ಮೈಸೂರು ಚಾಮುಂಡೇಶ್ವರಿ ರಥೋತ್ಸವಕ್ಕೆ ಯದುವೀರ್ ಚಾಲನೆ
ಮೈಸೂರು, ಅಕ್ಟೋಬರ್ 5 : ನಾಡ ಅಧಿದೇವತೆ ಎಂದೇ ಪೂಜಿಸಲ್ಪಡುವ ಚಾಮುಂಡೇಶ್ವರಿಗೆ ಇಂದು(ಅಕ್ಟೋಬರ್ 5) ಚಾಮುಂಡಿಬೆಟ್ಟದಲ್ಲಿ ಅದ್ಧೂರಿ ರಥೋತ್ಸವ ನಡೆಯಿತು.
56 ವರ್ಷಗಳ ನಂತರ ಮೈಸೂರು ಅರಮನೆಯಲ್ಲಿ ಜೋಜೋಲಾಲಿ
ಸುಸೂತ್ರವಾಗಿ ದಸರಾ ಆಚರಣೆ ನಂತರ ಚಾಮುಂಡಿಗೆ ಪೂಜೆ ಸಲ್ಲಿಸುವ ಸಲುವಾಗಿ ನಡೆಯುವ ರಥೋತ್ಸವದಲ್ಲಿ ಯದುವಂಶದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿದ್ದರು. ಮುಂಜಾನೆಯೇ ಬೆಟ್ಟಕ್ಕೆ ಆಗಮಿಸಿ ತಾಯಿಗೆ ಪೂಜೆ ಸಲ್ಲಿಸಿದ್ದು, ಬೆಳಿಗ್ಗೆ 8.05 ರ ತುಲಾ ಲಗ್ನದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೈಸೂರು ದಸರಾ: ಪೊಲೀಸ್ ಬ್ಯಾಂಡ್ ಗೆ ತಲೆದೂಗಿದ ಯದುವೀರ್ ದಂಪತಿ
ರಥ ಎಳೆದು ರಥೋತ್ಸವಕ್ಕೆ ಚಾಲನೆ ನೀಡಿದ ಯದುವೀರ ರಥದಲ್ಲಿನ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ರಥ ಚಲಿಸುತ್ತಿದ್ದಂತೆ ಹರ್ಷೋದ್ಘಾರದಿಂದ ಜೈಕಾರ ಹಾಕಿದರು. ರಾಜಮಾತೆ ಪ್ರಮೋದಾದೇವಿ ಒಡೆಯರ್ ದೂರದಿಂದಲೇ ರಥೋತ್ಸವ ವೀಕ್ಷಿಸಿದರು. ಪ್ರಧಾನ ಅರ್ಚಕರು ರಾಜವಂಶಸ್ಥರಿಗೆ ಮಹಾಮಂಗಳಾರತಿ ನೀಡಿ ಆಶೀರ್ವಾದ ಮಾಡಿದರು.
ರಾಜಮನೆತನದ ಸಂಪ್ರದಾಯದಂತೆ ಮಹಾರಥೋತ್ಸವ
ರಥೋತ್ಸವ ಆರಂಭವಾಗುತ್ತಿದ್ದಂತೆ ಕುಶಾಲತೋಪು ಸಿಡಿಸಿ ಚಾಮುಂಡಿಗೆ ಗೌರವ ಅರ್ಪಿಸಲಾಯಿತು. ಪೊಲೀಸರು 21 ಸುತ್ತು ಕುಶಾಲತೋಪು ಸಿಡಿಸಿದರು. ನಂತರ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ ರಾಜಮನೆತನದ ಸಂಪ್ರದಾಯದಂತೆ ಇಂದು ಮಹಾರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ಬೆಟ್ಟದಲ್ಲಿ ದೀಪೋತ್ಸವ ನಡೆದ ಮೇಲೆ ನಮ್ಮ ದಸರಾ ಸಮಾಪ್ತಿಯಾಗಲಿದೆ.ಈ ಬಾರಿ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿವೆ. ಹೀಗಾಗಿ ಚಾಮುಂಡಿಗೆ ಪೂಜೆ ಸಲ್ಲಿಸಿದ್ದೇವೆ. ಈ ಪೂಜೆಯ ಮೂಲಕ ರಾಜ್ಯದಲ್ಲಿ ಮಳೆ ಬೆಳೆಯಾಗಿ ರಾಜ್ಯದ ಜನರು ಸುಭಿಕ್ಷೆಯಿಂದ ಜೀವನ ನಡೆಸಲಿ ಎಂದರು.
ದಸರಾ ಯಾವ ವಿಘ್ನವಿಲ್ಲದೆ ನೇರವೇರಿದ್ದಕ್ಕೆ ಸಂತೋಷ
ಯದುವೀರ್ ಮಾತನಾಡಿ ದಸರಾ ಯಶಸ್ವಿಯಾಗಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದ್ದೇವೆ. ದಸರಾದಲ್ಲಿ ಎಲ್ಲ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನೇರವೇರಿವೆ. ದಸರಾ ಸುಸೂತ್ರವಾಗಿ ನೆರವೇರಿದ್ದು ಸಂತೋಷ ತಂದಿದೆ ಎಂದರು.
ತ್ರಿಷಿಕಾ ಸೀಮಂತ ಯಶಸ್ವಿಯಾಗಿ ನೆರವೇರಿದೆ
ಇದೇ ವೇಳೆ ಮಾತನಾಡಿದ ರಾಜ ಯದುವೀರ್ , ತ್ರಿಷಿಕಾಕುಮಾರಿಯವರ ಸೀಮಂತ ಯಶಸ್ವಿಯಾಗಿ ನೆರವೇರಿದೆ. ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಸೀಮಂತ ಕಾರ್ಯಕ್ರಮ ನಡೆಯುವುದಿಲ್ಲ. ಸೀಮಂತ ಕಾರ್ಯಕ್ರಮದ ಬಗ್ಗೆ ಒಂದಷ್ಟು ಜನರು ತಪ್ಪಾಗಿ ಗ್ರಹಿಸಿಕೊಂಡಿದ್ದಾರೆ. ಜನರು ತಿಳಿದುಕೊಂಡಿರುವಂತೆ ರಾಜಮನೆತನದ ಸೀಮಂತ ನೆರವೇರುವುದಿಲ್ಲ. ಅದು ತೀರಾ ಖಾಸಗಿಯಾಗಿರುವುದರಿಂದ ಇಲ್ಲಿ ಆ ಬಗ್ಗೆ ಮಾತನಾಡುವುದಿಲ್ಲ. ಆದರೂ ಸೀಮಂತ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ ಎಂದು ತಿಳಿಸಿದರು.
ಗೂಳಿಯಿಂದಾಗಿ ಆತಂಕದ ವಾತಾವರಣ
ಚಾಮುಂಡೇಶ್ವರಿ ದೇವಿಯ ರಥೋತ್ಸವ ಆರಂಭವಾಗುವ ಸಮಯದಲ್ಲಿ ಜನಜಂಗುಳಿಯ ಮಧ್ಯೆ ಭಾರೀ ಗಾತ್ರದ ಗೂಳಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ಗುರುವಾರ ನಡೆದಿದೆ. ಗೂಳಿ ನುಗ್ಗಿದ ರಭಸದಿಂದಾಗಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ. ಬಳಿಕ ಜನಜಂಗುಳಿಯನ್ನು ಭೇದಿಸಿಕೊಂಡು ಗೂಳಿ ಕಣ್ಮರೆಯಾಗಿದೆ. ನಂತರ ಯಾವುದೇ ಅಡೆ ತಡೆಗಳಿಲ್ಲದೇ ಚಾಮುಂಡೇಶ್ವರಿಯ ರಥ ಸಾಗಿ ಬಂದಿದ್ದು, ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.