ಕರ್ನಾಟಕದಲ್ಲಿ ನೈಟ್ ಕರ್ಫ್ಯೂ; ಗೋವಾಗೆ ಹಾರಿದ ಪ್ರವಾಸಿಗರು!
ಮೈಸೂರು, ಡಿಸೆಂಬರ್ 30; ಹೊಸ ವರ್ಷವನ್ನು ವಿನೂತನವಾಗಿ ಪ್ರವಾಸಿ ತಾಣ, ರೆಸಾರ್ಟ್, ಹೋಟೆಲ್ನಲ್ಲಿ ಪಾರ್ಟಿ ಆಚರಿಸಿ ಸ್ವಾಗತಿಸಬೇಕೆಂದುಕೊಂಡಿದ್ದ ಪ್ರವಾಸಿಗರಿಗೆ ನೈಟ್ ಕರ್ಫ್ಯೂ ನಿರಾಸೆ ಉಂಟು ಮಾಡಿದೆ. ಇದರಿಂದ ಮೈಸೂರು ಭಾಗದ ಪ್ರವಾಸಿಗರು ಗೋವಾ ಕಡೆ ಮುಖ ಮಾಡಿದ್ದಾರೆ.
ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ರಾಜ್ಯಗಳು ನೈಟ್ ಕರ್ಫ್ಯೂ ಹೇರಿವೆ. ಕರ್ನಾಟಕದಲ್ಲಿ ಡಿಸೆಂಬರ್ 28ರ ರಾತ್ರಿ 10 ಗಂಟೆಯಿಂದಲೇ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಜನವರಿ 7 ರವರೆಗೆ ಇದು ಮುಂದುವರಿಯುತ್ತದೆ.
ಗೋವಾ; ಹೊಸ ವರ್ಷದ ಪಾರ್ಟಿಗೆ ಸರ್ಕಾರದ ಒಪ್ಪಿಗೆ!
ಮತ್ತೊಂದು ಕಡೆ ಕೇರಳದಲ್ಲೂ ಡಿಸೆಂಬರ್ 30ರಿಂದ ಜನವರಿ 2ರವರೆಗೆ ರಾತ್ರಿ ಓಡಾಟಕ್ಕೆ ನಿಷೇಧ ಹೇರಲಾಗಿದೆ. ಮಹಾರಾಷ್ಟ್ರದಲ್ಲಿ ಡಿಸೆಂಬರ್ 25ರಿಂದಲೇ ರಾತ್ರಿ 9 ಗಂಟೆಯಿಂದಲೇ ಕರ್ಫ್ಯೂ ಜಾರಿಗೆ ಬಂದಿದೆ. ಇನ್ನು ತಮಿಳುನಾಡು ಸರಕಾರ ಡಿಸೆಂಬರ್ 31ರಂದು ಯಾವುದೇ ಪಾರ್ಟಿ, ಸಮಾರಂಭ ಮಾಡಲು ಅನುಮತಿ ಕೊಟ್ಟಿಲ್ಲ.
ಹೊಸ ವರ್ಷಾಚರಣೆಗೆ ಗೋವಾದತ್ತ ಜನರು: ವಿಶೇಷ ರೈಲು ಸಂಚಾರ ಪ್ರಾರಂಭ
ಈ ಎಲ್ಲಾ ಕಾರಣಗಳಿಂದ ಹೆಚ್ಚಿನ ಮಂದಿ ಯಾವುದೇ ನಿರ್ಬಂಧ ಇಲ್ಲದ ಗೋವಾದತ್ತ ತೆರಳುತ್ತಿದ್ದಾರೆ. 10 ಗಂಟೆಯ ನಂತರ ಯಾವುದೇ ಓಡಾಟಕ್ಕೆ ಅನುಮತಿ ಇಲ್ಲ. ವರ್ಷಾಚರಣೆಗೆ ಸಿದ್ಧತೆ ನಡೆಸಿದ್ದ ಹೋಟೆಲ್, ರೆಸಾರ್ಟ್ಗಳು ನಷ್ಟದ ಭೀತಿ ಎದುರಿಸುತ್ತಿವೆ.
ವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿ
ಗೋವಾ ಬೀಚ್ಗಳು ಫುಲ್
ಗೋವಾ ಅಂದರೆ ಸಾಕು ಅದು ಬೀಚ್ಗಳ ತಾಣ. ಗೋವಾದ ಪಣಜಿಯಲ್ಲಿ ಹತ್ತಾರು ಬೀಚ್ಗಳು ಕಣ್ಮನ ಸೆಳೆಯುತ್ತವೆ. ಸದ್ಯ ನಾಗಾರ್ತೋ, ಮೀರಾರ್ಮಾ, ಹರಮಲ್, ಬಾಗಾ, ಕೇರಿ ಸೇರಿದಂತೆ ಎಲ್ಲ ಪ್ರಮುಖ ಬೀಚ್ಗಳು ಪ್ರವಾಸಿಗರಿಂದ ಭರ್ತಿಯಾಗಿದೆ. ಕ್ಯಾಸಿನೊಗಳು ಗಮನ ಸೆಳೆಯುತ್ತಿದ್ದು, ಹೊಸ ವರ್ಷ ಸ್ವಾಗತಕ್ಕೆ ಸಜ್ಜಾಗಿವೆ. ಬೀಚ್ ಹಾಗೂ ಹೋಟೆಲ್ಗಳಲ್ಲಿ ಹೊಸ ವರ್ಷ ಪಾರ್ಟಿ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ.
ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್
ದಕ್ಷಿಣದ ಕಾಶ್ಮೀರ ಎಂದರೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆ ಇದೀಗ ಪ್ರವಾಸಿಗರಿಲ್ಲದೆ ಭಣಗುಡುತ್ತಿದೆ. ಸಾಮಾನ್ಯವಾಗಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ಬಂದರೆ ಸಾಕು ಕೊಡಗಿನಲ್ಲಿ ಸಾಕಷ್ಟು ರೆಸಾರ್ಟ್, ಹೋಂ ಸ್ಟೇ ಸಂಪೂರ್ಣ ಭರ್ತಿ ಆಗುತ್ತವೆ. ಆದರೆ, ಈ ಬಾರಿ ನೈಟ್ ಕರ್ಫ್ಯೂ ಇರುವುದರಿಂದ ಬಹುತೇಕರು ಬುಕ್ಕಿಂಗ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 1,500ಕ್ಕೂ ಹೆಚ್ಚು ಹೋಟೆಲ್ ಬುಕ್ಕಿಂಗ್ ಅನ್ನು ಪ್ರವಾಸಿಗರು ರದ್ದು ಮಾಡಿಕೊಂಡಿದ್ದಾರೆ.
ಪ್ರವಾಸೋದ್ಯಮಕ್ಕೆ ಹೊಡೆತ
ಕಳೆದ 2 ವರ್ಷದಿಂದ ಕೊರೊನಾ ಕಾರಣದಿಂದ ಸರಕಾರ ಸೇರಿದಂತೆ ನಾನಾ ಕ್ಷೇತ್ರಗಳು ನಷ್ಟವನ್ನು ಅನುಭವಿಸಿವೆ. ಇದೀಗ ಸ್ವಲ್ಪಮಟ್ಟಿಗೆ ಜನಜೀವನ ಸಹಜಸ್ಥಿತಿಗೆ ಬರುತ್ತಿತ್ತು. ಆದರೆ, ಇದೀಗ ಮತ್ತೆ ಓಮಿಕ್ರಾನ್ ಆತಂಕ ಮೂಡಿರುವುದರಿಂದ ಲಾಕ್ಡೌನ್ ಭಯ ಮನೆ ಮಾಡಿದೆ. ಅಲ್ಲದೆ, ಪ್ರವಾಸೋದ್ಯಮ ಸೇರಿದಂತೆ ನಾನಾ ಕ್ಷೇತ್ರಕ್ಕೆ ನೈಟ್ ಕರ್ಫ್ಯೂ ಭಾರೀ ಹೊಡೆತ ನೀಡಿದೆ. ಸರಕಾರದ ಕಠಿಣ ನಿಯಮಗಳಿಂದಾಗಿ ಇಲ್ಲಿನ ಉದ್ಯಮಗಳು ಮತ್ತು ಒಟ್ಟಾರೆಯಾಗಿ ರಾಜ್ಯ ದೊಡ್ಡ ಮೊತ್ತದ ಆದಾಯವನ್ನು ಕಳೆದುಕೊಳ್ಳುವಂತಾಗಿದೆ.
ಗೋವಾದಲ್ಲಿ ಬೆಲೆ ದುಬಾರಿ
ಒಮ್ಮೇಲೆ ಯುವ ಸಮೂಹದ ದಂಡು ಗೋವಾ ಕಡೆ ಮುಖ ಮಾಡಿರುವುದರಿಂದ ಸಹಜವಾಗಿಯೇ ಹೋಟೆಲ್ಗಳು ದರ ಏರಿಕೆ ಮಾಡಿವೆ. ಬಿಯರ್ ಬೆಲೆಯೂ ಕೊಂಚ ಹೆಚ್ಚು ಮಾಡಲಾಗಿದೆ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಭಾರತೀಯ ಪ್ರವಾಸಿಗರೇ ಹೆಚ್ಚಿದ್ದಾರೆ.
ಹೊಸ ವರ್ಷ ಆಚರಣೆಗೆ ಪ್ರವಾಸಿಗರ ಹೊಟೇಲ್ ರೂಂ ಬುಕ್ಕಿಂಗ್ ರದ್ದಾಗಿರುವುದರಿಂದ ಟ್ರಾವೆಲ್ಸ್ಗೂ ಸಹ ಹೊಡೆತ ಬಿದ್ದಿದೆ. "ಈ ಹಿಂದೆ ಶೇ. 100ರಷ್ಟು ವಾಹನಗಳು ಬುಕ್ಕಿಂಗ್ ಆಗಿರುತ್ತಿತ್ತು, ಈಗ ಶೇ. 60 ರಷ್ಟು ವಾಹನಗಳು ಖಾಲಿ ಇದೆ" ಎಂದು ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ. ಎಸ್. ಪ್ರಶಾಂತ್ ತಿಳಿಸಿದ್ದಾರೆ.