ಮೈಸೂರಿನ ದೇಗುಲಗಳಿಗೆ ಹರಿದು ಬಂದ ಭಕ್ತಸಾಗರ
ಮೈಸೂರು, ಜನವರಿ 02; ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡುವುದರೊಂದಿಗೆ ಒಳಿತಿಗಾಗಿ ಜನರು ಪ್ರಾರ್ಥಿಸುತ್ತಿದ್ದ ದೃಶ್ಯ ಹೊಸ ವರ್ಷದ ಮೊದಲ ದಿನ ಕಂಡುಬಂದಿದೆ. ಮೈಸೂರು ನಗರದಲ್ಲಿರುವ ಸಣ್ಣಪುಟ್ಟ ದೇಗಲಗಳ ಸಹಿತ ಚಾಮುಂಡಿಬೆಟ್ಟ, ನಂಜನಗೂಡು ಸೇರಿದಂತೆ ಪ್ರಮುಖ ದೇವಾಲಯಗಳಲ್ಲಿ ಭಕ್ತರ ನೂಕು ನುಗ್ಗಲು ಕಾಣಿಸಿತು.
ಧನುರ್ಮಾಸದ ಹಿನ್ನಲೆಯಲ್ಲಿ ಮುಂಜಾನೆ 5ಕ್ಕೆ ಸ್ನಾನ ಮಾಡಿ ಮಡಿಯನ್ನುಟ್ಟು ಮಹಿಳೆಯರು, ಮಕ್ಕಳು ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾ ಬರುತ್ತಿದ್ದು, ಹೊಸವರ್ಷದ ಆರಂಭದ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಾಲಯದತ್ತ ಆಗಮಿಸಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು.
ಅಯೋಧ್ಯೆ ದೇವಾಲಯ ಬಳಿ ಭೂ ವಹಿವಾಟು: ಯುಪಿ ಸರ್ಕಾರದಿಂದ ತನಿಖೆಗೆ ಆದೇಶ
ಮುಂಜಾನೆಯೇ ಚಾಮುಂಡಿಬೆಟ್ಟಕ್ಕೆ ಭಕ್ತರು ಪ್ರವಾಹದಂತೆ ಹರಿದು ಬಂದಿದ್ದರು. ಹೊಸ ವರ್ಷದ ಅಂಗವಾಗಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆಗಳು ನಡೆದವು. ಭಕ್ತರು ಕುಟುಂಬ ಸಮೇತ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.
ಡಿಕೆಶಿ ಹಿಂದೂ ಹೌದ, ಅಲ್ಲವಾ ಅನ್ನೋದರ ಬಗೆಗೆ ಸಂಶಯ; ಸಿಟಿ ರವಿ
ಚಾಮುಂಡಿ ಪಾದದ ಮೂಲಕ ಸಾವಿರ ಮೆಟ್ಟಿಲುಗಳನ್ನೇರಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದರು. ಮುಂಜಾನೆಯಿಂದ ಸಂಜೆವರೆಗೂ ಭಕ್ತರು ದೇವಾಲಯಕ್ಕೆ ತೆರಳುತ್ತಿದ್ದು, ಭಕ್ತರು ಯಾವುದೇ ರೀತಿಯ ತೊಂದರೆಯಿಲ್ಲದೆ, ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಲು ಅವಕಾಶ ಮಾಡಿಕೊಡಲಾಗಿತ್ತು.
ಹೊಸ ವರ್ಷ ಹಿನ್ನೆಲೆ: ಕಾಫಿನಾಡಿನ ಗಿರಿಗಳಿಗೆ ಬಂದ ಸಾವಿರಾರು ಪ್ರವಾಸಿಗರು
ಹೊಸ ವರ್ಷ ಪ್ರಾರಂಭ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲವು ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದ್ದರಿಂದ ಪ್ರವಾಸಿಗರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ಇಲ್ಲಿನ ವೀವ್ ಪಾಯಿಂಟ್ಗಳಲ್ಲಿ ಪ್ರಕೃತಿಯ ಸೊಬಗನ್ನು ಸವಿದರು.
ಈ ಹಿಂದೆ ದೇಗುಲದಲ್ಲಿ ಚಾಮುಂಡಿತಾಯಿಯ ದರ್ಶನಕ್ಕೆ ಧರ್ಮ ದರ್ಶನ ಮತ್ತು 100 ರೂಪಾಯಿ ನೀಡಿ ನೇರದರ್ಶನ ಮತ್ತು 30 ರೂ.ಗಳ ದರ್ಶನದ ವ್ಯವಸ್ಥೆ ಇತ್ತಾದರೂ ಹೊಸವರ್ಷಕ್ಕೆ 300 ರೂ.ಗಳ ವಿಶೇಷ ದರ್ಶನ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದರ್ಶನಕ್ಕೆ ಆಕ್ರೋಶ; ದೇಗುಲದ ಆಡಳಿತಾಧಿಕಾರಿ ಯತೀಂದ್ರ ಎಂಬವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಶಾಸಕ ಜಿ. ಟಿ. ದೇವೇಗೌಡರು ಹೇಳಿದ್ದಾರೆ ಎಂದು ಉತ್ತರಿಸಿದ್ದಾರೆ.
ಆದರೆ ಶಾಸಕ ಜಿ. ಟಿ. ದೇವೇಗೌಡರನ್ನು ಸಂಪರ್ಕಿಸಿದಾಗ ಅವರು, "ನನಗೆ ಆ ವಿಷಯ ಗೊತ್ತೇ ಇಲ್ಲ. 300ರೂ. ಮಾಡಿರುವುದು ನನಗೆ ತಿಳಿದಿಲ್ಲ. ನನ್ನ ಜೊತೆ ಆ ಕುರಿತು ಯಾರೂ ಮಾತನಾಡಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಹಣ ವಸೂಲಿ ಮಾಡುವ ಸಲುವಾಗಿ 100 ರೂ.30 ರೂ. ಗಳ ಜೊತೆ 300 ರೂ.ಗಳ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರು ವಿಜಯನಗರ ಒಂದನೇ ಹಂತದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಹೊಸವರ್ಷದ ಪ್ರಯುಕ್ತ ಬೆಳಗಿನ ಜಾವ 4 ಗಂಟೆಯಿಂದಲೇ ಶ್ರೀಯೋಗಾನರಸಿಂಹಸ್ವಾಮಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಭಕ್ತರಿಗೆ ಲಡ್ಡು ಪ್ರಸಾದವನ್ನು ವಿತರಿಸಲಾಯಿತು.
ತಮಿಳುನಾಡಿನ ಶ್ರೀರಂಗಕ್ಷೇತ್ರದಿಂದ, ತಮಿಳುನಾಡಿನ ಮಧುರೈಕ್ಷೇತ್ರದಿಂದ ಹಾಗೂ ಶ್ರೀವಿಲ್ಲಿ ಪುತ್ತೂರು ಎಂಬ ದಿವ್ಯ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪ ಧರಿಸಿ ಸಹಸ್ರನಾಮಾರ್ಚನೆ ಮಾಡಲಾಯಿತಲ್ಲದೆ, ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಯಿತು.
ಇದೇ ವೇಳೆ ದೇವಾಲಯದ ಆವರಣದಲ್ಲಿ ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡನ್ನು ಪ್ರೊ. ಭಾಷ್ಯಂ ಸ್ವಾಮೀಜಿಯವರ ನೇತೃತ್ವದಲ್ಲಿ ವಿತರಿಸಲಾಯಿತು. ವಿಶ್ವವನ್ನು ನಡುಗಿಸಿದ ಕೊರೊನಾ ಆದಷ್ಟು ಬೇಗ ತೊಲಗಿ ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತಾಗಲಿ. ನೂತನ ವರ್ಷದಲ್ಲಿ ಮಳೆ ಬೆಳೆಗಳು ಚೆನ್ನಾಗಿ ಆಗಿ ಎಲ್ಲರ ಮನೆಯಲ್ಲೂ ಸಂತಸ ನೆಲೆಸಲಿ ಎಂದು ಇದೇ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.
ನಂಜನಗೂಡಿಗೆ ಹರಿದು ಬಂದ ಭಕ್ತರು; ನಗರದ ಒಂಟಿಕೊಪ್ಪಲಿನ ವೆಂಕಟೇಶ್ವರಸ್ವಾಮಿ ದೇಗುಲ, ಚಂದ್ರಮೌಳೇಶ್ವರಿ ದೇಗುಲ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ ಹೀಗೆ ನಗರದಲ್ಲಿರುವ ದೇಗುಲಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದವು.
ಇಷ್ಟೇ ಅಲ್ಲದೆ ಇತಿಹಾಸ ಪ್ರಸಿದ್ಧ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೂ ಹೊಸ ವರ್ಷದ ಹಿನ್ನೆಲೆಯಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಬೆಳಿಗ್ಗೆಯಿಂದಲೇ ಭಕ್ತರು ಕಪಿಲಾ ನದಿಯಲ್ಲಿ ಸ್ನಾನ ಮಾಡಿ ಸರದಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರಸ್ವಾಮಿಯ ದರ್ಶನ ಪಡೆದರು.