ವಿದ್ಯುತ್ ಸಂಪರ್ಕ ಕಟ್ ಮಾಡಿದ ಚೆಸ್ಕಾಂ ಅಧಿಕಾರಿಗೆ ಚಳಿ ಬಿಡಿಸಿದ ಯತೀಂದ್ರ ಸಿದ್ದರಾಮಯ್ಯ
ಮೈಸೂರು, ಜನವರಿ 8: ಮುಚ್ರೀ ನಿಮ್ಮ ಬಾಯಿ, ಏನ್ರೀ ನಿಮ್ ಹೆಸ್ರು, You are unfit to be a government servant (ನೀವು ಸರ್ಕಾರಿ ಸೇವೆ ಮಾಡಲು ಯೋಗ್ಯರಲ್ಲ) ಬಾಯ ಮುಚ್ಚಿಕೊಂಡು ಕೇಳ್ರೀ, ಅಧಿಕ ಪ್ರಸಂಗ ಬೇಡ. ತಾಕತ್ ಇದ್ದರೆ ಫ್ಯಾಕ್ಟರಿಗಳಿಗೆ ಹೋಗಿ ವಸೂಲಿ ಮಾಡ್ರಿ, ಶ್ರೀಮಂತರ ಮನೆ ವಿದ್ಯುತ್ ಸಂಪರ್ಕ ಕಟ್ ಮಾಡ್ರಿ ನೋಡ್ತೀನಿ. ಹೀಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ಬೇರೆ ಯಾರು ಅಲ್ಲ, ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ.
Recommended Video
ತುಂಬಿದ ಸಭೆಯಲ್ಲಿ ಚೆಸ್ಕಾಂ ಅಧಿಕಾರಿಯೊಬ್ಬರಿಗೆ ಏರುದನಿಯಲ್ಲಿ ಮಾತಾಡಿ ಬಾಯಿ ಮುಚ್ಚಿಸಿದ್ದಲ್ಲದೆ ಅವಾಜ್ ಹಾಕಿ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶುಕ್ರವಾರದಂದು ನಂಜನಗೂಡು ತಾಲೂಕಿನ ವರುಣಾ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಫುಲ್ ಗರಂ ಆಗಿ ಅಧಿಕಾರಿಯ ಬಾಯಿ ಮುಚ್ಚಿಸಿದ ಪ್ರಸಂಗ ನಡೆಯಿತು.
ಇಂದು ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ವೇದಿಕೆ ಕಾರ್ಯಕ್ರಮಕ್ಕೆ ಬರುತ್ತಿದ್ದಂತೆ ಗ್ರಾಮಸ್ಥರು ಚೆಸ್ಕಾಂ ಅಧಿಕಾರಿ ದೀಪಕ್ ವಿರುದ್ಧ ಕೆಂಡಾಮಂಡಲರಾದರು. ವಿದ್ಯುತ್ ಬಾಕಿ ವಸೂಲಿ ಮಾಡಲು ಸಂಪರ್ಕ ಕಟ್ ಮಾಡಿದ ಅಧಿಕಾರಿಗೆ ಗ್ರಾಮಸ್ಥರು ಶಾಸಕರ ಮುಂದೆಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಅಲ್ಲದೆ ಗ್ರಾಮ ಪಂಚಾಯಿತಿ ಒಂದರ ಬಾಕಿ ಕೋಟಿ ರೂ.ಗೂ ಅಧಿಕವಿದ್ದ ಕಾರಣ ಕಚೇರಿಯ ಸಂಪರ್ಕವನ್ನೂ ಸಹ ಅಧಿಕಾರಿ ಕಟ್ ಮಾಡಿದ್ದರು. ಅಧಿಕಾರಿಯ ಕ್ರಮವನ್ನು ಖಂಡಿಸಿದ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರ ಮುಂದೆ ಅಧಿಕಾರಿ ವಿರುದ್ಧ ಹರಿಹಾಯ್ದರು. ಈ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಹ ದನಿಗೂಡಿಸಿದರು.
ಕೋಟಿ ಕೋಟಿ ಹಣ ಬಾಕಿ ಇದೆ ಸರ್ ಎಂದು ಅಧಿಕಾರಿ ದೀಪಕ್ ಅವಲತ್ತುಕೊಂಡರೂ ಕ್ಯಾರೆ ಎನ್ನದ ಶಾಸಕರು ಗರಂ ಆದರು. ಈ ಮಧ್ಯೆ ಚೆಸ್ಕಾಂ ಕಚೇರಿ ಸೀಜ್ ಮಾಡ್ತೀವಿ ಎಂದು ಜನರು ಶಾಸಕರ ಮುಂದೆಯೇ ಎಚ್ಚರಿಕೆ ಕೊಟ್ಟರು. ಇದರಿಂದಾಗಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ತಮ್ಮ ಸಂಯಮ ಕಳೆದುಕೊಂಡು You are unfit to be a government servent ಎಂದು ಜಾಡಿಸಿದರು.
ಎರಡೂ ಸರ್ಕಾರಿ ಇಲಾಖೆಗಳೇ ಆದ್ದರಿಂದ ಪರಿಹಾರ ಕಂಡುಕೊಳ್ಳಬೇಕು. ಕೋಟಿ ರೂ. ಬಾಕಿ ಇದ್ದರೆ ಏನು ಮಾಡೋಕಾಗುತ್ತೆ, ಕಂತಿನಲ್ಲಿ ವಸೂಲಿ ಮಾಡಿ, ಇಲ್ಲದಿದ್ರೆ ಐನೂರು ರೂ. ಕೊಟ್ರೂ ಸ್ವೀಕರಿಸಬೇಕು ಎಂದು ತಾಕೀತು ಮಾಡಿದರು.
ತಾಕತ್ತಿದ್ರೆ ಫ್ಯಾಕ್ಟರಿಗಳಿಗೆ ಹೋಗಿ ವಸೂಲಿ ಮಾಡಿ, ಶ್ರೀಮಂತರ ಮನೆಗೆ ಹೋಗಿ ಸಂಪರ್ಕ ಕಟ್ ಮಾಡಿ ಎಂದು ಅಧಿಕಾರಿಗೇ ಸವಾಲು ಹಾಕಿದರು. ಅಧಿಕ ಪ್ರಸಂಗ ಮಾಡದೆ ಕಂತಿನಲ್ಲಿ ಕಟ್ಟಿಸಿಕೊಳ್ಳುವಂತೆ ಹಾಕಿದ ಆವಾಜ್ಗೆ ಅಧಿಕಾರಿ ಪ್ರತ್ಯುತ್ತರ ನೀಡದೆ ಮೌನವಾಗಿ ತಲೆತಗ್ಗಿಸಿ ಹೊರನಡೆದರು.
ಒಂದೆಡೆ ವಿದ್ಯುತ್ ಬಾಕಿ ವಸೂಲಿ ಮಾಡುವಂತೆ ಸರ್ಕಾರವೇ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದೆ, ಮತ್ತೊಂದೆಡೆ ಬಾಕಿ ವಸೂಲಿ ಮಾಡಲು ಹೋದರೆ ಜನಪ್ರತಿನಿಧಿಗಳು ಅಡ್ಡಗಾಲು ಹಾಕಿ ತಡೆ ಒಡ್ಡುತ್ತಿದ್ದಾರೆ. ಇಂತಹ ದ್ವಂದ್ವ ನಿಲುವು ಅಧಿಕಾರಿಗಳನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಇಂತಹ ಸಮಸ್ಯೆಗೆ ಪರಿಹಾರ ನೀಡುವರು ಯಾರು? ಎಂಬುದೇ ದೊಡ್ಡ ಪ್ರಶ್ನೆ.