ಮೈಸೂರಿನಲ್ಲಿ ಕೊಲೆಗೆ ಪ್ರತೀಕಾರವಾಗಿ ಮತ್ತೊಂದು ಕೊಲೆ
ಮೈಸೂರು, ಮೇ 08: ಕಳೆದ ಸೋಮವಾರ ರಾತ್ರಿ ಕ್ಯಾತಮಾರನಹಳ್ಳಿಯಲ್ಲಿ ನಡೆದಿದ್ದ ಸತೀಶ್ ಎಂಬ ಯುವಕನ ಕೊಲೆಗೆ ಪ್ರತೀಕಾರವಾಗಿ ಮತ್ತೊಬ್ಬ ಯುವಕನ ಕೊಲೆ ನಡೆದಿದೆ. ಗುರುವಾರ ರಾತ್ರಿ ಗಾಯತ್ರಿಪುರಂ ಚರ್ಚ್ ರಸ್ತೆಯಲ್ಲಿ ಈ ಕೃತ್ಯ ಎಸಗಲಾಗಿದೆ.
ಕೊಲೆಯಾದ ಯುವಕನನ್ನು ಅಭಿಲಾಷ್ (22) ಎಂದು ಗುರುತಿಸಲಾಗಿದೆ. ಸತೀಶ್ ಕೊಲೆ ಆರೋಪದಲ್ಲಿ ಈಗಾಗಲೇ ಪೊಲೀಸರು ಕಿರಣ ಮತ್ತು ಮಧು ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇವರ ಪೈಕಿ ಕಿರಣ ಎಂಬಾತನ ಸಹೋದರನೇ ಈಗ ಕೊಲೆಯಾಗಿರುವ ಅಭಿಲಾಷ್. ಸತೀಶನ ಸ್ನೇಹಿತರಾದ ಇರ್ಫಾನ್ ಅಲಿಯಾಸ್ ಖಾನ್ ಮತ್ತು ಮಹೇಂದ್ರ ಎಂಬುರು ಕೊಲೆ ಮಾಡಿ ಪರಾರಿಯಾಗಿದ್ದು, ಇವರಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಎಣ್ಣೆ ಪಾರ್ಟಿಯಲ್ಲಿ ನಡೆದಿತ್ತು ಸತೀಶನ ಕೊಲೆ
ಕಿರಣ, ಮಧು ಮತ್ತು ಸತೀಶ್ ಸೋಮವಾರ ರಾತ್ರಿ ಎಣ್ಣೆ ಪಾರ್ಟಿ ಮಾಡಿದ್ದಾಗ, ಸತೀಶನು ಹುಡುಗಿಯೊಬ್ಬಳ ವಿಷಯವನ್ನು ಪ್ರಸ್ತಾಪಿಸಿದ್ದ. ಇದರಿಂದ ಆಕ್ರೋಶಿತರಾದ ಕಿರಣ ಮತ್ತು ಮಧು ಸತೀಶನನ್ನು ಚೂರಿಯಿಂದ ಇರಿದು ಕೊಲೆಗೈದಿದ್ದರು. ಇನ್ನು ಕ್ಯಾತಮಾರನಹಳ್ಳಿಯ ಸತೀಶ್ ನದ್ದು ಬಡ ಕುಟುಂಬವಾಗಿದ್ದು ಮನೆಯಲ್ಲಿ ತಾಯಿ, ಅಕ್ಕ ಮತ್ತು ಸತೀಶ ಮೂವರೇ ಇದ್ದವರು. ಅಕ್ಕ ಇನ್ನೂ ಅವಿವಾಹಿತೆ. ತಾಯಿ ಸ್ವೀಪರ್ ಕೆಲಸ ಮಾಡಿದರೆ, ಸತೀಶ್ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.
ಎಲ್ಲರೂ ಒಂದೇ ಏರಿಯಾದವರು
ಆರೋಪಿಗಳು ಮತ್ತು ಅವರಿಂದ ಹತ್ಯೆಯಾದ ಸತೀಶ್ ಎಲ್ಲರೂ ಒಂದೇ ಏರಿಯಾದ ಅಕ್ಕಪಕ್ಕದ ಬೀದಿಯಲ್ಲೇ ವಾಸವಾಗಿದ್ದು, ಸ್ನೇಹಿತರಾಗೆ ಇದ್ದವರು. ಆರೋಪಿ ಮಧು ಸತೀಶನ ಪರಿಚಯದ ಹುಡುಗಿಯನ್ನು ಪ್ರೀತಿಸುತ್ತಿದ್ದು, ನಂತರ ಆಕೆಯೊಂದಿಗೇ ಕಳೆದ ವರ್ಷ ಓಡಿ ಹೋಗಲು ಪ್ರಯತ್ನಿಸಿದ್ದ. ಆದರೆ ಆ ಹುಡುಗಿ ಅಪ್ರಾಪ್ತೆಯಾದ ಕಾರಣ ಮಧು ವಿರುದ್ಧ ಬಾಲಕಿಯ ಕಡೆಯವರು ಪೋಕ್ಸೊ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು.
ಎರಡಾಗಿದ್ದ ಸ್ನೇಹಿತರ ಗುಂಪು
ಪ್ರಕರಣ ನಡೆದ ನಂತರ ರಾಜಿಯೂ ಆಗಿತ್ತು. ಆನಂತರ ಸತೀಶ್ ಮತ್ತು ಮಧು ಅವರ ನಡುವೆ ವೈಮನಸ್ಯ ಉಂಟಾಗಿ ಒಂದೇ ಸ್ನೇಹಿತರ ಗುಂಪು ಎರಡು ಗುಂಪಾಗಿತ್ತು. ಅಂದಿನಿಂದ ಏರಿಯಾದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಎರಡು ಗುಂಪಿನ ನಡುವೆ ಜಗಳಗಳು ಆಗುತ್ತಿದ್ದವು. ಸೋಮವಾರ ಮಧ್ಯಾಹ್ನ ಆರೋಪಿ ಕಿರಣನ ತಮ್ಮ ಮತ್ತು ಸತೀಶ್ ನಡುವೆ ಸಣ್ಣ ವಿಷಯಕ್ಕೆ ವಾಗ್ವಾದ ನಡೆದಿತ್ತು.
ಅವಾಜ್ ಹಾಕಿದ್ದ ಅಭಿಲಾಶ್
ಈ ವೇಳೆ ಕಿರಣನ ತಮ್ಮ ಸತೀಶನಿಗೆ ನಿಂದು ಜಾಸ್ತಿ ಆಗ್ತಿದೆ ಎಂದು ಅವಾಜ್ ಹಾಕಿ ಹೋಗಿದ್ದ. ಬಳಿಕ ಸೋಮವಾರ ರಾತ್ರಿ ಒಂಬತ್ತು ಗಂಟೆ ವೇಳೆ ಸತೀಶನ ಜತೆ ಪಾರ್ಟಿ ಮಾಡಿದ್ದ ಕಿರಣ ಮತ್ತು ಮಧು ಸತೀಶನನ್ನು ಕೊಲೆ ಮಾಡಿದ್ದರು. ಇದೀಗ ಕಿರಣ್ ಸಹೋದರ ಅಭಿಲಾಷ್ ಕೊಲೆಯಾಗಿರುವುದು ಪ್ರತೀಕಾರಕ್ಕೆ ತಿರುಗಿದಂತಾಗಿದೆ.