ಮೈಸೂರಿನಲ್ಲಿ ಕ್ರಿಕೆಟ್ ವಿವಾದಕ್ಕೆ ಯುವಕ ಆತ್ಮಹತ್ಯೆ
ಮೈಸೂರು, ಏಪ್ರಿಲ್ 20: ಕ್ರಿಕೆಟ್ ಆಟದಲ್ಲಿ ಉಂಟಾದ ವಿವಾದದಿಂದ ಯುವಕನೊಬ್ಬ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗೆಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವನನ್ನು ಗೆಜ್ಜನಹಳ್ಳಿ ಗ್ರಾಮದ ಚಿಕ್ಕಬಸವಯ್ಯ ಅವರ ಪುತ್ರ ಚಂದ್ರು (28) ಎಂದು ಗುರುತಿಸಲಾಗಿದ್ದು, ಶನಿವಾರ ಸಂಜೆ ಚಂದ್ರು ಮನೆಯ ಬಳಿ ಸಂತೋಷ್, ಮಂಜು, ನಾಗರಾಜು ಸೇರಿದಂತೆ ಯುವಕರ ಗುಂಪು ಕ್ರಿಕೆಟ್ ಆಟವಾಡುತ್ತಿದ್ದಾಗ ಚೆಂಡು ಬಡಿದು ಚಂದ್ರು ಮನೆಯ ಕಿಟಕಿ ಗಾಜು ಚೂರಾಗಿತ್ತು.
ಇದನ್ನು ಚಂದ್ರು ಸಹೋದರ ಮಹದೇವಸ್ವಾಮಿ ಪ್ರಶ್ನಿಸಿದ್ದಕ್ಕೆ ಸಂತೋಷ್, ಮಂಜು, ನಾಗರಾಜು ಅವರು ತಮ್ಮನ್ನು ಪ್ರಶ್ನಿಸಿದ ಮಹದೇವಸ್ವಾಮಿ, ಆತನ ಪತ್ನಿ ಶಕುಂತಲ ಮತ್ತು ಸಹೋದರ ಸೋಮ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಗಲಾಟೆ ನಡೆದ ಗುಂಪಿನ ಹುಡುಗರು, ದಾರಿಯಲ್ಲಿ ಬಂದು ಚಂದ್ರುನನ್ನು ಸಹ ಅಡ್ಡಗಟ್ಟಿ ಬೆದರಿಕೆ ಹಾಕಿದ್ದಕ್ಕೆ ಮನನೊಂದ ಚಂದ್ರು, ತಮ್ಮ ಜಮೀನಿನ ಬಳಿಯ ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ರಾತ್ರಿಯಾದರೂ ಚಂದ್ರು ಮನೆಗೆ ಬಾರದಿರುವುದನ್ನು ಕಂಡು ಹುಡುಕಾಟ ನಡೆಸಿದಾಗ ಜಮೀನಿನ ಬಳಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಸಹೋದರ ಚಂದ್ರುವಿನ ಆತ್ಮಹತ್ಯೆಗೆ ಸಂತೋಷ್, ಮಂಜು, ನಾಗರಾಜು, ಮಹದೇವ್ ಹಾಗೂ ರಾಜೇಶ್ ಎಂಬುವವರೇ ಕಾರಣವಾಗಿದ್ದು, ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸುವಂತೆ ಮೃತನ ಸಹೋದರ ಮಹದೇವಸ್ವಾಮಿ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.