ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್; ಯದುವೀರ್ ಒಡೆಯರ್ ಹೇಳೋದೇನು?
ಮೈಸೂರು, ಡಿಸಂಬರ್ 7: ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರಿಗಳ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ.
"ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಕೊಂದವರನ್ನು ಪೊಲೀಸರು ಎನ್ ಕೌಂಟರ್ ನಡೆಸಿದ್ದಾರೆ. ಹೈದರಾಬಾದ್ ಪೊಲೀಸರ ಈ ಕ್ರಮವನ್ನು ಟೀಕಿಸುವುದು ಸರಿಯಲ್ಲ" ಎಂದಿದ್ದಾರೆ.
ಸಮಾಧಾನ ತಂದಿದೆ ಎಂದ ಯದುವೀರ್
"ಇಂತಹ ಘಟನೆಗಳು ಯಾರಿಗೂ ಸಂತೋಷವನ್ನು ತರುವುದಿಲ್ಲ. ಆದರೆ ಸಮಾಧಾನ ಆಗಿದೆ. ಹೈದರಾಬಾದ್ ಪೊಲೀಸರು ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಂಡಿದ್ದಾರೆ. ಪ್ರಕರಣ ಮಹಜರು ವೇಳೆ ಈ ಘಟನೆ ನಡೆದಿದೆ. ಹಾಗಾಗಿ ಆ ಸಂದರ್ಭದಲ್ಲಿ ಅವರು ಎನ್ಕೌಂಟರ್ ಮಾಡಿದ್ದಾರೆ" ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹೈದರಾಬಾದ್: ಎನ್ಕೌಂಟರ್ ನಕಲಿ ಎಂದಾದಲ್ಲಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ಕಟ್ಟಿಟ್ಟಬುತ್ತಿ
ಕಾನೂನು ಮೂಲಕ ಶಿಕ್ಷೆ ಆಗಲಿ ಅನ್ನುವ ಆಶಯ
"ನಮ್ಮೆಲ್ಲರಿಗೂ ಕಾನೂನಿನ ಮೂಲಕವೇ ಎಲ್ಲವೂ ಬಗೆಹರಿಯಬೇಕು ಎಂಬ ಆಸೆ ಇದೆ. ಈಗ ಆಗಿರುವುದು ಕಾನೂನು ಪ್ರಕಾರ ಆಗಿದ್ದರೆ ಅದು ತಪ್ಪಲ್ಲ. ರಾಜರ ಕಾಲಕ್ಕೂ, ಇಂದಿನ ಕಾಲಕ್ಕೂ ವ್ಯತ್ಯಾಸ ಇದೆ. ಕಾನೂನು ಬದಲಾವಣೆಗಿಂತ ತ್ವರಿತವಾಗಿ ಕಾನೂನಿನ ಮೂಲಕ ಶಿಕ್ಷೆಯಾಗಲಿ ಅನ್ನುವುದು ನಮ್ಮ ಆಶಯ" ಎಂದು ತಿಳಿಸಿದರು.
ದೇಶಾದ್ಯಂತ ಮೆಚ್ಚುಗೆ
ಹೈದರಾಬಾದ್ ನಲ್ಲಿ ಅತ್ಯಾಚಾರಿಗಳ ಎನ್ ಕೌಂಟರ್ ಆಗುತ್ತಿದ್ದಂತೆ ದೇಶಾದ್ಯಂತ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಎನ್ ಕೌಂಟರ್ ನ ನೇತೃತ್ವ ವಹಿಸಿದ್ದ ಹೈದರಾಬಾದ್ ಪೊಲೀಸ್ ವಿಶ್ವನಾಥ್ ಸಜ್ಜನರ್ ಅವರ ಕಾರ್ಯಕ್ಕೆ ಎಲ್ಲೆಡೆಯೂ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ ಅತ್ಯಾಚಾರಿಗಳನ್ನು ಹೀಗೆ ಎನ್ ಕೌಂಟರ್ ಮೂಲಕ ಸಾಯಿಸಿದ್ದಕ್ಕೆ ವಿರೋಧವೂ ವ್ಯಕ್ತವಾಗಿತ್ತು.
ಮೃತದೇಹ ಸ್ವೀಕರಿಸಲು ಒಪ್ಪದ ಕುಟುಂಬದವರು: ಪೊಲೀಸರಿಂದಲೇ ಅಂತ್ಯಸಂಸ್ಕಾರ ಸಾಧ್ಯತೆ
ಡಿಸೆಂಬರ್ 9ರವರೆಗೆ ಅಂತ್ಯಸಂಸ್ಕಾರ ಮಾಡದಂತೆ ಸೂಚನೆ
ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಕ್ಕೆ ಅಲ್ಲಲ್ಲಿ ಅಪಸ್ವರವೂ ಕೇಳಿಬರುತ್ತಿದೆ. ಜನಾಕ್ರೋಶಕ್ಕೆ ಮಣಿದು ಪೊಲೀಸರು ಈ ಎನ್ ಕೌಂಟರ್ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ಎನ್ ಕೌಂಟರ್ ವಿರುದ್ಧ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಡಿಸೆಂಬರ್ ಒಂಬತ್ತರವರೆಗೆ ಆರೋಪಿಗಳ ಶವಗಳನ್ನು ಸಂರಕ್ಷಿಸಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ, ಯಾವ ಕಾರಣಕ್ಕಾಗಿ ಎನ್ ಕೌಂಟರ್ ಅನಿವಾರ್ಯವಾಯಿತು ಎನ್ನುವುದು ಸಜ್ಜನರ್ ತಂಡ ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕಿದೆ.