"17 ಮಂದಿಗೂ ಯಡಿಯೂರಪ್ಪ ಸ್ಥಾನಮಾನ ನೀಡಬೇಕು"; ಎಚ್. ವಿಶ್ವನಾಥ್
ಮೈಸೂರು, ಜನವರಿ 25: ನಿನ್ನೆಯಷ್ಟೆ ವಿದೇಶ ಪ್ರವಾಸದಿಂದ ವಾಪಸ್ ಆದ ಬೆನ್ನಲ್ಲೇ ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಇಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದು, ಈ ಕುರಿತು ಮಾತನಾಡಿರುವ ಮಾಜಿ ಸಚಿವ ಎಚ್.ವಿಶ್ವನಾಥ್, 17 ಮಂದಿಗೂ ಸ್ಥಾನಮಾನ ನೀಡಬೇಕು. ಕೊಡದಿದ್ದರೆ ಮುಂದೆ ನೋಡೋಣ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಬರ್ತಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ
ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ನೀಡುವುದಾಗಿ ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಇಂದು ಪ್ರತಿಕ್ರಿಯಿಸಿದ ಅವರು "ಯಡಿಯೂರಪ್ಪ ಮಾತಿನ ಮೇಲೆ ನಿಲ್ಲುವ ನಾಯಕ. ಕೊಟ್ಟ ಮಾತು ಉಳಿಸಿಕೊಳ್ಳುವ ವಿಶ್ವಾಸವಿದೆ. ನಿಮ್ಮಿಂದಲೇ ಸರ್ಕಾರ ಬಂದಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಬೇಕು" ಎಂದು ಆಗ್ರಹಿಸಿದರು.
ರಾಜ್ಯ ರಾಜಕಾರಣಕ್ಕೆ ಶನಿ ಕಾಟವಂತೆ!
"ಹಿಂದೆ ಹುಣಸೂರಲ್ಲಿ ಬಿಜೆಪಿ ಎಲ್ಲಿತ್ತು? ನಾನು ಸೋತಿರಬಹುದು. ಮೊದಲು 5 ರಿಂದ 6 ಸಾವಿರ ಮತಗಳು ಬರುತ್ತಿದ್ದವು. ಈಗ ನಾನು 54 ಸಾವಿರ ಮತ ಪಡೆದಿದ್ದೇನೆ. ಪಕ್ಷ ಬೆಳೆದಿದೆ. ಈ ನಡುವೆ ಎಲ್ಲಾ 17 ಮಂದಿಗೂ ಸ್ಥಾನಮಾನ ನೀಡಲಿ. ಕೊಡದಿದ್ರೆ ಏನಾಗುತ್ತೆ ಅಂತ ಮುಂದೆ ನೋಡೋಣ" ಎಂದರು. "ಕೇಂದ್ರದಲ್ಲಿ ಅರುಣ್ ಜೇಟ್ಲಿ ಚುನಾವಣೆಯಲ್ಲಿ ಸೋತರೂ ಅವರ ಹಿರಿತನಕ್ಕೆ ಮಣೆ ಹಾಕಿ ಸಚಿವ ಸ್ಥಾನ ನೀಡಿ ಅವರ ಅನುಭವ ಉಪಯೋಗಿಸಿಕೊಂಡಿದ್ದಾರೆ. ಅದರಂತೆ ನಮ್ಮನ್ನೂ ಸಂಪುಟಕ್ಕೆ ಸೇರಿಸಿಕೊಂಡು ನಮ್ಮ ಅನುಭವ ಬಳಸಿಕೊಳ್ಳಲಿ" ಎಂದು ಹೇಳಿದರು.