ಶ್ರೀರಾಮುಲು ಪ್ರಕಾರ ಹುಣಸೂರಿನಲ್ಲಿ "ಟ್ರೆಂಡ್ ಸೆಟರ್" ಯಾರು?
ಮೈಸೂರು, ನವೆಂಬರ್ 26: "ಸಿಎಂ ಯಡಿಯೂರಪ್ಪ ಬಂದು ಹೋದ ಬಳಿಕ ಹುಣಸೂರಿನಲ್ಲಿ ಟ್ರೆಂಡ್ ಸೆಟ್ ಆಗಿದೆ. ನೂರಕ್ಕೆ ನೂರರಷ್ಟು ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ" ಎಂದು ಆರೋಗ್ಯ ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಶ್ರೀರಾಮುಲು, "ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ವಿಶ್ವನಾಥ್ ಗೆಲ್ಲಿಸಲು ರಣತಂತ್ರ ಹೂಡುತ್ತಿದ್ದೇವೆ. ಸಿಎಂ ಯಡಿಯೂರಪ್ಪ ಬಂದು ಹೋದ ಬಳಿಕ ಹುಣಸೂರಿನಲ್ಲಿ ಟ್ರೆಂಡ್ ಸೆಟ್ ಆಗಿದೆ. ನಾವು ಗೆಲ್ಲುತ್ತೇವೆ. ಎಲ್ಲಾ ಶೋಷಿತ ವರ್ಗದವರು ವಿಶ್ವನಾಥ್ ಪರವಾಗಿದ್ದಾರೆ" ಎಂದು ಹೇಳಿದರು.
ಹುಣಸೂರಿಗೆ ನಾನೇ ಅಭ್ಯರ್ಥಿ ಎಂದು ಭಾವಿಸಿ: ಶ್ರೀರಾಮುಲು
ಉಪಚುನಾವಣೆ ಬಳಿಕ ಮಧ್ಯಂತರ ಚುನಾವಣೆ ಬರುತ್ತದೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ಉಪಚುನಾವಣೆ ಬಳಿಕ ಯಾವುದೇ ಮಧ್ಯಂತರ ಚುನಾವಣೆ ಬರುವುದಿಲ್ಲ. ಕಾಂಗ್ರೆಸ್ ಮೂರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿರುತ್ತದೆ. 15 ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಯಾರು ಅರ್ಹರು, ಯಾರು ಅನರ್ಹರು ಎಂಬುದನ್ನು ಉಪಚುನಾವಣೆಯಲ್ಲಿ ಜನರು ತೀರ್ಮಾನ ಮಾಡುತ್ತಾರೆ. ವಿಶ್ವನಾಥ್ ಸರಳ ರಾಜಕಾರಣಿ. ಕಾಂಗ್ರೆಸ್ನವರು ದುಡ್ಡು ಕೊಟ್ಟು ಪ್ರಚಾರ ನಡೆಸುತ್ತಿದ್ದಾರೆ. ಆದರೆ ವಿಶ್ವನಾಥ್ ಆ ರೀತಿ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಹಣದಿಂದ ರಾಜಕಾರಣ ಮಾಡುತ್ತಿದೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಿನ್ನೆ ಮಾಜಿ ಸಚಿವ ಜಿ.ಟಿ.ದೇವೇಗೌಡ ಭೇಟಿ ಮಾಡಿದ ವಿಚಾರವಾಗಿಯೂ ಹೇಳಿಕೊಂಡ ಅವರು, "ಜಿ.ಟಿ.ದೇವೇಗೌಡ ಯಾವುದೇ ರಾಜಕೀಯ ಮಾತನಾಡಿಲ್ಲ. ಚುನಾವಣೆಗೆ ಸಹಜವಾಗಿ ಅವರ ಬೆಂಬಲ ಕೋರಿದ್ದೇನೆ. ಆಂತರಿಕ ವಿಚಾರಗಳನ್ನು ನಾನು ಬಹಿರಂಗವಾಗಿ ಹೇಳುವುದಿಲ್ಲ. ಜಿ.ಟಿ.ದೇವೇಗೌಡ ಮುಂದೊಂದು ದಿನ ಒಂದು ಒಳ್ಳೇ ಮೇಸೆಜ್ ಕೊಡುತ್ತಾರೆ. ಅವರು ಈ ಭಾಗದ ಹಿರಿಯ ರಾಜಕಾರಣಿ. ಬೇರೆ ಪಕ್ಷದವರು ಸಹ ಅವರ ಬೆಂಬಲ ಕೋರಿದ್ದಾರೆ" ಎಂದರು.
ಅಚ್ಚರಿ ಬೆಳವಣಿಗೆ; ದೇವೇಗೌಡ ಭೇಟಿಯಾದ ಶ್ರೀರಾಮುಲು!
ಉಪಚುನಾವಣೆ ಬಳಿಕ ತಮಗೆ ಡಿಸಿಎಂ ಸಿಗುವ ವಿಚಾರ ಕುರಿತು ಮಾತನಾಡಿದ ಶ್ರೀರಾಮುಲು, "ಆ ವಿಚಾರ ನನಗೆ ಗೊತ್ತಿಲ್ಲ. ಜನರು ಶ್ರೀರಾಮುಲುಗೆ ಒಳ್ಳೆ ಸ್ಥಾನ ಸಿಗಬೇಕೆಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಬಿಜೆಪಿ ಒಳ್ಳೆಯದನ್ನು ಮಾಡುತ್ತದೆ" ಎಂದಷ್ಟೇ ಹೇಳಿದರು.