ್ ಟಿಸಿ ನಿಗದಿಪಡಿಸಿರುವ ವಾಸ್ತವಿಕ ಬಸ್ ಪ್ರಯಾಣ ದರ, ತಾಲೀಮು ವೆಚ್ಚ ತಲಾ 100ರೂ.ನಂತೆ ವಸ್ತ್ರ ವಿನ್ಯಾಸ ವೆಚ್ಚ ತಲಾ 500ರೂ.ನಂತೆ ಕೊರಿಯೋಗ್ರಾಫರ್ ವೆಚ್ಚ ಕಾಲೇಜು ತಂಡವೊಂದಕ್ಕೆ 7,500ರೂ. ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಕಾಲೇಜು ತಂಡಗಳನ್ನು ಆಯ್ಕೆ ಮಾಡಿ ಯುವ ದಸರಾದಲ್ಲಿ ಅವಕಾಶ ನೀಡಲಾಗುತ್ತದೆ.
ಮೈಸೂರು ದಸರಾ; ಸಿಎಂಗೆ ಅಧಿಕೃತ ಆಹ್ವಾನ ನೀಡಿದ ನಿಯೋಗ
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಕಲಾವಿದ ಪಿ.ಕೆ.ರಾಜಶೇಖರ್, ಹಿರಿಯ ಭರತನಾಟ್ಯ ಕಲಾವಿದೆ ಶೀಲ ಶ್ರೀಧರ್, ಪಾಶ್ಚಾತ್ಯ ನೃತ್ಯ ಕಲಾವಿದೆ ಪೂಜಾ ಜೋಷಿ ಸಂತೋಷ್ ಕುಮಾರ್ ಕುಸನೂರು ಮೊದಲಾದವರು ತೀರ್ಪುಗಾರರಾಗಿರಲಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಬರುವ ಕಾಲೇಜು ತಂಡಗಳಿಗೆ ವಸತಿ ಮತ್ತು ಸಾರಿಗೆ ಸೌಲಭ್ಯವನ್ನು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬಯಲು ರಂಗಮಂದಿರದ ಸುತ್ತ ಮುತ್ತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದಾಗಿ ಇದೇ ವೇಳೆ ತಿಳಿಸಿದರು.
ದಸರಾ ಉಪಸಮಿತಿಯ ಕಾರ್ಯಾಧ್ಯಕ್ಷ, ಮೈಸೂರು ಡಿಸಿಸಿ ಬ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ.ಲಿಂಗಣ್ಣಯ್ಯ, ಕೆ.ಜಿ.ಎಸ್ ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ ಉಪಸ್ಥಿತರಿದ್ದು, ಯುವ ಸಂಭ್ರಮದ ಕುರಿತಂತೆ ಮಾಹಿತಿ ನೀಡಿದ್ದಾರೆ.