ಮದುವೆಗೆ ಅಡ್ಡಿಯಾದರೆಂದು ಜನ ಬಿಟ್ಟು ಹೊಡೆಸಿದಳೆ ಯುವತಿ?
ಮೈಸೂರು, ಅಕ್ಟೋಬರ್ 25: ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಪ್ರಿಯಕರನ ಸಂಬಂಧಿಕರಿಗೆ ಯುವತಿಯೊಬ್ಬಳು ಹೆದರಿಸಿ, ಸುಪಾರಿ ನೀಡಿ ಹಲ್ಲೆ ಮಾಡಿಸಿದ ಘಟನೆ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ಹಾಗೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯುವತಿಯನ್ನು ವಿಚಾರಣೆ ಮಾಡುತ್ತಿದ್ದಾರೆ.
ಶಿವಾಜಿ ರಸ್ತೆಯ ಮುಕ್ತಾರ್ ಹಾಗೂ ಅವರ ಮಗ ಮೋಹಿನ್ ಅಹಮ್ಮದ್ ಮೇಲೆ ಹಲ್ಲೆಯಾಗಿದೆ. ಸದ್ಯಕ್ಕೆ ಅವರಿಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ರಾತ್ರಿ ಗುಂಪೊಂದು ಮನೆಗೆ ನುಗ್ಗಿ ಮುಕ್ತಾರ್ ಹಾಗೂ ಮೋಹಿನ್ ಅಹಮ್ಮದ್ ಮೇಲೆ ಹಲ್ಲೆ ಮಾಡಿ, ಪರಾರಿಯಾಗಿತ್ತು. ಘಟನೆಗೂ ಮುನ್ನ ಮೋಹಿನ್ ಅವರಿಗೆ ಕರೆ ಮಾಡಿದ್ದ ಯುವತಿ ಬೆದರಿಕೆ ಹಾಕಿದ್ದಳು ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.[ರೌಡಿ ಶೀಟರ್ ಗಣೇಶ್ ಹತ್ಯೆ, ಐವರು ಆರೋಪಿಗಳ ಬಂಧನ]
ಈ ಹಲ್ಲೆ ಹಿಂದೆ ಯುವತಿಯ ಕೈವಾಡವಿದೆ ಎಂದು ಆರೋಪಿಸಿರುವ ಕುಟುಂಬ ಧ್ವನಿಮುದ್ರಿಕೆಯೊಂದನ್ನು ಪೊಲಿಸರಿಗೆ ನೀಡಿದೆ. ಹಲ್ಲೆ ವಿಚಾರದಲ್ಲಿ ಯುವತಿಯ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೋಹಿನ್ ಸಂಬಂಧಿ ಯುವತಿಯನ್ನು ಪ್ರೀತಿಸುತ್ತಿದ್ದರು. ಅವರಿಬ್ಬರ ವಿವಾಹಕ್ಕೆ ಮೋಹಿನ್ ವಿರೋಧ ವ್ಯಕ್ತಪಡಿಸಿದ್ದರು.