ಅರಮನೆ ಆವರಣದಲ್ಲಿ ಮಗನೊಂದಿಗೆ ಕಾಲ ಕಳೆದ ಯದುವೀರ್ ಒಡೆಯರ್
ಮೈಸೂರು, ಅಕ್ಟೋಬರ್ 28: ದಸರಾ ಹಬ್ಬದ ಆಚರಣೆ ಹಾಗೂ ನವರಾತ್ರಿಯ ಸಾಂಪ್ರದಾಯಿಕ ಆಚರಣೆಗಳನ್ನು ನೆರವೇರಿಸಿದ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿರುವ ರಾಜವಂಶಸ್ಥ ಯದುವೀರ್ ಒಡೆಯರ್ ತಮ್ಮ ಮಗನೊಂದಿಗೆ ಗಜಪಡೆಯ ವೀಕ್ಷಣೆ ಮಾಡಿದರು.
ಪುತ್ರ ಆದ್ಯವೀರ್ ಜೊತೆಗೆ ಕಾರಿನಲ್ಲಿ ಅರಮನೆ ಸುತ್ತಾಡಿದ ಯದುವೀರ್, ದಸರಾ ಗಜಪಡೆಯ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಆಗಮಿಸಿ ಮಗನೊಂದಿಗೆ ಸಂಭ್ರಮದಿಂದ ಕಾಲ ಕಳೆದರು.
ಮೈಸೂರು ದಸರಾ: ಅಭಿಮನ್ಯು ಸಾರಥ್ಯದ ಗಜಪಡೆಗೆ ಆತ್ಮೀಯ ಬೀಳ್ಕೊಡುಗೆ
ಈ ವೇಳೆ ಗಜಪಡೆ ಸಾರಥಿ ಅಭಿಮನ್ಯು ಮುಂದೆ ಫೋಟೋಗೆ ಪೋಸ್ ನೀಡಿದರು. ಅಭಿಮನ್ಯು ಆನೆಯನ್ನು ಮುಟ್ಟಿದ ಯದುವೀರ್ ಪುತ್ರ ಆದ್ಯವೀರ್ ಸಂತಸ ತೋರಿದರು. ಇದಕ್ಕೂ ಮೊದಲು ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆರಳಿದ ಯದುವೀರ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರಮನೆಯಿಂದ ಹೊರಟ ಗಜಪಡೆ: ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಅಭಿಮನ್ಯು ಸಾರಥ್ಯದ ಗಜಪಡೆ ಬುಧವಾರ ನಾಡಿನಿಂದ ಕಾಡಿನತ್ತ ಹೊರಟವು. ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿ ಜಂಬೂಸವಾರಿಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡಿದ್ದ ಗಜಪಡೆಗೆ ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು. ದಸರಾ ಗಜಪಡೆ ಹೊರಡುವ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಪೂಜೆ ನೆರವೇರಿಸಲಾಯಿತು.