ಸಂಪ್ರದಾಯ ಮುರಿದ ಸಿಎಂ ಯಡಿಯೂರಪ್ಪ: ಮಹತ್ವದ ಪೂಜೆಗೆ ಗೈರಾಗಿದ್ದು ಯಾಕೆ?
ಬೆಂಗಳೂರು, ಡಿ. 14: ಅದು ದಶಕದಲ್ಲಿ ಒಂದು ಅಥವಾ ಎರಡು ಬಾರಿ ಬರುವ ಮಹತ್ವದ ಸಂದರ್ಭ. ಅಂತಹ ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿ ನೆರವೇರಿಸುವುದು ಸಂಪ್ರದಾಯ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರೂ ಮಧ್ಯರಾತ್ರಿ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಆದರೆ ಅದ್ಯಾಕೊ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆ ಮಹತ್ವದ ಪೂಜಾ ಕೈಂಕರ್ಯಕ್ಕೆ ಈ ಸಲ ಗೈರಾಗಿದ್ದಾರೆ. ದೈವಭಕ್ತರಾಗಿರುವ ಸಿಎಂ ಯಡಿಯೂರಪ್ಪ ಅವರ ಈ ನಡೆ ನಿಜಕ್ಕೂ ಕುತೂಹಲ ಮೂಡಿಸಿದೆ.
ಈ ಹಿಂದೆ 2009ರಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಯಡಿಯೂರಪ್ಪ ಅವರು ಮಧ್ಯರಾತ್ರಿ ಅಲ್ಲಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಅದಾದ ಬಳಿಕ 2013ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ಆ ಪ್ರಭಾವಿ ದೇವಸ್ಥಾನಕ್ಕೆ ಯಡಿಯೂರಪ್ಪ ಹೋಗದಿರುವುದಕ್ಕೆ ಕಾರಣ ಏನು? ಯಡಿಯೂರಪ್ಪ ಅವರ ಗೈರು ಹಾಜರಿಯಲ್ಲಿ ಈ ಸಲ ಯಾರು ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಇಲ್ಲದೆ ಸಂಪೂರ್ಣ ಮಾಹಿತಿ.
ತಲಕಾಡಿನಲ್ಲಿ ಪಂಚಲಿಂಗ ದರ್ಶನ: ಪಂಚಲಿಂಗಗಳ ಸಂಕ್ಷಿಪ್ತ ಮಾಹಿತಿ
ಹಿಂದಿನ ಎಲ್ಲ ಮುಖ್ಯಮಂತ್ರಿಗಳೂ ಭಾಗವಹಿಸಿದ್ದ, ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೈರ ಹಾಜರಾಗುವ ಮೂಲಕ, ಸಂಪ್ರದಾಯ ಮುರಿದಿದ್ದಾರೆ. ಈ ಮಹತ್ವದ ಪೂಜಾ ಕೈಂಕರ್ಯಕ್ಕೆ ಸಿಎಂ ಯಡಿಯೂರಪ್ಪ ಅವರು ಗೈರಾಗಲು ಕಾರಣ ಏನು? ಇಲ್ಲಿದೆ ಮಾಹಿತಿ.
ಏಕಕಾಲಕ್ಕೆ ಅಭಿಷೇಕ
ಮೈಸೂರು ಜಿಲ್ಲೆ ತಿ. ನರಸೀಪುರ ತಾಲೂಕು ತಲಕಾಡಿನ ಪಂಚಲಿಂಗದರ್ಶನ ಮಹೋತ್ಸವದ ಮುಖ್ಯ ಕಾರ್ಯಕ್ರಮ ಪಂಚಲಿಂಗ ಪೂಜಾ ಮಹೋತ್ಸವ ಇಂದು (ಡಿ.14) ಮುಂಜಾನೆ 4.30ಕ್ಕೆ ವೃಶ್ಚಿಕ ಲಗ್ನದಲ್ಲಿ ನೆರವೇರಿದೆ.
ಇಂದು ಮುಂಜಾನೆ 4.30ಕ್ಕೆ ವೃಶ್ಚಿಕ ಲಗ್ನದಲ್ಲಿ ಏಕ ಕಾಲಕ್ಕೆ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರ ಅಭಿಷೇಕ ನೆರವೇರಿಸಲಾಯಿತು. ಪ್ರಧಾನ ದೇಗುಲವಾದ ವೈದ್ಯನಾಥೇಶ್ವರನಿಗೆ ಆನಂದ್ ದೀಕ್ಷಿತ್ ಅವರ ನೇತೃತ್ವದಲ್ಲಿ ರುದ್ರ ಪಾರಾಯಣದೊಂದಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿತು.
ಈ ಪುಣ್ಯ ಕಾಲ ಪ್ರತಿ ಸಂವತ್ಸರದಲ್ಲಿ ಬರುವುದಿಲ್ಲ. 3 ರಿಂದ 14 ವರ್ಷದೊಳಗೆ ಒಮ್ಮೆ ಒಂದು ಸಂವತ್ಸರದಲ್ಲಿ ಬರುತ್ತದೆ. ಆಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗುತ್ತದೆ.
ಭಕ್ತರಿಂದ ದರ್ಶನ
ಪಂಚಲಿಂಗ ದರ್ಶನ ದಿನದಂದು ಭಕ್ತರು ನದಿಯಲ್ಲಿ ಮಿಂದು ಐದು ದೇವಾಲಯಗಳಿಗೂ ಭೇಟಿ ನೀಡಿ ಪಂಚಲಿಂಗ ದರ್ಶನ ಮಾಡಿ ಪುನೀತರಾಗುವುದು ವಾಡಿಕೆ. ತಲಕಾಡಿನಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಪಂಚಮುಖಗಳ ಶಿವನನ್ನು ಅರ್ಕೆಶ್ವರ, ಮುಡುಕುತೊರೆ ಮಲ್ಲಿಕಾರ್ಜುನ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದ್ದು, ಈಶಾನ ಮುಖವೇ ಶಿವನ ಪ್ರಧಾನ ಮುಖವಾದಕಾರಣ ವೈದ್ಯಾನಾಥೇಶ್ವರನಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.
ಸಿದ್ದರಾಮಯ್ಯ ಭಾಗವಹಿಸಿದ್ದರು
ಕಳೆದ 2013 ರಲ್ಲಿ ನಡೆದ ಪಂಚಲಿಂಗ ದರ್ಶನದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದರು. ಆಗ ನಡೆದಿದ್ದ 10 ದಿನಗಳ ಉತ್ಸವದಲ್ಲಿ 6-7 ಲಕ್ಷ ಮಂದಿ ರಾಜ್ಯವಲ್ಲದೇ ನೆರೆ ರಾಜ್ಯಗಳಿಂದ ಭಕ್ತರು ದರ್ಶನ ಪಡೆದುಕೊಂಡಿದ್ದರು.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಲಭ್ಯವಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ಮಾಡಿಸಿಕೊಂಡು ದರ್ಶನ ಮಾಡಲು ಸೂಚಿಸಲಾಗಿದೆ. ಜೊತೆಗೆ ಪಂಚಲಿಂಗ ದರ್ಶನದ ವಿಷಯ ಪೂಜೋತ್ಸವ ಕಾರ್ಯಕ್ರಮ ವರ್ಚ್ಯುಯಲ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಸಿಎಂ ಯಡಿಯೂರಪ್ಪ ಗೈರು!
ಮಹಾಭಿಷೇಕ ಬಳಿಕ ಮುಖ್ಯಮಂತ್ರಿಗಳು ಪೂಜಾ ವಿಧಿವಿಧಾನ ನೆರವೇರಿಸುವುದು ವಾಡಿಕೆ. ಇದು ಕಳೆದ 1993ರಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹಿಂದೆ ಎಲ್ಲ ಪಂಚಲಿಂಗ ದರ್ಶನದ ಸಂದರ್ಭದಲ್ಲಿಯೂ ಆಯಾ ಮುಖ್ಯಮಂತ್ರಿಗಳೇ ಪೂಜೆ ಮಾಡಿದ್ದಾರೆ. ಈ ಮೊದಲು 2009ರಲ್ಲಿ ಸಿಎಂ ಯಡಿಯೂರಪ್ಪ ಅವರೇ ಮಧ್ಯರಾತ್ರಿ ಪೂಜೆ ನೆರವೇರಿಸಿದ್ದರು.
ಆದರೆ ಈ ಬಾರಿ ಪಂಚಲಿಂಗ ದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಗಮಿಸಿಲ್ಲ. ಅವರ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಪೂಜೆ ನೆರವೇರಿಸಿದ್ದಾರೆ. ದೈವಭಕ್ತರಾಗಿರುವ ಯಡಿಯೂರಪ್ಪ ಅವರು ಯಾಕೆ ಪಂಚಲಿಂಗ ದರ್ಶನ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದಾರೆ ಎಂಬುದರ ಕಾರಣ ತಿಳಿದು ಬಂದಿಲ್ಲ.